ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಆನ್‌ಲೈನ್ ಉಪನ್ಯಾಸ ಕಾರ್ಯಕ್ರಮ

ಪುತ್ತೂರು: ವಿಜ್ಞಾನ ಎನ್ನುವುದು ವಿಶೇಷವಾದ ಜ್ಞಾನ. ವಿಜ್ಞಾನವು ಜನರಿಗಾಗಿ ಹಾಗೂ ಜನರ ಚಿಂತನೆಗಳು ವಿಜ್ಞಾನಕ್ಕೆ ಪೂರಕವಾಗಿರುವ ರೀತಿಯಲ್ಲಿ ನಮ್ಮ ಪ್ರಯತ್ನ ಸಾಗಲಿ ಎಂದು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಹಾಗೂ ವಿವೇಕಾನಂದ ಪದವಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಶ್ರೀಶ ಭಟ್ ಹೇಳಿದರು.

ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ವೇದಿಕೆಯ ಮೂಲಕ ನಡೆದ ‘ಮೂಲ ವಿಜ್ಞಾನದಲ್ಲಿರುವ ಅವಕಾಶ’(Opportunities in Basic science) ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ವಿಜ್ಞಾನವನ್ನು ಜನಪ್ರಿಯಗೊಳಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ವಿಜ್ಞಾನ ಎಂಬುದು ಸಾರ್ವತ್ರಿಕವಾಗಿದ್ದು ಜಗತ್ತಿನ ಎಲ್ಲಾ ಮೂಲೆಯಲ್ಲೂ ವಿಜ್ಞಾನಕ್ಕೆ ವಿಶೇಷ ಸ್ಥಾನವಿದೆ. ವಿಜ್ಞಾನದ ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ಮಾತ್ರ ಕೌಶಲ್ಯಭರಿತರಾಗಿದೆ ಎಲ್ಲಾ ರಂಗಗಳಲ್ಲಿಯೂ ನಿಸ್ಸೀಮರಾಗಿದ್ದಾರೆ. ಪ್ರಸ್ತುತ ಬಹುರಾಷ್ಟ್ರೀಯ ಉದ್ದಿಮೆಗಳಲ್ಲಿಯೂ ಉನ್ನತ ಮಟ್ಟದ ಉದ್ಯೋಗವನ್ನು ಪಡೆಯುತ್ತಿರುವುದು ಸಂತಸದ ಸಂಗತಿ. ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಹಂತದಲ್ಲಿ ವಿಜ್ಞಾನ ಕಲಿಕೆಗಿಂತ ಸಂಶೋಧನೆ ಮಾಡುವಾಗ ಸ್ವಶಕ್ತಿ, ಸಾಮರ್ಥ್ಯದ ಕಡೆಗೆ ನಂಬಿಕೆಯಿರಬೇಕು. ಈ ಮೂಲಕ ಯುವಜನರಲ್ಲಿ ಸಂಶೋಧನೆಯ ಪ್ರವೃತ್ತಿ ಬೆಳೆದು ಬರಲಿ ಎಂದರು. ಇದೇ ಸಂದರ್ಭದಲ್ಲಿ ಪಿಯುಸಿ ಶಿಕ್ಷಣದ ಬಳಿಕ ಉಪಲಬ್ಧವಿರುವ ವಿವಿಧ ಕೋರ್ಸ್ ಗಳ ಬಗ್ಗೆ ಸ್ಥೂಲ ಮಹಿತಿಯನ್ನು ಒದಗಿಸಿಕೊಟ್ಟರು.

ಕಾಲೇಜಿನ ಪ್ರಾಚಾರ್ಯ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು. ಉಪನ್ಯಾಸಕರಾದ ಸುಧೀರ್ ಎ.ಎಸ್ ಮತ್ತು ಗಣೇಶ್‌ ಉಮೇಶ್ ಶಾಸ್ತ್ರಿ
ಕಾರ್ಯಕ್ರಮವನ್ನು ನಿರೂಪಿಸಿದರು.

Leave A Reply

Your email address will not be published.