ಬೆಳ್ತಂಗಡಿ | ಆತ್ಮಹತ್ಯೆ ಮಾಡಿಕೊಂಡ ಪತ್ನಿಯ ಅಂತ್ಯಸಂಸ್ಕಾರಕ್ಕೆ ಹಾಕಿದ ಶಾಮಿಯಾನಕ್ಕೆ ನೇಣು ಜಗ್ಗಿಕೊಂಡ ಪತಿ !

ಪತ್ನಿ ಆತ್ಮಹತ್ಯೆ ಮಾಡಿಕೊಂಡು ಆಕೆಯ ಅಂತ್ಯಸಂಸ್ಕಾರಕ್ಕೆಂದು ಕಟ್ಟಿದ್ದ ಶಾಮಿಯಾನದ ಪೈಪಿಗೇ ನೇಣು ಹಾಕಿಕೊಂಡು ಪತಿ ಕೂಡ ಆತ್ಮಹತ್ಯೆಗೈದುಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಮುಡಿಪಿರೆ ಎಂಬಲ್ಲಿ ನಡೆದಿದೆ.

ಮೊದಲಿಗೆ ಪತ್ನಿ ಚಂದ್ರಾವತಿ (49) ಅವರು ಮನೆಯ ಪಕ್ಕದ ಗೇರುಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮರುದಿನ ಅವರ ಪತಿ ಶಿವಪ್ಪ ಗೌಡ(56) ಕೂಡ ಇದೇ ಕೃತ್ಯವೆಸಗಿದ್ದಾರೆ.

ಪತ್ನಿ ಚಂದ್ರಾವತಿ ಅವರು ಮನೆಯ ಜಾನುವಾರಿಗೆ ಹುಲ್ಲುತರಲೆಂದು ಮನೆಯಿಂದ ಮಧ್ಯಾಹ್ನ ಹೊರಹೋದವರು ಸಂಜೆಯವರೆಗೂ ಮರಳಿಬಾರದೇ ಇದ್ದುದರಿಂದ ಸಂದೇಹಗೊಂಡ ಮನೆಯವರು ಹುಡುಕಾಟ ನಡೆಸಿದ ಸಂದರ್ಭ ಅವರು ಆತ್ಮಹತ್ಯೆ ಗೈದುಕೊಂಡ ವಿಚಾರ ಬೆಳಕಿಗೆ ಬಂದಿತ್ತು. ಪತಿಗೆ ತೀವ್ರ ಕುಡಿತದ ಚಟ, ಪತಿಗೆ ವಾಸಿಯಾಗದ ದೀರ್ಘ ಕಾಲದ ಅಸೌಖ್ಯ ಮತ್ತು ಮಕ್ಕಳಾಗದೇ ಇರುವ ಬಗ್ಗೆ ಮಾನಸಿಕವಾಗಿ ನೊಂದಿದ್ದ ಅವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಜೀವನ ಕೊನೆಗಾಣಿಸಿಕೊಂಡಿದ್ದರು.

ಅವರ ಅಂತ್ಯಸಂಸ್ಕಾರ ಶನಿವಾರ ನಡೆದಿತ್ತು. ಜೋರಾಗಿ ಮಳೆ ಇದ್ದುದರಿಂದ ಅಂತ್ಯಸಂಸ್ಕಾರ ನಡೆಯುವ ಜಾಗಕ್ಕೆ ಶಾಮಿಯಾನ ಹಾಕಲಾಗಿತ್ತು. ಅಂದು ರಾತ್ರಿ 10 ಗಂಟೆಯಿಂದ ರವಿವಾರ ಬೆಳಿಗ್ಗೆ 6 ಗಂಟೆಯ ಮಧ್ಯದಲ್ಲಿ ಚಂದ್ರಾವತಿ ಅವರ ಪತಿ ಶಿವಪ್ಪ ಗೌಡ ಅವರು ಇದೇ ಚಪ್ಪರದ ಕಂಬಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ದಂಪತಿಯು ಮುಡಿಪಿರೆ ಎಂಬಲ್ಲಿ ಶಿವಪ್ಪಗೌಡ ಅವರ ತಾಯಿ ನಾಗಮ್ಮರೊಂದಿಗೆ ವಾಸ್ತವ್ಯವಿದ್ದರು. ಇದೀಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದು, ಸದ್ಯಕ್ಕೆ ತಾಯಿ ಒಬ್ಬಂಟಿಯಾಗಿದ್ದಾರೆ.

ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.