ದಲಿತ ಕುಟುಂಬದ ಕುಸಿದ ಮನೆ ದುರಸ್ತಿ ಸಹಾಯಕ್ಕೆ ನಿಂತ ಮಾಜೀ ಶಾಸಕ ವಸಂತ ಬಂಗೇರ

ಬೆಳ್ತಂಗಡಿ, ಜೂನ್ 16 : ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾ.ಪಂ ವ್ಯಾಪ್ತಿಯ ಬಂಗಾಡಿ ಊರ್ಲ ಎಂಬಲ್ಲಿ ದಲಿತ ಕುಟುಂಬವೊಂದು ವಾಸವಾಗಿರುವ ಮನೆಯ ದುರಸ್ತಿ ಮಾಡಲು ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರು ಸಹಾಯ ಹಸ್ತ ಚಾಚಿದ್ದಾರೆ.

ಊರ್ಲ‌ ನಿವಾಸಿ, ಪರಿಶಿಷ್ಟ ಜಾತಿಯ ಕೂಲಿ ಕಾರ್ಮಿಕರಾಗಿರುವ ಕಾಣದು ಮತ್ತು ಅವರ ಪುತ್ರ ರಾಧಾಕೃಷ್ಣಅವರ ಮೇಲ್ಛಾವಣಿ ಸಂಪೂರ್ಣ ಕುಸಿದ ಸ್ಥಿತಿಯಲ್ಲಿ ಇತ್ತು. ಮಳೆಗಾಲದ ಕಾರಣದಿಂದ ಸದ್ಯಕ್ಕೆ ಅವರು ನೆಲೆಸಿರುವ ಮನೆಯ ಮೇಲ್ಛಾವಣಿಯನ್ನು ಪ್ಲಾಸ್ಟಿಕ್ ಟಾರ್ಪಲ್ ನಿಂದ ಮುಚ್ಚಿದ್ದು ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಈ‌ ಬಗ್ಗೆ ಕಾಂಗ್ರೆಸ್ ಬಂಗಾಡಿ  ಬೂತ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಊರ್ಲ, ಕಾಂಗ್ರೆಸ್ ಇಂಟೆಕ್ ಅಧ್ಯಕ್ಷ ಅನೂಪ್‌ ಎಂ. ಬಂಗೇರ ಅವರ ಮೂಲಕ ‌ಮಾಹಿತಿ ತಿಳಿದು ವಸಂತ  ಬಂಗೇರ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆ ಮನೆಯವರಿಗೆ ಆಹಾರದ ಕಿಟ್ ಹಸ್ತಾಂತರಿಸಿದ ಬಂಗೇರರು, ಸದ್ರಿ‌ಕುಟುಂಬಕ್ಕೆ 50 ಸಾವಿರ ರೂ.‌ವೆಚ್ಚದಲ್ಲಿ ತಾತ್ಕಾಲಿಕ‌ ಶೆಡ್ಡ್ ನಿರ್ಮಿಸಲು ಗುರುವಾರ ಸಂಜೆಯ ಒಳಗಾಗಿ ಕ್ರಮಕೈಗೊಳ್ಳಲಾಗಿದೆ.

ಈ ಕುಟುಂಬಕ್ಕೆ 1984 ರಲ್ಲಿ ನಾನೇ ಶಾಸಕನಾಗಿದ್ದಾಗ 9 ಸೆಂಟ್ಸ್ ಭೂಮಿಯನ್ನು ಭೂ ನ್ಯಾಯ ಮಂಡಳಿಯಲ್ಲಿ ಮಂಜೂರು ಮಾಡಿಸಿದ್ದೆ. ಇದೀಗ ಮನೆ ಕೂಡ ಮಂಜೂರಾಗಿದೆ. ಆದರೆ ಕುಟುಂಬ ಈಗ ಸಂಕಷ್ಟದಲ್ಲಿರುವ ಬಗ್ಗೆ ಗಮನಕ್ಕೆ ಬಂದಾಗ ಭೇಟಿ ನೀಡಿದ್ದೇನೆ ಎಂದು ಮಾದ್ಯಮದವರ ಜೊತೆ ಬಂಗೇರ ಅವರು ನುಡಿದಿದ್ದಾರೆ.
ಈ‌ ಸಂದರ್ಭ ಆಲ್ವಿನ್ ಅಪ್ಪೂಸ್ ಅವರು ಉಪಸ್ಥಿತರಿದ್ದರು.

Leave A Reply

Your email address will not be published.