ಯಾರ ಕಲ್ಲೇಟು ಕೂಡಾ ತಾಕದ ಆತನನ್ನು ಪಡೆಯಲು ಸೀರೆಯುಟ್ಟು ಸಿಂಗರಿಸಿಕೊಂಡು ಮರವೇರಿದ ಹುಡುಗಿಯರು !

? ಸುದರ್ಶನ್ ಬಿ. ಪ್ರವೀಣ್

ಅದೊಂದು ಫಲಭರಿತ ಮಾವಿನ ಮರ. ಮರದ ರೆಂಬೆ ಕೊಂಬೆಗಳ ತುಂಬಾ ಹಣ್ಣುಗಳು. ಆ ಮರದಲ್ಲಿರುವ ಹಣ್ಣುಗಳು ಹುಡುಗರಿಗೆ ಉಪಮೆಗಳು. ಆ ಮರದ ತುತ್ತುದಿಯಲ್ಲಿರುವ ಹಣ್ಣುಗಳು ಒಳ್ಳೆಯ ಹುಡುಗರಿಗೆ ಹೋಲಿಕೆಯಾದರೆ, ಕೆಳ ರೆಂಬೆಗಳಿಗೆ ಕಚ್ಚಿಕೊಂಡಿರುವ ಹಣ್ಣುಗಳು ಒಳ್ಳೆಯ ಹುಡುಗರಿಗೆ ಏನೊಂದರಲ್ಲೂ ಸ್ಪರ್ಧೆ ನೀಡಲಾರದಂತವರು. ಅಷ್ಟು ಮಾಮೂಲು, ಸಾಧಾರಣ ಹುಡುಗರವರು.

ಎಲ್ಲ ದರ್ಜೆಯ ಹುಡುಗರೂ ಅವಳ ನಿರೀಕ್ಷೆಯಲ್ಲಿರುತ್ತಾರೆ. ಅವಳ ಸ್ಪರ್ಶದಿಂದ ಪುಳಕಿತಗೊಳ್ಳಲು ಉಸಿರು ಬಿಗಿ ಹಿಡಿದು ನಿರೀಕ್ಷಿಸುತ್ತಿರುತ್ತಾರೆ. ಹಣ್ಣು ಕೀಳಲು ಬರುವ ಹುಡುಗಿಯರು ಮರವನ್ನು ಸಮೀಪಿಸುತ್ತಾರೆ. ಹುಡುಗಿಯರಲ್ಲಿ ಅನಗತ್ಯ ಸ್ಪರ್ಧೆ ಮತ್ತು ಅವಸರ ! ಕೈಗೆ ಸಿಕ್ಕ ಹಣ್ಣು ಗಬ ಗಬ ಕಿತ್ತುಕೊಂಡು ಹೋಗುತ್ತಾರೆ. ಮರದ ಕೆಲ ಅಂತಸ್ತಿನಲ್ಲಿರುವ ಹಣ್ಣುಗಳಿಗೆ ಖುಷಿ, ಹೆಮ್ಮೆ ಮತ್ತು ಸ್ವಲ್ಪ ಅಹಂ.

ಹಾಗೆ ಮರದ ಕೆಳ ಭಾಗದಲ್ಲಿರುವ ಹಣ್ಣುಗಳೆಲ್ಲ ಬಹು ಬೇಗನೆ ಖಾಲಿಯಾಗುತ್ತವೆ. ನಂತರದ ಸರದಿ ಮರದ ಮಧ್ಯಭಾಗದಲ್ಲಿನ ಹಣ್ಣುಗಳದ್ದು. ಹೀಗೆ ತನ್ನ ಕೆಳ ಅಂತಸ್ತಿನ ಹಣ್ಣುಗಳನ್ನು ಕಂಡ ಮೇಲಿನ ಹಣ್ಣುಗಳು ಅಸೂಯೆಪಡುತ್ತವೆ. ಮರುಗುತ್ತವೆ. ತಮ್ಮ ಸರದಿ ಯಾವತ್ತೂ ಬರುತ್ತದೋ ಇಲ್ಲವೋ ಎಂಬ ಅಸಂಧಿಗ್ದತೆಯಲ್ಲಿ ದಿನ ದೂಡುತ್ತವೆ. ಕೊನೆಗೆ ತಮ್ಮಲ್ಲೇ ಏನೋ ಕೊರತೆ ಇದೆ, ಆ ವೀಕ್ನೆಸ್ಸ್ ನಿಂದಾಗಿಯೇ ತನ್ನನ್ನು ಇನ್ನೂ ಯಾರೂ ಒಯ್ದಿಲ್ಲವೆಂದು ಅಲ್ಟಿಮೇಟ್ ಬಲಹೀನತೆಯಾದ ಕೀಳರಿಮೆಗೆ ಬೀಳುತ್ತಾರೆ.

ಆದರೆ, ವಾಸ್ತವ ಸಂಗತಿ ಅದಲ್ಲ. ಮರದ ಕೆಲ ಸ್ಥರದ ಹಣ್ಣುಗಳನ್ನು ಮಾಮೂಲು ಹುಡುಗಿಯರು ಬಹು ಬೇಗನೆ ಒಯ್ದು ಬಿಡುತ್ತಾರೆ. ಆದರೆ ಮರದ ತುತ್ತುದಿಯ ಹಣ್ಣುಗಳು ನಿಜಕ್ಕೂ ಉತ್ಕೃಷ್ಟವಾದವುಗಳು. ಅವು ಯಾರಿಂದಲೂ ಮುಟ್ಟಿಸಿಕೊಳ್ಳದ, ಪರೀಕ್ಷಿಸಿಕೊಳ್ಳದ, ಯಾವ ಗಂಡುಬೀರಿ ಹುಡುಗಿಯ ಬೀಸುಕಲ್ಲಿನ ಏಟಿಗೂ ಗಾಯ ಮಾಡಿಕೊಳ್ಳದಂತೆ ಆಕಾಶದಲ್ಲಿರುವ ವರ್ಜಿನ್ ಹಣ್ಣುಗಳವು.ಅವು ಸಾಮಾನ್ಯ ಹುಡುಗಿಯರ ಕೈಗೆ ಸಿಗಲಾರವು. ಅವನ್ನು ಹೊಂದಲು ರಾಜಕುಮಾರಿಯೇ ಬರಬೇಕು. ಅಂತಹಾ ಅವನಿಗಾಗಿ ಕಾಯುವ ತಾಳ್ಮೆ ಅವಳಲ್ಲಿಯೂ ಇರಬೇಕು.ಆತನನ್ನು, ಆತನನ್ನು ಮಾತ್ರ ಪಡೆಯಲು ಮರವೇರಬಲ್ಲ ಕೌಶಲ ಅವಳಲ್ಲಿರಬೇಕು. ಹಲವು ಸೋಲನ್ನು ಕೊನೆಯ ಗೆಲುವಿಗಾಗಿ ಮುಂದೂಡುವ perseverance ಅವಳದಾಗಬೇಕು. ‘ ರಾಜ ಹಣ್ಣ ‘ ನ್ನೇ ಪಡೆಯಬೇಕೆಂಬ ಗುರಿ ಮತ್ತು ಪಡೆಯುತ್ತೇನೆಂಬ ವಿಶ್ವಾಸ, ದಾರಿಯಲ್ಲಿ ಕಾಲಿಗೆ ತೊಡರುವ ಬೇರಿನ್ನಾವ ಹಣ್ಣಿನೆಡೆಗೂ ಮೋಹಿತಗೊಳ್ಳದ ಮನಸ್ಸು ಅವಳಲ್ಲಿರಬೇಕು.ಅಂತಹಾ ರಾಜಕುಮಾರಿ ಬಂದೇ ಬರುತ್ತಾಳೆ, ಅಲ್ಲಿಯ ತನಕ ಕಳಚಿ ಬೀಳದೆ ಕಾದು ಕೂಡುವ ಸಹನೆ ಆತನಲ್ಲಿಯೂ ಇರಬೇಕು.

ಈ ಮೇಲೆ ಹೇಳಿದ ಹಣ್ಣುಗಳು ಹುಡುಗರೂ ಇರಬಹುದು, ಹುಡುಗಿಯರೂ ಹೌದು. ಪರಸ್ಪರ ಕ್ವಾಲಿಟಿ ಹಣ್ಣು ಪಡೆಯಲು ನಿರೀಕ್ಷೆ, ತಾಳ್ಮೆ, ಅಗತ್ಯ ಪ್ರಯತ್ನ ಮತ್ತು ಕ್ವಾಲಿಟಿಯೊಂದಿಗೆ ಎಂದೂ ರಾಜಿ ಮಾಡಲಿಚ್ಛಿಸದ ಮನಸ್ಸು ಮುಖ್ಯ.

ಮೇಲಿನ ಸನ್ನಿವೇಶವನ್ನು ನಿಜ ಜೀವನಕ್ಕೆ ರಿಲೇಟ್ ಮಾಡ್ಕೊಳ್ಳಿ. ಸುತ್ತ ಮುತ್ತ ತುಂಬಾ ಉದಾಹರಣೆ ಸಿಕ್ಕೇ ಸಿಗುತ್ತದೆ.

?ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.