ಬಾಳೆತೋಟಕ್ಕೆ ನುಗ್ಗಿದ ಕಾಡಾನೆಗಳು ಎಲ್ಲಾ 300 ಬಾಳೆ ಗಿಡಗಳನ್ನು ನಾಶ ಮಾಡಿದ್ದವು, ಅದೊಂದು ಗಿಡವನ್ನು ಬಿಟ್ಟು !!!

ಆನೆ ಭೂಮಿಯ ಮೇಲೆ ವಾಸಿಸುತ್ತಿರುವ ಸಸ್ತನಿಗಳಲ್ಲಿ ಅತ್ಯಂತ ದೈತ್ಯ ಜೀವಿಗಳು. ಏಕೆಂದರೆ ಅವುಗಳ ದೇಹಶಕ್ತಿ ಮತ್ತು ದೇಹ ಪ್ರಕೃತಿ. ಆನೆಗಳು ತಮ್ಮ ಸೊಂಡಿಲುಗಳನ್ನು ಕೈಗಳ ತರಹ ಬಳಸಬಲ್ಲವು. ಆನೆಗಳು ಬುದ್ದಿವಂತಿಕೆಗೆ ಕೂಡಾ ಹೆಸರುವಾಸಿ. ತಮ್ಮ ಶಕ್ತಿ ಯುಕ್ತಿ ಬಳಸಿ ಮರಗಳನ್ನು ಉರುಳಿಸಬಲ್ಲ ಮತ್ತು ಒಂದೇ ಬಾರಿಗೆ ಎಲ್ಲವನ್ನು ವಿನಾಶ ಮಾಡಬಲ್ಲ ತಾಕತ್ತು ಆನೆಗಳಿಗೆ ಇದೆ. ಇತರ ಪ್ರಾಣಿಗಳಿಗೆ ಹೋಲಿಸಿದರೆ ಆನೆಗಳಿಗೆ ಹೆಚ್ಚು ಶಕ್ತಿ ಮತ್ತು ಯುಕ್ತಿಯ ಜತೆಗೆ, ಸಮಯಪ್ರಜ್ಞೆ, ಹೃದಯವಂತಿಕೆ ಕೂಡಾ ಇದೆ ಎನ್ನುವುದಕ್ಕೆ ಇದೀಗ ಒಂದು ಬಲವಾದ ಸಾಕ್ಷಿ ದೊರಕಿದೆ.

ಸದ್ಯ ಇದಕ್ಕೆ ಸಾಕ್ಷಿ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದೆ.

ತಮಿಳುನಾಡಿನ ಹಳ್ಳಿಯೊಂದರಲ್ಲಿ ಕಾಡು ಆನೆಗಳ ಗುಂಪು ಬಾಳೆ ತೋಟದ ಮೇಲೆ ದಾಳಿ ನಡೆಸಿ ಪುಂಡಾಟ ನಡೆಸಿವೆ. ಅಲ್ಲಿರುವ 300 ಕ್ಕೂ ಅಧಿಕ ಬಾಳೆ ಗಿಡಗಳನ್ನು ನೆಲಕ್ಕುರುಳಿಸಿವೆ ಸೀಳಿ ಬಿಸಾಕಿವೆ. ಇಡೀ ತೋಟವನ್ನು ಧ್ವಂಸ ಮಾಡಿ ಸಂಪೂರ್ಣ ನಾಶಪಡಿಸಿದ ಆನೆಗಳು ಅಲ್ಲಿಯೇ ಇದ್ದ ಒಂದು ಬಾಳೆ ಗಿಡವನ್ನು ಮಾತ್ರ ಮುಟ್ಟಿಲ್ಲ. ಅದು ಅಲ್ಲಿನ ಊರವರಿಗೆ ಸೋಜಿಗ ಎನಿಸಿದೆ.
ಯಾಕೆ ಆ ಬಾಳೆ ಗಿಡವನ್ನು ಅದು ಮುಟ್ಟಿಲ್ಲ ಎಂದು ಅವರು ಸೂಕ್ಷ್ಮವಾಗಿ ಗಮನಿಸಿದಾಗ ಆ ಬಾಳೆ ಗಿಡದಲ್ಲಿ ಪುಟ್ಟ ಪಕ್ಷಿಯೊಂದು ಗೂಡು ಕಟ್ಟಿ, ಮೊಟ್ಟೆಯಿಟ್ಟು ಮರಿ ಮಾಡಿತ್ತು. ಅದೇ ಕಾರಣಕ್ಕೆ ಆ ಗೂಡಿನ ಮರವನ್ನು ಮಾತ್ರ ಮುಟ್ಟದೆ ಹಾಗೆಯೇ ಬಿಟ್ಟು ಹೋಗಿದೆ. ಇದನ್ನು ನೋಡಿ ಇಡೀ ಗ್ರಾಮಸ್ಥರು ಬೆರಗಾಗಿದ್ದಾರೆ.

ಈ ವೀಡಿಯೋವನ್ನು ಅರಣ್ಯ ಸೇವೆ(ಐಎಫ್‍ಎಸ್) ಅಧಿಕಾರಿ ಸುಸಂತಾ ನಂದಾರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಕಾಡು ಆನೆಗಳು ಬಾಳೆ ತೋಟವನ್ನು ನಾಶಪಡಿಸಿದ್ದು, ಪುಟ್ಟ ಪುಟ್ಟ ಪಕ್ಷಿಗಳ ಮರಿಗಳಿದ್ದ, ಹಕ್ಕಿಯ ಗೂಡಿಗೆ ಮಾತ್ರ ಯಾವುದೇ ಹಾನಿಗೊಳಿಸದಿರುವುದನ್ನು ಕಾಣಬಹುದಾಗಿದೆ.

ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅನೇಕ ಮಂದಿ ವೀಕ್ಷಿಸಿದ್ದು, ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿ ಮಳೆಯೇ ಹರಿದುಬರುತ್ತಿದೆ.

Leave A Reply

Your email address will not be published.