ಭವಿಷ್ಯದಲ್ಲಿ ಸುಖವಾಗಿರುತ್ತೇವೆಂಬ ಆಸೆಯಿಂದ ಧರ್ಮವನ್ನು ಮೀರಿ ಇಷ್ಟಪಟ್ಟವನೊಂದಿಗೆ ಮದುವೆಯಾದ ಯುವತಿಯೊಬ್ಬಳ ಜೀವನ ದುರಂತ ಅಂತ್ಯ ಕಂಡಿದೆ.
ಅತ್ತೆಯ ಕಿರುಕುಳವನ್ನು ತಾಳಲಾರದೇ ಮದುವೆಯಾದ ಕೆಲವೇ ದಿವಸಗಳಲ್ಲಿ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ವಿವರಣೆಗೆ ಬರುವುದಾದರೆ, ಮೃತ ಯುವತಿಯ ಹೆಸರು ಶ್ರಾವಂತಿ (19). ಈಕೆ ವಂಬೆ ಕಾಲನಿಯ ನಿವಾಸಿ. ಕ್ಲರ್ಕ್ ಉದ್ಯೋಗಿ ಸಲ್ಮಾನ್ ಎಂಬಾತನ ಪ್ರೀತಿಯಲ್ಲಿ ಬಿದ್ದಿದ್ದಳು. ಇದೇ ವರ್ಷ ಜನವರಿ 7ರಂದು ದರ್ಗಾದಲ್ಲಿ ಇಬ್ಬರು ಮದುವೆ ಆಗಿದ್ದರು.
ಮದುವೆಯಾದ ಬಳಿಕ ತನ್ನ ಹೆಸರನ್ನು ಸಮೀರಾ ಎಂದು ಬದಲಾಯಿಸಿಕೊಂಡಿದ್ದಳು. ಕಳೆದ ಎರಡು ತಿಂಗಳಿಂದ ಅತ್ತೆ ಮನೆಯನ್ನು ತೊರೆದು ಗಂಡನ ಜತೆ ಬೇರೆ ಮನೆಯಲ್ಲಿ ಸಮೀರಾ ವಾಸವಿದ್ದಳು. ಹೀಗಿರುವಾಗ ಭಾನುವಾರ ರಾತ್ರಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಆಕೆಯ ಪಾಲಕರಿಗೆ ತಲುಪಿದೆ.
ಆದರೆ, ಮೃತಳ ಕತ್ತಿನ ಭಾಗದಲ್ಲಿ ಗಾಯದ ಗುರುತುಗಳು ಇರುವುದರಿಂದ ಆಕೆಯ ಪಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅತ್ತೆ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪವೂ ಇದೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ದೇವುನಿಪಲ್ಲಿ ಠಾಣಾ ಎಸ್ಐ ರವಿಕುಮಾರ್, ಮೃತಳ ಪಾಲಕರು ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.