ವಿಶಾಲ ಗಾಣಿಗ ಕೊಲೆ ಪ್ರಕರಣ ತಾತ್ವಿಕ ಅಂತ್ಯದತ್ತ | ದುಬೈನಲ್ಲಿದ್ದುಕೊಂಡೇ ಸ್ಕೆಚ್ ಹಾಕಿದ್ದ ಆರೋಪಿ ವಿಶಾಲ ಪತಿ ರಾಮಕೃಷ್ಣ ಗಾಣಿಗನ ಬಂಧನ

ಉಡುಪಿ ಜಿಲ್ಲೆಯ ಅಪಾರ್ಟ್ಮೆಂಟ್ ನಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣ ಒಂದು ರೀತಿಯ ತಾತ್ವಿಕ ಅಂತ್ಯಕ್ಕೆ ಬರುತ್ತಿರುವಂತೆ ಕಾಣುತ್ತಿದೆ.

ನಡೆದ ತನಿಖೆಯ ಹಲವು ಹಂತಗಳ ನಂತರ ಮೃತ ಗೃಹಿಣಿ ವಿಶಾಲ ಗಾಣಿಗ ಅವರ ಪತಿಯ ಸುತ್ತ ಅನುಮಾನದ ಮುಳ್ಳು ಗರಗರನೆ ತಿರುಗುತ್ತಿತ್ತು. ಅದರಂತೆ ಉಡುಪಿ ಪೊಲೀಸರು ಆಕೆಯ ಗಂಡ ರಾಮಕೃಷ್ಣ ಗಾಣಿಗನನ್ನ ಠಾಣೆಗೆ ಕರೆತಂದು ರಾತ್ರಿ-ಹಗಲು ಡ್ರಿಲ್ ಮಾಡಿದ್ದರು. ಪೊಲೀಸರು ತಮಗೆ ದೊರೆತ ಸಾಂದರ್ಭಿಕ ಮತ್ತು ಟೆಕ್ನಿಕಲ್ ಎವಿಡೆನ್ಸ್ ತಾಳೆಹಾಕಿ ಅಳೆದು ನೋಡಿದ್ದರು.

ಹೀಗೆ ನಡೆದ ಪ್ರಾಥಮಿಕ ತನಿಖೆಯ ನಂತರ ಇಂದು ವಿಶಾಲ ಗಾಣಿಗ ಅವರ ಪತಿ ರಾಮಕೃಷ್ಣ ಗಾಣಿಗನ ಬಂಧನವಾಗಿದೆ. ಈ ಮೂಲಕ ಪ್ರಕರಣದಲ್ಲಿ ಇರುವ ಎಲ್ಲಾ ಅನುಮಾನಗಳಿಗೂ ವಿರಾಮ ಬೀಳುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಶಾಲ ಅವರ ಪತಿ ರಾಮಕೃಷ್ಣ, ದುಬೈನಲ್ಲಿದ್ದುಕೊಂಡೇ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ಅನುಮಾನಿಸಿ ಆತನನ್ನು ತೀವ್ರ ವಿಚಾರಣೆ ನಡೆಸಿದಾಗ ವಿಷಯ ಬಹಿರಂಗವಾಗಿದೆ. ಬಾಡಿಗೆ ಹಂತಕರ ಮೂಲಕ ಪತ್ನಿಯನ್ನು ಕೊಲೆಗೈಯಲು ವಿಶಾಲ ಗಾಣಿಗ ಅವರ ಪತಿ ರಾಮಕೃಷ್ಣ ಸುಪಾರಿ ನೀಡಿದ್ದ, ಉತ್ತರ ಭಾರತ ಮೂಲದ ಸುಪಾರಿ ಹಂತಕರ ಮೂಲಕ ಕೊಲೆ ಮಾಡಿಸಿದ್ದಾಗಿ ತಿಳಿದುಬಂದಿದೆ.

ಆತ ಹೊಂದಿದ್ದ ಅಕ್ರಮ ಸಂಬಂಧ ಮತ್ತು ಹಲವು ವ್ಯವಹಾರಗಳ ಕಾರಣಕ್ಕಾಗಿ ಸುಪಾರಿ ಕಿಲ್ಲರ್ಸ್ ಗಳನ್ನು ಬಳಸಿ ಕೊಲೆ ನಡೆದ ಸಂಭವನೀಯತೆಯೇ ಹೆಚ್ಚು. ಕೊಲೆಗೈದ ಸುಪಾರಿ ಹಂತಕರು ಬೇಟೆಗೆ ಪೊಲೀಸರು ಇಳಿದಿದ್ದು, ಇನ್ನೇನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂಬ ಮಾಹಿತಿಯೂ ತಿಳಿದುಬಂದಿದೆ.

Leave A Reply

Your email address will not be published.