ಎಟಿಎಂ ಗೆ ಹಣ ತುಂಬಿಸುವ ವಾಹನಕ್ಕೆ ಟ್ರಕ್ ಡಿಕ್ಕಿ | ಬೆಳ್ತಂಗಡಿಯ ಯುವಕ ವ್ಯಕ್ತಿ ಸಹಿತ ಇಬ್ಬರು ಸಾವು

ಕೇರಳದ ಕಣ್ಣೂರು ಜಿಲ್ಲೆಯ ಪೆರಿಯಾರು ಸಮೀಪ ಜು.23 ರಂದು ನಡೆದ ರಸ್ತೆ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ವ್ಯಕ್ತಿ ಸಹಿತ ಇಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಕುಂಟಿನಿ ನಿವಾಸಿ ಜಯಪ್ರಕಾಶ್ ಕುಲಾಲ್(45.ವ) ಎಂಬವರು ಸ್ಥಳದಲ್ಲೇ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮಂಗಳೂರು ಐ.ಸಿ.ಐ.ಸಿ.ಐ ಖಾಸಗಿ ಬ್ಯಾಂಕಿನ ವಾಹನ ಚಾಲಕರಾಗಿದ್ದ ಜಯಪ್ರಕಾಶ್ ರವರು ಕೇರಳ ರಾಜ್ಯದ ಎಟಿಎಂಗಳಿಗೆ ಹಣವನ್ನು ತುಂಬಿಸುವ ಸಲುವಾಗಿ ಜು.23 ರಂದು ಸಂಸ್ಥೆಯ ಟಾಟಾ ಎಸ್ ವಾಹನವನ್ನು ಚಲಾಯಿಸುತ್ತಿದ್ದ ವೇಳೆ ಕಣ್ಣೂರು ಜಿಲ್ಲೆಯ ಪೆರಿಯಾರು ಸಮೀಪ ಅತೀ ವೇಗವಾಗಿ ಬರುತ್ತಿದ್ದ ಕೇರಳ ನೊಂದಾಯಿತ ಟ್ರಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಟಾಟಾ ಎಸ್ ವಾಹನದಲ್ಲಿದ್ದ ಚಾಲಕ ಜಯಪ್ರಕಾಶ್ ಕುಲಾಲ್ ಹಾಗೂ ಮಂಗಳೂರು ಬೆಂಗಾವಲು ಸಿಬ್ಬಂದಿ (ಗನ್ ಮ್ಯಾನ್) ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಮತ್ತು ಮೃತರ ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ಮನೆಯವರು ಮತ್ತು ಸಂಬಂಧಿಕರು ಕೇರಳಕ್ಕೆ ತೆರಳಿದ್ದಾರೆ.

ಮೂಲತಃ ಪುತ್ತೂರು ತಾಲೂಕಿನ ಅಲಂಗಾರು ಗ್ರಾಮ ನಿವಾಸಿಯಾಗಿರುವ ಜಯಪ್ರಕಾಶ್ ಕುಲಾಲ್ ರವರು ಪ್ರಸ್ತುತ ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ಕೆ.ಬಿ.ರಸ್ತೆ ಪಕ್ಕದಲ್ಲಿ ಖರೀದಿಸಿದ ಮನೆಯಲ್ಲಿ ವಾಸ್ತವ್ಯವಿದ್ದರು.

ಮೃತರು, ಪತ್ನಿ ಕಳಿಯ ಗ್ರಾಮದ ಆಶಾ ಕಾರ್ಯಕರ್ತೆ ಪ್ರತಿಭಾ, ಓರ್ವ ಪುತ್ರ, ಓರ್ವ ಪುತ್ರಿ, ತಂದೆ, ತಾಯಿ, ಓರ್ವ ಸಹೋದರ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Leave A Reply

Your email address will not be published.