ಜೆರುಸಲೇಮ್: ಮೊದಲಿನಿಂದಲೂ ಇಸ್ರೇಲ್ ದೇಶಕ್ಕೆ ಭಾರತದ ಮೇಲೆ ಅಪಾರ ಗೌರವ ಹಾಗೂ ಅಭಿಮಾನವಿದೆ ಎಂದು ಹೇಳಲಾಗುತ್ತಿದೆ. ಇದು ಮತ್ತೊಮ್ಮೆ ಅಕ್ಷರಶಃ ಸತ್ಯ ಎಂದು ಸಾಬೀತಾದಂತಾಗಿದೆ. ಇಸ್ರೇಲ್ ದೇಶದ ಅಧ್ಯಕ್ಷ ಭಾತರದ ಒಬ್ಬಳು ಸಾಮಾನ್ಯ ಮಹಿಳೆಯ ಮನೆಗೆ ಕರೆಮಾಡಿ ಮಾತನಾಡಿ ಸಾಂತ್ವನ ಹೇಳುವುದಾದರೆ ಇಸ್ರೇಲ್ ಗೆ ಭಾರತದ ಮೇಲಿನ ಗೌರವ ಎಷ್ಟಿದೆ ಎಂಬುದನ್ನು ಅಳೆಯಲಾಗದು.
ಕಳೆದ ವಾರ ಪ್ಯಾಲೆಸ್ತಿನ್ ಉಗ್ರರ ದಾಳಿಗೆ ಮೃತಪಟ್ಟ, ಇಸ್ರೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಸೌಮ್ಯ ಸಂತೋಷ್ ಮನೆಯವರೊಂದಿಗೆ ಇಸ್ರೇಲ್ ಅಧ್ಯಕ್ಷರು ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.
ಇಸ್ರೇಲ್ ಅಧ್ಯಕ್ಷ ರೂವನ್ ರಿವ್ಲಿನ್ ಅವರು ಕರೆ ಮಾಡಿ ಮಾತನಾಡಿರುವ ಬಗ್ಗೆ ಅವರ ಸಲಹೆಗಾರ ಪಿಟಿಐಗೆ ಖಚಿತಪಡಿಸಿದ್ದಾರೆ.
ನಡೆದದ್ದು ಏನು..?
ಕೇರಳದ ಇಡುಕ್ಕಿ ಜಿಲ್ಲೆಯ 30 ವರ್ಷದ ಸೌಮ್ಯ ಸಂತೋಷ್ ಅವರು ಇಸ್ರೇಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಇಸ್ರೇಲ್ ನ ಕರಾವಳಿ ನಗರ ಅಶ್ಕೆಲೊನ್ ನಲ್ಲಿ80 ಪ್ರಾಯದ ಮಹಿಳೆಯನ್ನು ಆರೈಕೆ ಮಾಡುವ ಕೆಲಸದಲ್ಲಿದ್ದರು.
ಸೌಮ್ಯ ಅವರು ಕಳೆದ ಏಳು ವರ್ಷಗಳಿಂದ ಇಸ್ರೇಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಒಂಬತ್ತು ವರ್ಷದ ಮಗನಿದ್ದು, ಆತನನ್ನು ಪತಿ ಸಂತೋಷ್ ಜೊತೆ ಕೇರಳದಲ್ಲಿ ಬಿಟ್ಟು ಸೌಮ್ಯ ಇಸ್ರೇಲ್ ಗೆ ತೆರಳಿದ್ದರು.
ಮೇ 11 ರಂದು ಸೌಮ್ಯ ತನ್ನ ಪತಿ ಸಂತೋಷ್ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡುವ ವೇಳೆ ಗಾಜಾದಿಂದ ಬಂದ ರಾಕೆಟೊಂದು ಆಕೆ ಕೆಲಸ ಮಾಡುತ್ತಿದ್ದ ಮನೆಗೆ ಅಪ್ಪಳಿಸಿತ್ತು. ಘಟನೆಯಲ್ಲಿ ಸೌಮ್ಯ ಸಾವನ್ನಪ್ಪಿದ್ದು, ವೃದ್ಧ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸೌಮ್ಯ ಕೆಲಸ ಮಾಡುತ್ತಿದ್ದ ಮನೆಯಿಂದ ರಾಕೆಟ್ ದಾಳಿಯಿಂದ ರಕ್ಷಣೆ ಪಡೆಯುವ ಕಟ್ಟಡ ಅನತಿ ದೂರದಲ್ಲಿತ್ತು. ಆದರೆ ಇವರಿಗೆ ಅಲ್ಲಿಗೆ ತೆರಳಲಾಗಿರಲಿಲ್ಲ. ಮೇ.14ರಂದು ಸೌಮ್ಯ ಅವರ ಮೃತದೇಹವನ್ನು ಕೇರಳಕ್ಕೆ ತರಲಾಗಿತ್ತು.