ದ.ಕ.ಜಿಲ್ಲೆಯಲ್ಲಿ ಪ್ರತ್ಯೇಕ ಪಾಸ್ ವ್ಯವಸ್ಥೆ ಇಲ್ಲ | ಕೆಲಸದ ಪೂರಕ ದಾಖಲೆ ಪತ್ರ ಇದ್ದರೆ ಸಾಕು-ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.

ಮಂಗಳೂರು: ಲಾಕ್ ಡೌನ್ ವೇಳೆ ತುರ್ತು ಆರೋಗ್ಯ ಸೇವೆ, ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮತ್ತು ಪರೀಕ್ಷೆಗಳಿಗೆ ಹಾಜರಾಗಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಿಲ್ಲ. ಪೂರಕ ದಾಖಲೆಪತ್ರಗಳೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.14 ದಿನಗಳ ಕಾಲ ಕರ್ಫ್ಯೂ ಮಾರ್ಗಸೂಚಿ ಹಾಗೂ ನಿರ್ಬಂಧ ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಲಿದೆ. ಅನುಮತಿಸಲಾದ ಸಂಚಾರ ವ್ಯವಸ್ಥೆ ಹೊರತುಪಡಿಸಿ ಇತರ ಎಲ್ಲ ಸಾರ್ವಜನಿಕ ಅಥವಾ ಖಾಸಗಿ ಬಸ್ಸುಗಳು, ಪ್ರಯಾಣಿಕರ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ತುರ್ತು ಸಂದರ್ಭ ಹೊರತುಪಡಿಸಿ ಪ್ರಯಾಣಿಕರ ವಾಹನಗಳ ಹೊರರಾಜ್ಯ ಹಾಗೂ ಹೊರಜಿಲ್ಲೆಗಳ ಸಂಚಾರಕ್ಕೂ ನಿರ್ಬಂಧವಿದೆ ಎಂದರು.

ಮದುವೆ ಕಾರ್ಯಕ್ರಮಕ್ಕೆ ಈ ಮೊದಲಿನಂತೆಯೇ ಅನುಮತಿ ನೀಡಲಾಗಿದೆ. ಅಂದರೆ ಕೇವಲ 50 ಜನರ ಮಿತಿಯೊಳಗೆ ಮದುವೆ ಕಾರ್ಯಕ್ರಮ ನೆರವೇರಿಸಬೇಕು. ಗ್ರಾಪಂ/ಸ್ಥಳೀಯಾಡಳಿತ / ಪಾಲಿಕೆಯಿಂದ ಮುಂಚಿತವಾಗಿ 50 ಜನರ ಅನುಮತಿ ಪಡೆದಿರಬೇಕು. ಮದುವೆ ದಿನ ಅನುಮತಿ ಪತ್ರದ ಪ್ರತಿ, ಮದುವೆಯ ಆಮಂತ್ರಣ ಪತ್ರ ತೋರಿಸಿ ತೆರಳಲು ಅವಕಾಶವಿದೆ. ಅಂತ್ಯಕ್ರಿಯೆಯಲ್ಲಿ ಕೇವಲ 5 ಮಂದಿ ಮಾತ್ರ ಭಾಗವಹಿಸಬಹುದು ಎಂದರು.

Leave A Reply

Your email address will not be published.