ಕಡಬದ ವಿದ್ಯಾನಗರದಲ್ಲಿರುವ ಸರ ಸ್ವತಿ ಶಾಲೆಯಲ್ಲಿ ಬಂದರು ಹಾಗೂ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ಸಚಿವರ ವಾರ್ ರೂಂ ಹಾಗೂ ಸೇವಾ ಭಾರತಿ ಕಾರ್ಯಕರ್ತರ ಸಭೆ ಆರೆಸ್ಸೆಸ್ ನಾಯಕರ ಉಪಸ್ಥಿತಿಯಲ್ಲಿ ಬೃಹತ್ ಸಭೆ ನಡೆದಿದೆ.
ರಸ್ತೆಯ ಎರಡೂ ಬದಿಗಳಲ್ಲಿಯೂ ಅಧಿಕ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿ ಸಭೆ ನಡೆಸಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಮಾಹಿತಿ ತಿಳಿದು ತಡವಾಗಿ ಸ್ಥಳಕ್ಕೆ ಆಗಮಿಸಿದ ಮಾಧ್ಯಮದವರು ರಸ್ತೆ ಬದಿ ನಿಂತು ವೀಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗಿ ಬರುತ್ತಿದ್ದ ತಂಡವೊಂದು ಈ ವೇಳೆ ಕಡಬದ ಮಾಧ್ಯಮ ವರದಿಗಾರರ ಮೇಲೆ ದರ್ಪ ತೋರಿ ಚಿತ್ರೀಕರಣಕ್ಕೆ ತಡೆಯೊಡ್ಡಿದ ಘಟನೆಯೂ ನಡೆಯಿತು. ಇದೊಂದು ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನವಾಗಿದ್ದು, ಎಲ್ಲೆಡೆ ವ್ಯಾಪಕ ಚರ್ಚೆ ಪ್ರಾರಂಭವಾಗಿದೆ.
ಕೋವಿಡ್ 19 ತುರ್ತು ನಿರ್ವಹಣೆ ಸಭೆ ಎಂದು ಒಂದೆಡೆ ಹೇಳಿದರೆ ವ್ಯಾಕ್ಸಿನ್ ಕುರಿತ ಸಭೆ ಎಂದು ಇನ್ನೊಂದೆಡೆ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಗುಪ್ತ ಸಭೆ ನಡೆಸಿ ನಡೆಸಿ ಕೋವಿಡ್ ನಿಯಮ ಉಲ್ಲಂಘಿಸಲಾಗಿದೆ ಎಂಬ ಮಾತು ಕೇಳಿ ಬಂದಿದೆ.
ಸಭೆಗೆ ಕಡಬ ಪೊಲೀಸರು ಭದ್ರತೆ ಒದಗಿಸಿದ್ದರು. ಕೋವಿಡ್ ಗ್ರಾಮೀಣ ಭಾಗದಲ್ಲಿ ಹೆಚ್ಚು ಆವರಿಸಿದ್ದು ಅರಿವು ಮೂಡಿಸಿ ಮಾದರಿಯಾಗಬೇಕಿದ್ದ ನಾಯಕರೇ ಈ ರೀತಿ ಸಭೆ ಸೇರಿ ನಿಯಮ ಉಲ್ಲಂಘಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.