ಮಂಗಳೂರು | ಮನೆಗೆ ಬಾಡಿಗೆಗೆ ಬಂದ ವಿಚ್ಛೇದಿತ ಮಹಿಳೆ ಮೇಲೆ ಮನೆ ಓನರ್ ನಿಂದಲೇ ಅತ್ಯಾಚಾರ

ಮದುವೆ ಆಗಿ ವಿಚ್ಛೇದನವಾದ ಮಹಿಳೆಯ ಮೇಲೆ ರೂಮ್ ಮಾಲಿಕ ಅತ್ಯಾಚಾರ ನಡೆಸಿದ್ದು, ನಂತರ ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕೂಳೂರು ನಿವಾಸಿ ಪ್ರಶಾಂತ್ ಅಪ್ಪು ಪ್ರಕರಣದ ಆರೋಪಿ ಎಂದು ತಿಳಿದು ಬಂದಿದೆ. ಈ ಬಗ್ಗೆ ನಗರದ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ:
ಮಹಿಳೆಯೊಬ್ಬರು ತನ್ನ ಗಂಡನಿಗೆ ವಿಚ್ಛೇದನ ನೀಡಿದ ಬಳಿಕ ತಂದೆ-ತಾಯಿ ಜತೆ ವಾಸಿಸುತ್ತಿದ್ದರು. ಎರಡು ತಿಂಗಳ ಹಿಂದೆ ಪ್ರತ್ಯೇಕ ಮನೆ ಮಾಡುವ ಉದ್ದೇಶದಿಂದ ಬಾಡಿಗೆ ಮನೆಯನ್ನು ಹುಡುಕುತ್ತಿದ್ದು, ಬೆಂಗರೆ ಕೂಳೂರು ನಿವಾಸಿ ಪ್ರಶಾಂತ್ ಅಪ್ಪು ಎಂಬುವರಿಂದ ಬಾಡಿಗೆ ಮನೆ ಪಡೆದಿದ್ದರು.

ಇದಾದ ಬಳಿಕ ತನ್ನ ಬಟ್ಟೆಗಳನ್ನು ರೂಮ್‌ನಲ್ಲಿ ಇಟ್ಟು ಬಂದಿದ್ದು, ಮಹಿಳೆಗೆ ಜ್ವರ ಬಂದಿದ್ದ ಕಾರಣ ಬಾಡಿಗೆ ಮನೆಗೆ ತೆರಳಲಿಲ್ಲ. ಈ ಸಂದರ್ಭ ಆರೋಪಿ ಎಡೆಬಿಡದೆ ಫೋನ್ ಮಾಡಿ ‘ಬಟ್ಟೆಗಳನ್ನು ವಾಪಾಸ್ ತೆಗೆದುಕೊಂಡು ಹೋಗಿ’ ಎಂದು ತಿಳಿಸಿದ್ದಾನೆ. ಮೊದಲೇ ಯೋಚನೆಯಿಂದಿದ್ದ ಆರೋಪಿ, ಬಟ್ಟೆಗಳನ್ನು ಕುಂಟಿಕಾನ ಬಳಿ ತಂದು ನೀಡುವುದಾಗಿ ಜೂ.8ರಂದು ಹೇಳಿದ್ದಾನೆ. ಅಲ್ಲಿಗೆ ಕಾರಿನಲ್ಲಿ ಬಂದು ಬಟ್ಟೆ ತರಲು ಮಹಿಳೆ ಹೋದಾಗ ‘ಬಟ್ಟೆ ಬಿಟ್ಟು ಬಂದಿದ್ದೇನೆ, ನೀನು ಬಂದು ತೆಗೆದುಕೊಂಡು ಹೋಗು’ ಎಂದು ತನ್ನದೇ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ.

ಮೊದಲೇ ಸಂಚು ಮಾಡಿದ್ದ ಆತ, ಮನೆಗೆ ತೆರಳುವ ಒಳರಸ್ತೆಗೆ ಕಾರನ್ನು ಚಲಾಯಿಸಿ ಜನಸಂಚಾರವಿಲ್ಲದ ಜಾಗದಲ್ಲಿ ಅತ್ಯಾಚಾರ ನಡೆಸಿದ್ದಾನೆಂದು ಮಹಿಳೆ ದೂರಿದ್ದಾರೆ. ಇದಾದ ಕೆಲ ದಿನಗಳ ನಂತರ ಆರೋಪಿ ಮಹಿಳೆಗೆ ಕರೆ ಮಾಡಿ ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಮಹಿಳೆ ನಿರಾಕರಿಸಿದಾಗ, ಮದುವೆಯಾಗದಿದ್ದಲ್ಲಿ ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

Leave A Reply

Your email address will not be published.