‘ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಕೊರೊನಾ ವೈರಸ್‌ ಸಹ ಜೀವಿ, ಅದಕ್ಕೂ ಜೀವಿಸುವ ಹಕ್ಕಿದೆ’ ಎಂದ ಉತ್ತರಾಖಂಡದ ಮಾಜಿ ಸಿಎಂ ರಾವತ್‌ ಹೇಳಿಕೆಗೆ ವ್ಯಾಪಕ ಟೀಕೆ

‘ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಕೊರೊನಾ ವೈರಸ್‌ ಸಹ ಜೀವಿಯಾಗಿದ್ದು, ಅದಕ್ಕೂ ಜೀವಿಸುವ ಹಕ್ಕಿದೆ’ ಎಂದು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಅವರ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆಗೆ ಮತ್ತು ಟ್ರೊಲ್ ಗೆ ಗುರಿಯಾಗಿದೆ.

ನ್ಯೂಸ್‌ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಾವತ್, ‘ತಾತ್ವಿಕ ದೃಷ್ಟಿಕೋನದಿಂದ ನೋಡುವುದಾದರೆ, ಕೊರೊನಾ ವೈರಸ್‌ ಸಹ ಒಂದು ಜೀವಿ. ಉಳಿದ ಎಲ್ಲರಂತೆ ಅದಕ್ಕೂ ಜೀವಿಸುವ ಹಕ್ಕಿದೆ. ಆದರೆ ನಾವು (ಮನುಷ್ಯರು) ನಾವೇ ಅತಿ ದೊಡ್ಡ ಬುದ್ಧಿವಂತರು ಎಂದು ಭಾವಿಸುತ್ತೇವೆ ಹಾಗೂ ಅದನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿದ್ದೇವೆ. ಹಾಗಾಗಿ ಅದು ತಾನಾಗಿಯೇ ನಿರಂತರವಾಗಿ ರೂಪಾಂತರಗೊಳ್ಳುತ್ತಿದೆ’ ಎಂದು ವಿಶ್ಲೇಷಿಸಿದ್ದಾರೆ.

ದೇಶದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿಯ ಮುಖಂಡ ನೀಡಿರುವ ಈ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಮೇಲೆ ಟ್ರೊಲ್ ಆಗುತ್ತಿದೆ. ‘ಈ ಜೀವಂತ ವೈರಸ್‌ಗೆ ಸೆಂಟ್ರಲ್‌ ವಿಸ್ತಾದಲ್ಲಿ ಸೂರು ಒದಗಿಸಬೇಕು’ ಎಂದು ಟ್ವೀಟಿಗರು ವ್ಯಂಗ್ಯವಾಡಿದ್ದಾರೆ.

ಉತ್ತರಾಖಂಡದ ಕಾಂಗ್ರೆಸ್‌ ಉಪಾಧ್ಯಕ್ಷ ಸೂರ್ಯಕಾಂತ್‌ ಧಸಮಾನಾ ಅವರು ರಾವತ್‌  ಹೇಳಿಕೆಯ ವಿಡಿಯೊ ಹಂಚಿಕೊಂಡು ಟೀಕಿಸಿದ್ದಾರೆ. ‘ಇದು ಅಸಂಬದ್ಧ ಮತ್ತು ಮೂರ್ಖತನವಾಗಿದೆ. ಅವರ ಪಕ್ಷವು ಅವರನ್ನು ಮಧ್ಯದಲ್ಲೇ ಅಧಿಕಾರದಿಂದ ಬದಲಿಸಿತು. ಅಲ್ಲಿಂದ ಆತ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ‘ ಎಂದು ಟೀಕಿಸಿದ್ದಾರೆ.

Leave A Reply

Your email address will not be published.