ಗಂಡ-ಹೆಂಡತಿಯ ಮಧ್ಯೆ ಬಂದು ಪ್ರಾಣಕಳೆದುಕೊಂಡ ಮೂರನೇ ವ್ಯಕ್ತಿ ಅಷ್ಟಕ್ಕೂ ಅಲ್ಲಿ ಆದದ್ದಾದರೂ ಏನು?

ಗಂಡ ಹೆಂಡತಿ ಜಗಳ ಎಲ್ಲಾ ಕಡೆಗಳಲ್ಲೂ ಸರ್ವೇಸಾಮಾನ್ಯ. ಹಾಗೆಯೇ ಭಾರತದ ಕೆಲವು ಊರುಗಳಲ್ಲಿ ಮಾಮೂಲಾಗಿ ಇರುತ್ತದೆ. ಆದರೆ ಇಲ್ಲೊಂದು ಜಗಳ ಒಬ್ಬರ ಪ್ರಾಣವನ್ನೇ ಕಸಿದುಕೊಂಡಿದೆ.ನೆರೆಮನೆಯ ಗಂಡ, ಹೆಂಡತಿ ಜಗಳ ಬಿಡಿಸಲು ಹೋದ ಯುವಕನೊಬ್ಬ ಅನ್ಯಾಯವಾಗಿ ಪ್ರಾಣಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಪ್ರೇಮನಗರದಲ್ಲಿ ನಡೆದಿದೆ.

ಮೃತ ಯುವಕನನ್ನು ಅರ್ಜುನ್ ಎಂದು ಗುರುತಿಸಲಾಗಿದೆ. ಅರ್ಜುನ್ ಅವರ ಪಕ್ಕದ ಮನೆಯ ನಿವಾಸಿಯಾದ ನವೀನ್ ಕುಮಾರ್ ಕೆಲಸ ಕಳೆದುಕೊಂಡಿದ್ದ, ಹಾಗೂ ಇದೇ ವಿಷಯಕ್ಕೆತನ್ನ ಹೆಂಡತಿ ದೀಪಮಾಲಾ ಜೊತೆಗೆ ಜಗಳವಾಡುತ್ತಿದ್ದ. ಅವರ ಜಗಳ ಬಿಡಿಸಲು ಅರ್ಜುನ್ ಹೋಗಿದ್ದಾನೆ. ಆದರೆ ಈ ವೇಳೆ ನವೀನ್ ಕುಮಾರ್ ಅರ್ಜುನ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಅರ್ಜುನ್‌ಗೆ ತೀವ್ರ ರಕ್ತಸ್ರಾವವಾಗಿದೆ.

ಗಾಯಗೊಂಡಿರುವ ಅರ್ಜುನ್‌ನನ್ನು ಅವರ ಕುಟುಂಬ ಆಸ್ಪತ್ರೆಗೆ ಕರೆದೊಯ್ಯುವ ಬದಲು ಪೊಲೀಸ್ ಠಾಣೆಗೆ ಕರೆದೊಯ್ದಿತು. ದೂರು ನೀಡಿದ ನಂತರ, ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅರ್ಜುನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಪೊಲೀಸ್ ಠಾಣೆಯ ಬದಲು ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ ಆತ ಬದುಕುಳಿಯುತ್ತಿದ್ದನೇನೋ!?

ಆರೋಪಿ ನವೀನ್‌ನನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ತಲೆಗೆ ಪೆಟ್ಟಾಗಿ ಮೃತಪಟ್ಟಿರುವುದು ಕಂಡುಬರುತ್ತದೆ. ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಎಂದು ಬರೇಲಿ ಎಸ್‌ಎಸ್‌ಪಿ ರೋಹಿತ್ ಸಿಂಗ್ ಸಜ್ಜಾನ್ ಹೇಳಿದ್ದಾರೆ.

ಈತ ನೆರೆಮನೆಯವರಿಗೆ ಜಗಳ ನಿಲ್ಲಿಸಲು ಸಹಾಯ ಮಾಡಿ ಅಸಹಾಯಕನಾಗಿ ಸತ್ತು ಹೋಗಿದ್ದಾನೆ. ಒಂದೊಮ್ಮೆ ಇತರರಿಗೆ ಸಹಾಯ ಮಾಡುವುದು ಕೂಡ ನಮ್ಮ ಜೀವಕ್ಕೆ ಕುತ್ತು ತಂದಿಡಬಹುದು ಎಂಬುದು ಈ ಪ್ರಕರಣದಿಂದ ತಿಳಿದುಬರುತ್ತದೆ.

Leave A Reply

Your email address will not be published.