ದ.ಕ.ಕೊರೊನಾ ರಣಕೇಕೆ | ವೈದ್ಯೆ ಸಹಿತ ಮೂರು ಮಂದಿ ಬಲಿ, 486 ಮಂದಿಗೆ ಪಾಸಿಟಿವ್

ದ.ಕ.ಜಿಲ್ಲೆಯಲ್ಲಿ ಮಂಗಳವಾರ ಕೊರೋನಕ್ಕೆ ವೈದ್ಯೆ ಸಹಿತ ಮೂವರು ಬಲಿಯಾಗಿದ್ದಾರೆ.

ಮಂಗಳೂರಿನ ಇಬ್ಬರು ಮತ್ತು ಸುಳ್ಯ ತಾಲೂಕಿನ ಒಬ್ಬರು ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 751ಕ್ಕೇರಿದೆ.

ಮಂಗಳೂರಿನ ಇಂಡಿಯಾನ ಆಸ್ಪತ್ರೆಯ ಆಡಳಿತಾಧಿಕಾರಿ ಬಶೀರ್ ಅವರ ಮಗಳು ಅದೇ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ 27ವರ್ಷದ ಯುವ ವೈದ್ಯೆ ಕೋವಿಡ್ ಪಾಸಿಟಿವ್‌ನಲ್ಲಿ ಬೆಳಗ್ಗೆ 10.30ರ ಸಮಯದಲ್ಲಿ ಮೃತಪಟ್ಟಿದ್ದಾರೆ.

ಈ ಮಧ್ಯೆ ಮಂಗಳವಾರ 486 ಕೊರೋನ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಇದರೊಂದಿಗೆ 42,065 ಪಾಸಿಟಿವ್ ಪ್ರಕರಣಗಳು ಕಂಡು ಬಂದಂತಾಗಿದೆ. ಮಂಗಳವಾರ 225 ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳುವುದರೊಂದಿಗೆ ಈವರೆಗೆ 37,024 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಂತಾಗಿದೆ.

ಜಿಲ್ಲೆಯಲ್ಲಿ ಈವರೆಗೆ 7,24,128 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಆ ಪೈಕಿ 6,82,763 ಮಂದಿಯ ವರದಿ ನೆಗೆಟಿವ್ ಬಂದಿ್ದು, 4,290 ಸಕ್ರಿಯ ಪ್ರಕರಣವಿದೆ.

ಕೇರಳದ ಮಲಪ್ಪುರಂ ನಿವಾಸಿ ಗರ್ಭಿಣಿ ವೈದ್ಯೆರೊಬ್ಬರು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಲ್ಲಿ ಎಂಬಿಬಿಎಸ್ ವೈದ್ಯರಾಗಿ ಸೇವೆ ಸಲ್ಲಿಸಿ ಬಳಿಕ ವಿವಾಹವಾಗಿ ಮಲಪ್ಪುರಂನಲ್ಲಿ ವಾಸವಾಗಿದ್ದರು. ಅವರ ಮನೆಯಲ್ಲಿ ಎಲ್ಲರಿಗೂ ಜ್ವರ ಬಂದ ಕಾರಣ ಗರ್ಭಿಣಿಯಾಗಿದ್ದ ವೈದ್ಯೆಯು ಕೆಲವು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ರಾತ್ರಿಯಿಂದಲ್ಲೇ ಈ ವೈದ್ಯೆಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟರು. ಅವರಿಗೆ ಕೋವಿಡ್ ಸೋಂಕು ತಗಲಿತ್ತು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Leave A Reply

Your email address will not be published.