ಲಾಕ್ ಡೌನ್ ಸಂಬಂಧಿ ನಿರ್ಧಾರ ಇಂದು | ಸಚಿವ ಸಂಪುಟ ಸಭೆಯತ್ತ ಎಲ್ಲರ ಕಣ್ಣು

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ರಾಜ್ಯ ಸರ್ಕಾರ ಮೂರು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಿದೆ ಎನ್ನಲಾಗಿದೆ.

ರಾಜ್ಯದ ಲಾಕ್ ಡೌನ್ ಭವಿಷ್ಯ, ಲಸಿಕೆಗೆ ಶುಲ್ಕ ನಿಗದಿ ತೀರ್ಮಾನದ ಜೊತೆಗೆ ಶಿಕ್ಷಕರ ವರ್ಗಾವಣೆಗೆ ಸಮಸ್ಯೆಗೆ ಪರಿಹಾರ ಏನೆಂಬ ಪ್ರಶ್ನೆಗೆ ಇಂದು ಉತ್ತರ ಸಿಗುವ ಸಾಧ್ಯತೆ ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕನಿಷ್ಠ 2 ವಾರ ನಗರವನ್ನು ಲಾಕ್ ಡೌನ್ ಮಾಡುವುದು ಅನಿವಾರ್ಯ ಎಂದು ತಜ್ಞರು ಸಲಹೆ ನೀಡಿರುವುದರಿಂದ ಇಂದಿನ ಸಭೆಗೆ ಕಣ್ಣುನೆಟ್ಟು ಇಡೀ ರಾಜ್ಯ ಕೂತಿದೆ.

ಕೊರೊನಾ ನಿಯಂತ್ರಣಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇವತ್ತು ನಿರ್ಧರಿಸಬೇಕಾದ ವಿಷಯಗಳು :
1) ಇಡೀ ರಾಜ್ಯಕ್ಕೆ ಲಾಕ್ಡೌನ್ ಆಗುತ್ತಾ ಇಲ್ಲವಾ ?
2) ಬೆಂಗಳೂರಿಗೆ ಮಾತ್ರ ಲಾಕ್ಡೌನ್ ಸೀಮಿತವಾ ?
3) ಅಥವಾ ಈಗಿರುವ ಥರ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಲಾಕ್ಡೌನ್ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಮುಂದುವರೆಯುತ್ತದೆಯಾ ?

ಈ ಕುರಿತು ಇಂದಿನ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆಯಾಗಲಿದೆ. ರಾಜ್ಯಾದ್ಯಂತ ಮುಂದಿನ 15 ದಿನ ಲಾಕ್ ಡೌನ್ ಮಾಡುವ ಕುರಿತಂತೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದ್ದು ವಾರಾಂತ್ಯದ ಕರ್ಪ್ಯೂ ಅಥವಾ ಲಾಕ್ ಡೌನ್ ಮಾಡುವ ಸಂಬಂಧ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಸಹೋದ್ಯೋಗಿಗಳ ಜೊತೆ ಚರ್ಚಿಸಿದ್ದಾರೆ.

ಆದರೆ ಬಹುತೇಕ ಸಚಿವರು ವಾರಂತ್ಯದ ಕರ್ಪ್ಯೂ ಮುಂದುವರಿಸಲು ಒಲವು ತೋರಿದ್ದಾರೆ. ಆದರೆ ತಜ್ಞರು ಲಾಕ್ ಡೌನ್ ಗೆ ಸಲಹೆ ನೀಡಿದರೆ ಅದನ್ನು ಒಪ್ಪುವುದು ಕಷ್ಟ ಎಂದು ಎನ್ನಲಾಗಿದೆ.

Leave A Reply

Your email address will not be published.