ಮಂಗಳೂರು : ಮೇಲ್ಸೇತುವೆಯಲ್ಲಿ ಸ್ಕೂಟರ್‌ಗೆ ಕಾರು ಡಿಕ್ಕಿ | ಸೇತುವೆಯಿಂದ ಕೆಳಗೆ ಎಸೆಯಲ್ಪಟ್ಟು ಮಹಿಳೆ ಸಾವು

ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ತಾಯಿ- ಮಗಳು ಸಂಚರಿಸುತ್ತಿದ್ದ ಸ್ಕೂಟರಿಗೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಕಾರು ಡಿವೈಡರ್ ನೆಗೆದು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಕೂಟರ್ ನಲ್ಲಿದ್ದ ಮಹಿಳೆ ಮೇಲ್ಸೇತುವೆಯಿಂದ ಕೆಲಗೆಸೆಯಲ್ಪಟ್ಟು ದಾರುಣ ಸಾವನ್ನಪಿರುವ ಘಟನೆ ನಡೆದಿದೆ.

ಕುಂಪಲ ಆಶ್ರಯ ಕಾಲೋನಿ ನಿವಾಸಿ ವಸಂತಿ ನಾಯರ್ (45) ಮೃತ ಮಹಿಳೆ. ವಸಂತಿ ಇಂದು ಬೆಳಗ್ಗೆ ಜಪ್ಪಿನ ಮೊಗರಿನಲ್ಲಿರುವ ತನ್ನ ತಾಯಿಯನ್ನು ನೋಡಲು ಮಗಳ ಜೊತೆ ತೆರಳುತ್ತಿರುವ ವೇಳೆ ಅಪಘಾತ ನಡೆದಿದೆ. ಮೇಲ್ಸೇತುವೆ ಮೇಲಿಂದ ತಲಪಾಡಿಗೆ ಧಾವಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ನೆಗೆದು ಸ್ಕೂಟರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಹಿಂಬದಿ ಸವಾರೆಯಾಗಿದ್ದ ವಸಂತಿ ಮೇಲ್ಸೇತುವೆಯಿಂದ 20 ಅಡಿಯಷ್ಟು ಆಳಕ್ಕೆ ಎಸೆಯಲ್ಪಟ್ಟಿದ್ದು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದಾರೆ.

ಸ್ಕೂಟರ್ ಚಲಾಯಿಸುತ್ತಿದ್ದ ವಸಂತಿ ಅವರ ಮಗಳು ಶ್ರೀಜ ಅವರೂ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾರು ಚಾಲಕನ ಅತಿ ವೇಗದ ಮತ್ತು ಧಾವಂತದ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.‌ ವಸಂತಿಯವರ ಪತಿ ಇತ್ತೀಚೆಗಷ್ಟೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಮೃತ ವಸಂತಿ ಓರ್ವ ಪುತ್ರಿ ,ಪುತ್ರನನ್ನು ಅಗಲಿದ್ದಾರೆ‌.

Leave A Reply

Your email address will not be published.