ಯಡಿಯೂರಪ್ಪ ರಾಜಿನಾಮೆ ಮುಂದೂಡಿಕೆ ? | ಕುತೂಹಲ ಕೆರಳಿಸಿದೆ ನಾಯಕತ್ವ ಬದಲಾವಣೆ ವಿಚಾರ

ಮುಖ್ಯಮಂತ್ರಿ ಯಡಿಯೂರಪ್ಪ ರಾಜಿನಾಮೆ ನೀಡುವ ಕುರಿತಂತೆ ಬಿಜೆಪಿ ಪಾಳಯದಲ್ಲಿ ಹಾಗೂ ಕರ್ನಾಟಕದ ಜನತೆಯಲ್ಲಿ ಕುತೂಹಲ ಮುಂದುವರಿದಿದೆ.

ನಿರೀಕ್ಷೆಯಂತೆ ರವಿವಾರ ವರಿಷ್ಠರಿಂದ ಸಂದೇಶ ಬರುವ ನಿರೀಕ್ಷೆ ಇರುವುದಾಗಿ ಬಿಎಸ್‌ವೈ ಹೇಳಿದ್ದರು. ಆದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಭಾನುವಾರ ಅವರು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಸಮೀಕ್ಷೆ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ರಾಜಿನಾಮೆ ಮುಂದೂಡಿಕೆಯಾಗುತ್ತದೆಯೇ ಎಂಬ ಪ್ರಶ್ನೆಯೂ ಮೂಡಿದೆ.

ಮುಖ್ಯಮಂತ್ರಿ ಬದಲಾವಣೆಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳದ ಯಡಿಯೂರಪ್ಪ ತಮ್ಮ ಆಡಳಿತಾತ್ಮಕ ಕರ್ತವ್ಯದಲ್ಲಿ ನಿರತರಾಗಿದ್ದಾರೆ.
ಪ್ರಕೃತಿ ವಿಕೋಪದ ಸಮಯದಲ್ಲಿ ಬಿಜೆಪಿ ವರಿಷ್ಠರು ಯಾವ ರೀತಿ ನಡೆದುಕೊಳ್ಳಲಿದ್ದಾರೆ ಎಂಬುದು ಕುತೂಹಲ.
ವರಿಷ್ಟರು ಏನೇ ಸೂಚನೆ ಕೊಟ್ಟರೂ ಯಡಿಯೂರಪ್ಪ ಅವರು ರಾಜಿನಾಮೆ ನೀಡದಿದ್ದರೆ ಯಾವ ಬದಲಾವಣೆಯನ್ನೂ ಮಾಡಲಾಗದು.ಒಂದು ವೇಳೆ ಒತ್ತಡ ಹೇರಿದರೆ ಮುಂದಿನ ಮುಖ್ಯಮಂತ್ರಿ ವಿಶ್ವಾಸ ಮತಯಾಚನೆಯ ಸಮಯ ಬಂದರೆ ಬಿಜೆಪಿ ಸರಕಾರ ಪತನವಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.ಬಿಎಸ್‌ವೈ ಪರ ಇರುವ ಶಾಸಕರು ವಿಶ್ವಾಸ ಮತಯಾಚನೆ ವೇಳೆ ಗೈರಾದರೆ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಲಿದೆ.ಅಲ್ಲದೆ ವಲಸಿಗ ಶಾಸಕರ ನಡೆ ಕೂಡ ಸರಕಾರದ ಅಳಿವು-ಉಳಿವಿನಲ್ಲಿ ನಿರ್ಣಾಯಕವಾಗಲಿದೆ.

ಹೀಗಾಗಿ ಈ ವಿಚಾರದಲ್ಲಿ ವರಿಷ್ಠರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದು, ಯಡಿಯೂರಪ್ಪ ಅವರಿಗೆ ಇನ್ನಷ್ಟು ದಿನ ಮುಂದುವರಿಯಲು ಅವಕಾಶ ದೊರೆಯಬಹುದು ಎಂಬ ಆಶಾಭಾವನೆ ಅವರ ಆಪ್ತ ವಲಯದ್ದು.

ಕರ್ನಾಟಕ ನಾಯಕತ್ವ ಬದಲಾವಣೆ | ಮುಖ್ಯಮಂತ್ರಿ ಹುದ್ದೆಗೆ ದತ್ತಾತ್ರೇಯ ಹೊಸಬಾಳೆ ಆಯ್ಕೆಯಾಗುತ್ತಾರ ?

Leave A Reply

Your email address will not be published.