ಅಂಬುಲೆನ್ಸ್ ಮನೆಬಾಗಿಲಿಗೆ ಬರುತ್ತಿದ್ದಂತೆ ಹೆದರಿ ಕಬ್ಬಿನ ಗದ್ದೆಯೊಳಗೆ ಮರೆಯಾದ ಸೋಂಕಿತ !

ಕೋವಿಡ್ ಆಸ್ಪತ್ರೆ ಚಿಕಿತ್ಸೆ ಕುರಿತು ಮಾದ್ಯಮಗಳಲ್ಲಿ ಇಲ್ಲಸಲ್ಲದ ವದಂತಿಗಳು ಹಬ್ಬಿದ್ದು, ಇದರಿಂದ ಸೋಂಕಿತಗೊಳಗಾದ ಜನರು ಆಸ್ಪತ್ರೆಗಳಿಗೆ ದಾಖಲಾಗಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಹಾವೇರಿಯ ತಾಂಡಾ ಗ್ರಾಮದಲ್ಲಿ ಸೋಂಕಿಗೊಳಗಾಗಿದ್ದ ವ್ಯಕ್ತಿಯೊಬ್ಬ ಕೊರೋಣಾ ಸೊಂಕಿತನಾಗಿದ್ದ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಮನೆ ಬಳಿ ಆ್ಯಂಬುಲೆನ್ಸ್ ಬಂದು ನಿಂತಾಗ ಆತ ಹೆದರಿ ಮನೆಯಿಂದ ಕಾಲ್ಕಿತ್ತಿರುವ ಘಟನೆ ನಡೆದಿದೆ. 

ಹಾವೇರಿ ತಾಂಡಾ ಗ್ರಾಮದಲ್ಲಿ 50 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿಗೊಳಗಾಗಿದ್ದರು. ಮಾಹಿತಿ ತಿಳಿದ ಆರೋಗ್ಯಾಧಿಕಾರಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಮನೆ ಬಳಿ ಆ್ಯಂಬುಲೆನ್ಸ್ ನ ಜತೆ ತೆರಳಿದ್ದಾರೆ. ಆ್ಯಂಬುಲೆನ್ಸ್ ಮನೆ ಬಾಗಿಲಲ್ಲಿ ಬಂದು ನಿಂತ ಕೂಡಲೇ ಕೂಡಲೇ ಆತಂಕಕ್ಕೊಳಗಾದ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿ ಬರುವೆನೆಂದು ಹೇಳಿ  ಮನೆಯ ಹಿಂದೆ ಇರುವ ಕಬ್ಬಿನ ಗದ್ದೆಯ ಒಳಗೆ ಸಾಗಿ ಕಣ್ಮರೆಯಾಗಿದ್ದಾನೆ. 

ಆತನ ಬರುವಿಕೆಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆಯ ಬಳಿಯೇ ಕಾದು ಕುಳಿತರೂ ಎಷ್ಟು ಹೊತ್ತಾದರೂ ವ್ಯಕ್ತಿ ಬಂದಿಲ್ಲ. ಆಗ ಆತ ಹೆದರಿ ತಪ್ಪಿಸಿಕೊಂಡ ವಿಚಾರ ನಡೆದಿದೆ. ಈ ಸುದ್ದಿ ಇಡೀ ಗ್ರಾಮಕ್ಕೆ ಹರಡಿದ್ದು, ಆತಂಕಕ್ಕೊಳಗಾದ ಗ್ರಾಮಸ್ಥರು ತಮ್ಮ ಮನೆಗಳ ಬಾಗಿಲು ಹಾಕಿದ್ದಾರೆ. ಆಶ್ಚರ್ಯಕರ ವಿಚಾರವೆಂದರೆ ಸೋಂಕಿತನ ಮನೆಯವರೂ ಕೂಡ ಮನೆ ಬಾಗಿಲು ಹಾಕಿಕೊಂಡಿದ್ದಾರೆ. 

ಮನೆಯಿಂದ ಕಾಲ್ಕಿತ್ತ ಸೋಂಕಿತ ವ್ಯಕ್ತಿ ಮೊಬೈಲ್ ಫೋನ್ ಕೂಡ ಸ್ವಿಟ್ಚ್ ಆಫ್ ಮಾಡಿಕೊಂಡಿದ್ದು,ಗ್ರಾಮದ ಹೊರವಲಯದಲ್ಲಿ ಇಡೀ ರಾತ್ರಿ ಕಾಲ ಕಳೆದಿದ್ದಾನೆ. ವೈದ್ಯಕೀಯ ವ್ಯವಸ್ಥೆ ನಿರ್ವಹಣೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳಿಂದ ವ್ಯಕ್ತಿ ಆತಂಕಕ್ಕೊಳಗಾಗಿದ್ದ.

ಆಶ್ಚರ್ಯಕರವೆಂಬಂತೆ ಸೋಂಕಿತ ವ್ಯಕ್ತಿ ಮರು ದಿನ ಬೆಳಿಗ್ಗೆ ಗ್ರಾಮಕ್ಕೆ ಬಂದಿದ್ದು, ಮನೆಯವರ ಮನವೊಲಿಕೆಯ ನಂತರ ಆಸ್ಪತ್ರೆಗೆ ದಾಖಲಾಗಲು ಒಪ್ಪಿಗೆ ನೀಡಿದ್ದಾನೆ. ಪ್ರಸ್ತುತ ಸೋಂಕಿತ ವ್ಯಕ್ತಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.