ಪತ್ನಿಯನ್ನು ಬಿಟ್ಟು ಬರಲು ಕಾರು ಪಡೆದ | ಬೆಂಗಳೂರಿನಲ್ಲಿ ಮಾರಾಟ ಮಾಡಿ ಮುಂಬೈಗೆ ತೆರಳಿದ ಅಶ್ರಫ್

ಸುಳ್ಯ ತಾಲೂಕಿನ ವ್ಯಕ್ತಿಯೊಬ್ಬ ಪತ್ನಿಯನ್ನು ಬಿಟ್ಟು ಬರಲು ಪರಿಚಿತರೊಬ್ಬರ ಕಾರನ್ನು ಪಡೆದುಕೊಂಡು,ಅದನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಿ ಮುಂಬೈಗೆ ಪರಾರಿಯಾದ ಬಗ್ಗೆ ವರದಿಯಾಗಿದೆ.

ಸುಳ್ಯ ಜಟ್ಟಿಪಳ್ಳ ಬೊಳಿಯಮಜಲು ಬಳಿ ವಾಸವಿದ್ದ ಅಶ್ರಫ್ ಯಾನೆ ಅಪ್ಪಿ ಎಂಬಾತ ಪತ್ನಿಯನ್ನು ತವರು ಮನೆಗೆ ಬಿಟ್ಟು ಬರಲೆಂದು ಪಕ್ಕದ ಮನೆಯ ಕಾರು ಪಡೆದುಕೊಂಡು ಹೋಗಿ ಅದೇ ಕಾರನ್ನು ಬೆಂಗಳೂರಿನಲ್ಲಿ ಮಾರಾಟಮಾಡಿ ಪಲಾಯಗೈದ ಘಟನೆ ನಡೆದಿದೆ.
ಅಕ್ಕಪಕ್ಕ ಬಾಡಿಗೆ ರೂಂನಲ್ಲಿ ವಾಸವಿದ್ದ ಕಲಂದರ್ ಎಂಬವರ ಕಾರನ್ನು ಅಶ್ರಫ್ ಯಾನೆ ಅಪ್ಪಿ ಎಂಬವ ತನ್ನ ಪತ್ನಿಯನ್ನು ವಿರಾಜಪೇಟೆಯಲ್ಲಿರುವ ಆಕೆಯ ತವರು ಮನೆಗೆ ಡ್ರಾಪ್ ಮಾಡಲೆಂದು ಕಾರನ್ನು ಪಡೆದುಕೊಂಡು ಹೋದ. ಕತ್ತಲಾದರೂ ಆತ ಹಿಂತಿರುಗಿ ಬಾರದಿದ್ದಾಗ ಕಲಂದರ್ ಅಶ್ರಫ್‌ಗೆ ಫೋನಾಯಿಸಿದರು. “ನಾನು ಸುಳ್ಯಕ್ಕೆ ಬಂದು ಅಜ್ಜಾವರ ಮೇನಾಲದಲ್ಲಿ ಒಂದು ಮದುವೆ ಕಾರ್ಯಕ್ರಮದಲ್ಲಿ ಇದ್ದೇನೆ. ರಾತ್ರಿ 10 ಗಂಟೆಗೆ ಬರುತ್ತೇನೆ” ಎಂದು ಆತ ತಿಳಿಸಿದನೆನ್ನಲಾಗಿದೆ.

ಕಲಂದರ್ ಅವರು ಹತ್ತು ಗಂಟೆಯಾದರೂ ಕಾರು ವಾಪಸ್ ಬರಲಿಲ್ಲವೆಂದು ಅಶ್ರಫ್‌ನ ಮೊಬೈಲ್‌ಗೆ ಕರೆಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿತ್ತು. ಮರುದಿನ ಬೆಳಿಗ್ಗೆ ಕಲಂದರ್ ಕಾರು ಹುಡುಕಲು ಅಶ್ರಫ್‌ನ ತಂದೆ ಹನೀಫ್‌ರೊಂದಿಗೆ ವಿರಾಜಪೇಟೆ ತೆರಳಿದರು ಅಲ್ಲಿ ಕಾರು ಮತ್ತು ಅಶ್ರಫ್ ಇರಲಿಲ್ಲ. ಅಶ್ರಫ್ ಸುಳ್ಯಕ್ಕೆ ವಾಪಸಾಗಿರುವುದಾಗಿ ಮನೆಯವರು ತಿಳಿಸಿದ್ದರಿಂದ ಬರಿಗೈಯಲ್ಲಿ ವಾಪಸಾದರು. ನಂತರ ಸುಳ್ಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ಅದೇ ದಿನ ಸಂಜೆ ಬೆಂಗಳೂರಿನಿಂದ ಸಯ್ಯದ್ ಯಾಸಿಮ್ ಎಂಬವರು ಕಲಂದರ್‌ರ ಮೊಬೈಲ್ ಫೋನ್‌ಗೆ ಕರೆ ಮಾಡಿ, “ಕಾರಿನ ಆರ್.ಸಿ. ಮಾಲಕ ನೀವಾ? ಈ ಕಾರನ್ನು ನಮಗೆ 40 ಸಾವಿರಕ್ಕೆ ಅಶ್ರಫ್ ಮಾರಾಟ ಮಾಡಿದ್ದಾರೆ ” ಎಂದು ಹೇಳಿದರು.

ವಿಷಯವನ್ನು ಸುಳ್ಯದ ಪೊಲೀಸರ ಮೂಲಕ ಬೆಂಗಳೂರಿನ ಪೊಲೀಸರಿಗೆ ತಿಳಿಸಿ, ಹಿಂದೆ ಸುಳ್ಯದಲ್ಲಿದ್ದ ಈಗ ಬೆಂಗಳೂರಲ್ಲಿರುವ ಎಸ್.ಐ.ಮಂಜುನಾಥರ ಮೂಲಕ ಕಾರ್ಯಾಚರಣೆ ನಡೆಸಿ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಶ್ರಫ್ ಇದು ತನ್ನ ಮಾವನ ಕಾರೆಂದು ಹೇಳಿ ಸಯ್ಯದ್ ಯಾಸಿಂರವರಿಂದ 10 ಸಾವಿರ ರೂ.ಪಡೆದುಕೊಂಡು ಕಾರು ನೀಡಿ ಹೋಗಿದ್ದಾನೆಂದು ತಿಳಿದು ಬಂದಿದೆ.

ಹುಡುಗಿಯೊಂದಿಗೆ ಮುಂಬಯಿಗೆ ಪರಾರಿ :
ಅಶ್ರಫ್‌ನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು ,ತುಮಕೂರು ಮೂಲದ ಮತ್ತೊಬ್ಬಳು ಯುವತಿಯೊಂದಿಗೆ ರೈಲಿನಲ್ಲಿ ಮುಂಬಯಿಗೆ ಪರಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.