ಸ್ಟುಡಿಯೋದಲ್ಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ತಯಾರಿ…! | ನಕಲಿ ಸರ್ಟಿಫಿಕೇಟ್ ಕೊಡುತ್ತಿದ್ದ ಪತ್ರಕರ್ತ ಖಾಖಿ ಬಲೆಗೆ

ಕೊಡಗು: ರಾಜ್ಯದ ಗಡಿ ಭಾಗದ ಚೆಕ್ ಪೋಸ್ಟ್ ಗಳಲ್ಲಿ ಸಂಚರಿಸುವ ವಾಹನ ಮತ್ತು ಅದರಲ್ಲಿ ಬರುವ ಪ್ರಯಾಣಿಕರು ಹಾಗೂ ಕಾಲು ನಡಿಗೆಯಲ್ಲಿ ಸಂಚರಿಸುವವರು ಕಡ್ಡಾಯವಾಗಿ 72 ಗಂಟೆಗಳ ಒಳಗೆ ಪಡೆದಿರುವ ಕೊರೋನಾ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು ಎಂಬ ಕಾನೂನು ಈಗಾಗಲೇ ಜಾರಿಯಲ್ಲಿದೆ. ಇದನ್ನೇ ಬಂಡವಾಳವಾಗಿಸಿಕೊಂಡು ನಕಲಿ ರಿಪೋರ್ಟ್ ನೀಡುತ್ತಿದ್ದ ಭೂಪ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ‌.

ಘಟನಾ ವಿವರ:

ಸೋಮವಾರ ಕುಟ್ಟ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಕುಟ್ಟ ಪೊಲೀಸ್ ಠಾಣಾ ಸಿಬ್ಬಂದಿ ಬಿ.ವಿ. ಹರೀಶ್ ಕುಮಾರ್ ಹಾಗು ಆರೋಗ್ಯ ಇಲಾಖೆಯ ನಾಗೇಂದ್ರ ಚೆಕ್ ಪೋಸ್ಟ್ ಗಳಲ್ಲಿ ಸಂಚರಿಸುವ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು ಈ ವೇಳೆ ಸಂಜೆ ಸುಮಾರು 4.45 ಗಂಟೆಗೆ, ಕೇರಳ ರಾಜ್ಯ ಕಡೆಯಿಂದ ಬಂದ KA-12-B-4623 ನೋಂದಣಿಯ ಒಂದು ಗೂಡ್ಸ್ ವಾಹನ ಪರಿಶೀಲಿಸಿದ್ದು ಲಾರಿಯಲ್ಲಿದ್ದ ಚಾಲಕ ಸಿದ್ದಾಪುರ ಬಳಿಯ ನೆಲ್ಲಿಹುದಿಕೇರಿಯ ಜಂಶೀರ್ ಎಂಬಾತನು ತೋರಿಸಿದ ಕರ್ನಾಟಕ ಸರಕಾರದ ಕೋವಿಡ್ ಆರ್ ಟಿಪಿಸಿಆರ್ (RTPCR )ನೆಗೆಟಿವ್ ವರದಿಯನ್ನು ಅದರ ಸಂಖ್ಯೆಯನ್ನು ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮೂಲಕ ಪರಿಶೀಲಿಸಿದಾಗ ಆ ವರದಿ ನಕಲಿ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಚಾಲಕ ಜಂಶೀರ್ ನನ್ನು ಈ ಬಗ್ಗೆ ವಿಚಾರಣೆಗೊಳಪಡಿಸಿದ್ದಾರೆ.

ವಿಚಾರಣೆ ವೇಳೆ ಆರ್ ಟಿಪಿಸಿಆರ್ ವರದಿಯನ್ನು ಸಿದ್ದಾಪುರದ ಪತ್ರಿಕೆ ವರದಿಗಾರ ಅಬ್ದುಲ್ ಅಜೀಜ್ ಎನ್ನುವವನು ಕೇರಳಕ್ಕೆ ಪ್ರಯಾಣಿಸುವವರಿಗೆ ಆತನ ಸ್ಟುಡಿಯೋದಲ್ಲಿಯೇ ತಯಾರಿಸಿ ನೆಗೆಟಿವ್ ರಿಪೋರ್ಟ್ ನೀಡುತ್ತಿರುವುದಾಗಿ ತಿಳಿಸಿದ್ದಾನೆ. ಅದರಂತೆ ಕೂಡಲೇ ಕಾರ್ಯಪ್ರವೃತ್ತರಾದ ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ಅನೂಪ ಮಾದಪ್ಪ ಹಾಗು ಸಿಬ್ಬಂದಿಯವರು ಸಿದ್ದಾಪುರದ ಪತ್ರಕರ್ತ ಅಬ್ದುಲ್ ಅಜೀಜ್ ನನ್ನು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟ್ಟ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಶ್ಲಾಘಿಸಲಾಗಿದೆ.

Leave A Reply

Your email address will not be published.