ಕೊರೋನಾಘಾತದಿಂದ ಕಂಗೆಟ್ಟ ತರಕಾರಿ ಕೃಷಿಕರಿಗೆ ನ್ಯಾಯ ಒದಗಿಸಲು ಎಪಿಎಂಸಿ ಸಿದ್ದ -ದಿನೇಶ್ ಮೆದು

ಸವಣೂರು: ಕೋವಿಡ್ -೧೯ ಸೋಂಕಿನ ೨ನೇ ಅಲೆಗೆ ಸಂಬಂಧಿಸಿ ಜನತಾ ಕರ್ಫ್ಯೂವಿನಿಂದ ಸೆಮಿಲಾಕ್‌ಡೌನ್ ತನಕವೂ ಕೃಷಿಕರಿಗೆ ತೊಂದರೆ ಆಗಿದೆ. ಕೃಷಿಕರು ಬೆಳೆದ ತರಕಾರಿ, ಕೃಷಿ ಉತ್ಪನ್ನಗಳನ್ನು ಪುತ್ತೂರು ಎಪಿಎಂಸಿ ಯಾರ್ಡ್‌ನ ರಖಂ ವ್ಯಾಪಾರಸ್ಥರು ಖರೀದಿಸುವ ಮೂಲಕ ಕೃಷಿಕರಿಗೆ ನ್ಯಾಯ ಒದಗಿಸಲು ಎಪಿಎಂಸಿ ಮುಂದಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರು ತಿಳಿಸಿದ್ದಾರೆ.

ಕಡಬ ತಾಲೂಕಿನ ಕಾಣಿಯೂರು ವ್ಯಾಪ್ತಿಯ ಚಾರ್ವಾಕ ಗ್ರಾಮದಲ್ಲಿ ಲಾಕ್‌ಡೌನಿಂದಾಗಿ ಫಸಲನ್ನು ದೂರದ ಮಂಗಳೂರಿನ ವ್ಯಾಪಾರಸ್ಥರ ಬಳಿ ಸಾಗಾಟ ಮಾಡುವುದೆ ಸಮಸ್ಯೆಯಾಗಿದೆ. ಅತ್ತ ವ್ಯಾಪಾರಸ್ಥರು ಗ್ರಾಹಕರಿಲ್ಲದೆ ವ್ಯಾಪಾರವಿಲ್ಲ ತರಕಾರಿ ಇತ್ತ ತರಬೇಡಿ ಎನ್ನುತ್ತಾರೆ.

ಲಾಕ್‌ಡೌನಿಂದಾಗಿ ತೊಂದರೆಯಾಗಿರುವ ಕೃಷಿಕರ ಸಮಸ್ಯೆಯನ್ನು ಗಮನಿಸಿದ ಎಪಿಎಂಸಿ ಅಧ್ಯಕ್ಷರು ಮೇ 10ರಂದು ಎಪಿಎಂಸಿ ಯಾರ್ಡ್‌ನಲ್ಲಿರುವ ರಖಂ ತರಕಾರಿ ವ್ಯಾಪಾರಸ್ಥರಲ್ಲಿ ಮಾತುಕತೆ ನಡೆಸಿ ಊರಿನ ತರಕಾರಿ ಬೆಳೆಯುವ ಕೃಷಿಕರಿಗೆ ಉತ್ತಮ ಬೆಲೆಗೆ ತರಕಾರಿ ಖರೀದಿಸುವಂತೆ ತಿಳಿಸಿದ್ದಾರೆ.

ಇದಕ್ಕೆ ವ್ಯಾಪಾರಸ್ಥರು ಒಪ್ಪಿಕೊಂಡಿದ್ದಾರೆ ಎಂದು ದಿನೇಶ್ ಮೆದು ತಿಳಿಸಿದ್ದಾರೆ.

ನನಗೆ ಕೆಲವು ಮಂದಿ ಕೃಷಿಕರು ದೂರವಾಣಿ ಮೂಲಕ ಬೆಳೆದ ಕೃಷಿಗೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ ಎಂದ ದಿನೇಶ್ ಮೆದು ಅವರು ರೈತರು ಬೆಳೆದ ತರಕಾರಿ ಅಥವಾ ಕೃಷಿ ಉತ್ಪನ್ನಗಳನ್ನು ನೇರವಾಗಿ ಎಪಿಎಂಸಿ ಯಾರ್ಡ್‌ನಲ್ಲಿರುವ ಮಾರಕಟ್ಟೆಗೆ ತಂದೊಪ್ಪಿಸಿದ್ದಲ್ಲಿ ರಖಂ ವ್ಯಾಪಾರಸ್ಥರು ಅದಕ್ಕೆ ಸರಿಯಾದ ಬೆಲೆ ನೀಡುತ್ತಾರೆಂಬ ಭರವಸೆ ನೀಡಿದ್ದಾರೆ. ಆ ಮೂಲಕ ರೈತರು ನಷ್ಟ ಹೊಂದರೆ ಅವರು ಬೆಳೆದ ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗಲಿದೆ. ರೈತರಿಗೆ ನ್ಯಾಯ ಒದಗಿಸುವ ಕೆಲಸ ಎಪಿಎಂಸಿ ಮಾಡುತ್ತದೆ. ಕೃಷಿಕರು ಬೆಳೆದ ಕೃಷಿ ಉತ್ಪನ್ನಗಳನ್ನು ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರಕಾರದ ಮಾರ್ಗಸೂಚಿಯಂತೆ ಬೆಳಿಗ್ಗೆ ಗಂಟೆ 9 ಗಂಟೆಯೊಳಗೆ ಎಪಿಎಂಸಿ ಯಾರ್ಡ್‌ಗೆ ತಲುಪಿಸಬೇಕೆಂದು ತಿಳಿಸಿದ್ದಾರೆ.

Leave A Reply

Your email address will not be published.