ಕುಂದಾಪುರ: ಒಂದೇ ವಾರದಲ್ಲಿ ಅಣ್ಣ- ತಮ್ಮ ಇಬ್ಬರೂ ಕೊರೊನಾಗೆ ಬಲಿ

ಒಬ್ಬ ಮಗನನ್ನು ಕಳೆದುಕೊಂಡ ಕೆಲ ದಿನಗಳಲ್ಲೇ ಇನ್ನೊಬ್ಬ ಮಗನೂ ನಿನ್ನೆ ಕೊರೊನಾಗೆ ಬಲಿಯಾದ ಬಗ್ಗೆ ಉಡುಪಿ‌ ಜಿಲ್ಲೆಯ ಕುಂದಾಪುರದಿಂದ ವರದಿಯಾಗಿದೆ.

ಕುಂದಾಪುರದ ನಾಡ ಗುಡ್ಡೆಯಂಗಡಿ ಸಂಸಾಡಿಯ ಶಿವರಾಮ ಗಾಣಿಗರ ಇಬ್ಬರು ಪುತ್ರರಾದ ವೀರೇಂದ್ರ (33) ಮತ್ತು ವಿಶ್ವನಾಥ (31) ಕೊರೊನಾದಿಂದ ಮೃತರಾದವರು. ಹಿರಿಯ ಪುತ್ರ ವೀರೇಂದ್ರ 8 ತಿಂಗಳ ಹಿಂದೆಯಷ್ಟೇ ತೀರ್ಥಹಳ್ಳಿಯ ಅನಾಥ ಯುವತಿಯನ್ನು ಮದುವೆಯಾಗಿದ್ದರು.

“ದೇವರು ನಮ್ಮ ಪಾಲಿಗೆ ನಿಜವಾಗಲೂ ಇಲ್ಲ ಅಂತ ಅನಿಸಿಬಿಡ್ತು. ಅಯ್ಯೋ ವಿಧಿಯೇ… ಒಂದೇ ವಾರದಲ್ಲಿ ಅಣ್ಣ-ತಮ್ಮ ಇಬ್ಬರೂ ಇನ್ನಿಲ್ಲವಾದರು. ನಮಗೆ ತುಂಬಾ ನೋವು ಆಗ್ತಾ ಇದೆ. ಆದ್ರೆ, ದೇವರಲ್ಲಿ ಕೇಳೋದು ಇಷ್ಟೇ… ಇದ್ದ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ತಂದೆ- ತಾಯಿಗೆ ಹಾಗೂ ಸೊಸೆಗೆ ನೋವನ್ನು ಭರಿಸುವ ಶಕ್ತಿ ಕೊಡು” ಎಂದು ಗ್ರಾಮದ ಜನರು ಪ್ರಾರ್ಥಿಸಿದರು.

ವೀರೇಂದ್ರ ಹಾಗೂ ವಿಶ್ವನಾಥ ಗಾಣಿಗ ಇಬ್ಬರೂ ಬೆಂಗಳೂರಿನಲ್ಲಿ ಸಣ್ಣದೊಂದು ಹೋಟೆಲಿನಲ್ಲಿ ಜೊತೆಯಲ್ಲಿದ್ದರು. ವಾರದ ಹಿಂದೆ ಬೆಂಗಳೂರಿನಿಂದ ವೀಡಿಯೊ ಕಾಲ್ ಮಾಡಿ ಮನೆಯವರ ಜೊತೆ ವೀರೇಂದ್ರ ಮಾತನಾಡಿದ್ದಾರೆ. ಸಾಯುವ 2 ದಿನದ ಹಿಂದೆ ವಿಶ್ವನಾಥನೂ ಮಾತನಾಡಿದ್ದಾರೆ,ವಿಧಿ ವಿಪರ್ಯಾಸ ಮನೆಗೆ ಬೆಳಕಾಗಿದ್ದ ಎರಡು‌ ದೀಪಗಳು ಆರಿಹೋದವು ಎಂದು ಮನೆಯವರು ದುಃಖ ತೋಡಿಕೊಳ್ಳುತ್ತಿದ್ದಾರೆ.

ಕೋವಿಡ್ ವ್ಯಾಪಕವಾಗಿ ಪ್ರಸರಣವಾಗುತ್ತಿದ್ದು,ಯಾವುದೇ ಜ್ವರ ಸಂಬಂಧಿ ಲಕ್ಷಣ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.ಕೋವಿಡ್ ಕುರಿತು ಎಲ್ಲರೂ ಜಾಗೃತಿ ವಹಿಸಿಕೊಳ್ಳುವುದು ಅಗತ್ಯ.

Leave A Reply

Your email address will not be published.