ಆಂಬುಲೆನ್ಸ್ ಮರಕ್ಕೆ ಅಪ್ಪಳಿಸಿ ಹೆರಿಗೆ ನೋವಿನಲ್ಲಿದ್ದ ಗರ್ಭಿಣಿ ಸಹಿತ ಮೂವರ ಸಾವು

ಚೆನ್ನೈ: ಟಯರ್ ಸ್ಫೋಟಗೊಂಡು ಅಂಬುಲೆನ್ಸ್ ಮರಕ್ಕೆ ಹೊಡೆದ ಪರಿಣಾಮ ತುಂಬು ಗರ್ಭಿಣಿ ಸೇರಿ ಮೂವರು ದಾರುಣವಾಗಿ ಮೃತಪಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಮೃತರನ್ನು ಗರ್ಣಿಣಿ ಜಯಲಕ್ಷ್ಮಿ(26), ಅತ್ತೆ ಸೆಲ್ವಿ(55) ಹಾಗೂ ನಾದಿನಿ ಅಂಬಿಕಾ (30) ಎಂದು ಗುರುತಿಸಲಾಗಿದೆ.

ಕಲಕುರಿಚಿ ಜಿಲ್ಲೆಯ ಸೊರಪುಟ್ಟ ಗ್ರಾಮದ ನಿವಾಸಿ ಜಯಲಕ್ಷ್ಮಿ ಅವರು 9 ತಿಂಗಳ ಗರ್ಭಿಣಿ. ಇವರಿಗೆ ಗುರುವಾರ ನಸುಕಿನ ಜಾವ 2.30ರ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಜಯಲಕ್ಷ್ಮಿ ಪತಿ 108 ಗೆ ಕರೆ ಮಾಡಿದ್ದಾರೆ. ಹೀಗಾಗಿ ಜಯಲಕ್ಷ್ಮಿ ಅತ್ತೆ ಹಾಗೂ ಅವರ ಮಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಲೆಂದು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಯತ್ತ ಸಾಗಿದ್ದಾರೆ.
ಹೀಗೆ ಅಂಬುಲೆನ್ಸ್ ನಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಅಂಬುಲೆನ್ಸ್ ನ ಟಯರ್ ಸ್ಫೋಟಗೊಂಡಿದೆ. ಆಗ ಆಂಬುಲೆನ್ಸ್ ಮರಕ್ಕೆ ಡಿಕ್ಕಿಯಾಗಿದೆ.

ವೇಗವಾಗಿ ಸಾಗುತ್ತಿದ್ದ ಆಂಬುಲೆನ್ಸ್ ಮರಕ್ಕೆ ಅಪ್ಪಳಿಸಿದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತ್ತ ಅಂಬುಲೆನ್ಸ್ ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಸಂಬಂಧಿಸಿಂದತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಆಘಾತ ವ್ಯಕ್ತಪಡಿಸಿ, ಮೃತ ಜಯಲಕ್ಷ್ಮಿ ಕುಟುಂಬಕ್ಕೆ 5 ಲಕ್ಷ ಹಾಗೂ ಅವರ ಅತ್ತೆ ಮತ್ತು ನಾದಿನಿ ಕುಟುಂಬಕ್ಕೆ ತಲಾ 3 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Leave A Reply

Your email address will not be published.