ನಿಯಮಮೀರಿ ಅನಗತ್ಯ ಸಂಚಾರ ಮಾಡಿದ ವ್ಯಕ್ತಿಗಳಿಗೆ ಇನ್ನು ಮುಂದೆ ಕಸ ಹೆಕ್ಕುವ ಕೆಲಸ, ಕಸ ವಿಲೇವಾರಿಗೆ ಅವರ ವಾಹನಗಳೇ ಬಳಕೆ !

ಉಡುಪಿ: ಲಾಕ್ ಡೌನ್ ಅವಧಿ ಸಂದರ್ಭ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮಬಾಹಿರವಾಗಿ ಓಡಾಡುತ್ತಿದ್ದ ವಾಹನಗಳನ್ನು ತಡೆ ಹಿಡಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಅದೇ ವಾಹನದವರಿಂದಲೇ ಕಸ- ತ್ಯಾಜ್ಯ ವಿಲೇವಾರಿ ಮಾಡಿಸುವ ಮೂಲಕ ವಾಹನ ಸವಾರರಿಗೆ ಕಟು ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66 ರ ಆಭರಣ ಮೋಟರ್ಸ್ ಎದುರಿನಿಂದ ಕಾಂಚನ ಮೋಟಾರ್ಸ್ ವರೆಗೆ ಹೆದ್ದಾರಿ ಬದಿ ಬಿದ್ದಿದ್ದ ಕಸ- ತ್ಯಾಜ್ಯ ರಾಶಿಯನ್ನು ಈ ವೃಥಾ ಸಂಚಾರಿಗಳ ವಾಹನಕ್ಕೆ ತುಂಬಿಸಿ ಅಲೆವೂರಿನ ಡಂಪಿಂಗ್ ಯಾರ್ಡ್ ಗೆ ಸಾಗಿಸಿದರು.

ಇನ್ನು ಮುಂದೆ ನಿಯಮಾವಳಿ ಉಲ್ಲಂಘಿಸಿದರೆ ಅಂತಹ ವಾಹನಗಳನ್ನು ಲಾಕ್ ಡೌನ್ ಮುಗಿಯುವವರೆಗೂ ಕಸ ವಿಲೇವಾರಿ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಸದಾಶಿವ ಪ್ರಭು ಖಡಕ್ ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.