ಬೆಂಗಳೂರು: ದುಷ್ಟ ಶಕ್ತಿಯನ್ನು ಪಡೆಯಲು ಬಾಲಕಿಯನ್ನು ಬಳಸಿಕೊಂಡು ವಾಮಾಚಾರ ಮಾಡಿರುವ ಘಟನೆ, ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಒಂದು ಪುಟ್ಟ ಹಳ್ಳಿಯಲ್ಲಿ ನಡೆದಿದೆ.
ಅದೃಷ್ಟವಶಾತ್ ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾಲಕಿಯ ರಕ್ಷಣೆ ಮಾಡಲಾಗಿದೆ. ಕೊರೊನಾ ಲಾಕ್ಡೌನ್ ನಡುವೆ ಮಂತ್ರವಾದಿಗಳ ಕುತಂತ್ರ ಬೆಳಕಿಗೆ ಬಂದಿದೆ.
ಸ್ಥಳೀಯ ಕೆಲವು ಕುತಂತ್ರಿಗಳು ಬಾಲಕಿಗೆ ಪೂಜೆ ಮಾಡಿ ನರಬಲಿಗೆ ಸಿದ್ಧತೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಬಾಲಕಿಗೆ ಅರಿಶಿನ, ಕುಂಕುಮ, ನಿಂಬೆಹಣ್ಣು ಇನ್ನಿತರ ವಸ್ತುಗಳನ್ನು ಬಳಸಿ ಪೂಜೆ ಮಾಡುವಂತಹ ಲಕ್ಷಣಗಳು ಜಾಗದಲ್ಲಿ ಕಂಡು ಬಂದಿದ್ದು, ಸ್ಥಳೀಯರು ಜಾಗಕ್ಕೆ ಹೋಗುತ್ತಿದ್ದಂತೆ ವಾಮಾಚಾರ ಮಾಡುವ ಮಂತ್ರವಾದಿ ಸ್ಥಳದಿಂದ ಓಡಿ ಹೋಗಿದ್ದಾನೆ.
ಬಾಲಕಿಯನ್ನು ರಕ್ಷಣೆ ಮಾಡಿ ಅವರ ಪೋಷಕರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಐವರನ್ನು ಬಂಧಿಸಿರುವ ಪೊಲೀಸರು ನಾಪತ್ತೆಯಾಗಿರುವ ಮಾಂತ್ರಿಕನ ಪತ್ತೆಗೆ ಬಲೆಬೀಸಿದ್ದಾರೆ.
ಈಗಿನ ಕಾಲದಲ್ಲೂ ಈ ರೀತಿ ಕೃತ್ಯಗಳು ನಡೆಯುತ್ತಿವೆ ಎಂಬುದು ನಂಬಲೇಬೇಕಾದ ಸತ್ಯ. ಇದಕ್ಕೆಲ್ಲಾ ಲಾಕ್ ಡೌನ್ ಪೂರಕವಾಗಿಯೇ ಇದೆ.