ಉಡುಪಿ | ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿಗೆ ಬೈಕ್ ಸವಾರ ಡಿಕ್ಕಿ, ತಂತಿ ಉರುಳಾಗಿ ಗೋಣು ತುಂಡಾಗಿ ಸ್ಥಳದಲ್ಲೇ ಸಾವು

ಉಡುಪಿಯಲ್ಲಿ ವಿದ್ಯುತ್ ಗುತ್ತಿಗೆದಾರರೊಬ್ಬರ  ನಿರ್ಲಕ್ಷ್ಯದಿಂದಾಗಿ ದ್ವಿಚಕ್ರ ವಾಹನ ಸವಾರರೊಬ್ಬರು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಂತಾಗಿದೆ.

ರಸ್ತೆಯಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ಕೊರಳಿಗೆ ಉರುಳಿನಂತೆ ಸಿಕ್ಕಿಹಾಕಿಕೊಂಡಿದ್ದರಿಂದ ಆ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೈಂದೂರಿನ ಹೇರೂರು-ಅರೆಹೊಳೆ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು,ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಆಲಗದ್ದೆ ಯರುಕೋಣೆ ನಿವಾಸಿ ಶೇಖರ್ ಶೆಟ್ಟಿ (68) ಮೃತಪಟ್ಟವರು.

ನಿನ್ನೆ ರಾತ್ರಿ ಬೈಂದೂರು ಸುತ್ತಮುತ್ತ ಸುರಿದ ಭಾರಿ ಗಾಳಿಮಳೆಯಿಂದಾಗಿ ವಿದ್ಯುತ್ ತಂತಿಗಳು ಬಿದ್ದಿದ್ದವು. ವಿದ್ಯುತ್ ತಂತಿಗಳನ್ನು ದುರಸ್ತಿ ಪಡಿಸುವ ಸಂದರ್ಭ ರಸ್ತೆಯಲ್ಲಿ ಯಾವುದೇ ಸೂಚನ ಫಲಕಗಳನ್ನು ಅಳವಡಿಸದೆ ಗುತ್ತಿಗೆದಾರ ತನ್ನ ಕಾಮಗಾರಿ ಮುಂದುವರೆಸಿದ್ದ.

ಅಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ವೇಳೆ ಒಂದು ವಿದ್ಯುತ್ ತಂತಿ ಆಳೆತ್ತರದಲ್ಲಿ ನೇತಾಡುತ್ತಿತ್ತು. ಆಗ ಅದೇ ದಾರಿಯಲ್ಲಿ ಬೈಕ್ ನಲ್ಲಿ ಬರುತ್ತಿದ್ದ ಶೇಖರ್ ಶೆಟ್ಟಿ ಅವರು ಎಂದಿನಂತೆ ಬೈಕಿನಲ್ಲಿ ಮುಂದೆ ಸಾಗಿದ್ದಾರೆ. ಆಗ ಅಲ್ಲಿದ್ದ ತಂತಿ ಕೊರಳಿಗೆ ಉರುಳಿನಂತೆ ಸಿಕ್ಕಿ ಹಾಕಿಕೊಂಡಿದೆ. ಪರಿಣಾಮ ಅವರು ಗೋಣು ಮುರಿದು ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.