ಕೇಂದ್ರ ಸಚಿವ ಸ್ಥಾನಕ್ಕೆ ಡಿ.ವಿ.ಸದಾನಂದ ಗೌಡ ರಾಜಿನಾಮೆ
ನರೇಂದ್ರ ಮೋದಿ ನೇತೃತ್ವದ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯುತ್ತಿದ್ದು,ಈ ಕಾರಣದಿಂದ ಸಚಿವ ಡಿ.ವಿ.ಸದಾನಂದ ಗೌಡ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಪಕ್ಷದ ಉನ್ನತ ಮೂಲಗಳು ತಿಳಿಸಿದ್ದು ಅದರಂತೆ ಸದಾನಂದಗೌಡ ಅವರು ರಾಜೀನಾಮೆ ನೀಡಿದ್ದಾರೆ. ಡಿವಿ ಸದಾನಂದ ಗೌಡರ ಖಾತೆ ನಿರ್ವಹಣೆ ಮೇಲೆ ಮೋದಿಯವರಿಗೆ ಸಮಾಧಾನ ತಂದಿರಲಿಲ್ಲ. ಪೂರ್ ಪರ್ಫಾರ್ಮೆನ್ಸ್ ಆಧಾರದ ಮೇಲೆ ಡಿವಿಎಸ್ ರಾಜೀನಾಮೆ ನೀಡಬೇಕಾಗಿ ಬಂದಿದೆ ಎನ್ನಲಾಗಿದೆ.
ಡಿವಿ ಸದಾನಂದಗೌಡ ರಾಜಿನಾಮೆಯಿಂದ ಶೋಭಾ ಕರಂದ್ಲಾಜೆಯವರಿಗೆ ಒಳ್ಳೆಯ ಅವಕಾಶ ದಕ್ಕಿದ್ದು ಅವರು ಕೇಂದ್ರದ ಮಂತ್ರಿ ಯಾಗುತ್ತಿದ್ದಾರೆ. ಕರ್ನಾಟಕದಿಂದ ಇನ್ನೂ ಮೂವರಿಗೆ ಮಂತ್ರಿಯಾಗುವ ಅವಕಾಶ ಸಿಕ್ಕಿದೆ. ಬೀದರ್ ನ ಭಗವಂತ ಖೂಬಾ, ಚಿತ್ರದುರ್ಗದ ನಾರಾಯಣಸ್ವಾಮಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಇನ್ನುಳಿದ ಮೂರು ಹೊಸ ಮಂತ್ರಿಗಳು.
ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವರಾಗಿರುವ ಡಿವಿ ಸದಾನಂದಗೌಡ ಅವರನ್ನು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳುವ ಬಗ್ಗೆ ಈಗಾಗಲೇ ಚರ್ಚೆ ನಡೆದಿದೆ ಎನ್ನಲಾಗಿದೆ. ಹೊಸ ಮಂತ್ರಿಗಳು ಇವತ್ತು ಸಂಜೆ 6 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದು ಸಂಜೆಯ ಹೊತ್ತಿಗೆ ಖಾತೆ ಹಂಚಿಕೆಯ ಸ್ಪಷ್ಟ ಚಿತ್ರಣ ದೊರೆಯಲಿದೆ. ಮುಖ್ಯವಾಗಿ ಕರಾವಳಿಯ ಜನತೆ ಶೋಭಕ್ಕನಿಗೆ ಯಾವ ಖಾತೆ ದೊರೆಯಬಹುದೆಂಬ ಕುತೂಹಲದಿಂದ ಕಾಯುತ್ತಿದ್ದಾರೆ.
ಕೊನೆಗೂ ಸದಾನಂದ ಗೌಡರಿಂದ ನಾಡಿಗೆ ಮುಕ್ತಿ ಸಿಕ್ಕಿದಂತಾಗಿದೆ