ಬರಹಗಾರಿಕೆಯಲ್ಲೇ ಸವಾಲೊಡ್ದುವ ‘ಬರವುದ ಮಾಣಿಕ್ಯ ‘ – ಕೇಶವ ನೆಲ್ಯಾಡಿ | ನಾವಿಂದು ಪರಿಚಯಿಸುವ ತೆರೆಮರೆಯ ಪ್ರತಿಭಾವಂತ ಕಲಾವಿದ !

ಬರಹಗಾರಿಕೆ ಕೂಡಾ ಒಂದು ಅತ್ಯದ್ಭುತ ಕಲೆ ಎಂದೇ ನಂಬಿಕೆ. ಆ ನಂಬಿಕೆ ನಿಜಕ್ಕೂ ಸತ್ಯ. ಎಲ್ಲರೂ ಬರಹಗಾರರಾಗಲು, ಅಥವಾ ಅರ್ಥೈಸಲು ಅರ್ಹರಾಗಿರುವುದಿಲ್ಲ. ಬರಹವೇ ತನ್ನ ಸರ್ವಸ್ವ, ಕೂತಲ್ಲಿ ನಿಂತಲ್ಲಿ, ಕಣ್ಣಿಗೆ ಕಾಣದನ್ನು ಕಲ್ಪನೆ ಮಾಡಿಕೊಂಡು ಬರೆಯುವ ಕವಿಯು ನಮ್ಮ ಕನ್ನಡ ನಾಡಿಗೆ ಅನೇಕ ಪ್ರಶಸ್ತೀ ತಂದುಕೊಟ್ಟಿದ್ದಾರೆ.

ಇಂಥ ಕವಿ, ಲೇಖಕರ ಪಾಲಿಗೆ ಸೇರಿದ ಓರ್ವ ಧೀಮಂತ ವ್ಯಕ್ತಿ, ಕಷ್ಟದಿಂದಲೇ ಮೇಲೆ ಬಂದು ಉತ್ತಮ ಬರಹಗಾರರಾಗಿ ಅನೇಕ ನಾಟಕ, ಕವನಗಳನ್ನು ರಚಿಸಿ ನಿರ್ದೇಶಸಿ ಇದೀಗ ‘ಬರವುದ ಮಾಣಿಕ್ಯ’ ಎಂಬ ಬಿರುದನ್ನೂ ತನ್ನ ಮುಡಿಗೇರಿಸಿಕೊಂಡ ಉತ್ತಮ ಕವಿ ಕೇಶವ ನೆಲ್ಯಾಡಿ(ಕುಸಲ್ದ ಕಿಚ್ಚ) ನಾವಿಂದು ಪರಿಚಯಿಸುತ್ತಿರುವ ವ್ಯಕ್ತಿ.

ಜುಲೈ 07 1993 ರಲ್ಲಿ ಶ್ರೀ ಕೊರಗಪ್ಪ ಮತ್ತು ಶ್ರೀಮತಿ ವಾರಿಜ ದಂಪತಿಯ ಪುತ್ರನಾಗಿ ಜನಿಸಿದ ಇವರು ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕೊಣಾಲು ಶಾಲೆಯಲ್ಲಿ ಪೂರೈಸಿ, ಆ ಬಳಿಕ ತನ್ನ ಕಾಲೇಜ್ ಶಿಕ್ಷಣವನ್ನು ಉಪ್ಪಿನಂಗಡಿಯ ಪದವಿ ಕಾಲೇಜಿನಲ್ಲಿ ಪೂರೈಸಿದರು. ಬಾಲ್ಯದಿಂದಲೇ ಬರಹಗಾರಿಕೆಯಲ್ಲಿ ಉತ್ತಮ ಆಸಕ್ತಿ ತುಂಬಿಕೊಂಡು ತನ್ನ ಕಲ್ಪನೆಯಲ್ಲೇ ಸಣ್ಣ ಕಥೆ, ಕವನ ರಚಿಸಿ ಎಲ್ಲರಿಂದಲೂ ಮೆಚ್ಚುಗೆ ಪಡೆದುಕೊಂಡರಲ್ಲದೇ, ತನ್ನ ಮುಂದಿನ ಬರಹಗಾರಿಕೆಗೆ ಎಲ್ಲರ ಆಶೀರ್ವಾದವೇ ಉಡುಗೊರೆಯಾಗಿ ಕಾಡಿತ್ತು ಎಂದರೆ ತಪ್ಪಾಗದು.

ಬಳಿಕ ಕಂಪ್ಯೂಟರ್ ತರಬೇತಿಯನ್ನು ಪಡೆದು, ಹೊಟ್ಟೆಪಾಡಿಗಾಗಿ ಉಪ್ಪಿನಂಗಡಿಯ ವಸ್ತ್ರ ಮಳಿಗೆಯೊಂದರಲ್ಲಿ ಗುಮಾಸ್ತರಾಗಿ ಕೆಲಸ ನಿರ್ವಹಿಸುತ್ತಾ, ಕೆಲಸದ ಜೊತೆಗೆ ಬರಹಕ್ಕೂ ತನ್ನ ಸಮಯ ಮೀಸಲಿರಿಸಿದರು.

ಬರಹಗಾರರೆಂದರೆ ಹೀಯಾಳಿಸುವ ಜನರ ಮಧ್ಯೆ ಗೆದ್ದು ಬರಬೇಕೆನ್ನುವ ಛಲದಿಂದ ನಾಟಕ ರಚಿಸಿ ನಿರ್ದೇಶಿಸಿ ಜನಮನ್ನಣೆ ಗಳಿಸಿದರು.

ತುಳು ನಾಟಕಗಳಾದ ಇಂಚಾಂಡ ನನ ಎಂಚ, ಸಮಸ್ಯೆ ಮಳ್ಪೋರ್ಚಿ,ಹಾಗೂ ಕಿರು ನಾಟಕಗಳಾದ ಜೋಕುಲಾಟಿಕೆ, ಕುಸಾಲ್ದ ಮರ್ಲೆರ್, ಕಲೆತ ಬಿಲೆ, ಮದಿಮೆ ಮುಂತಾದವುಗಳು.

ಕನ್ನಡದಲ್ಲಿ ಒಟ್ಟು 375 ಹಾಗೂ ತುಳುವಿನಲ್ಲಿ 330 ಕವನ ಸಂಕಲನಗಳನ್ನು ರಚಿಸಿ ದ್ವಿಭಾಷ ಬರಹಗಾರರಾಗಿ ತುಳುನಾಡ ಮಣ್ಣಿನ ಮರೆಯಲಾಗದ ಮಾಣಿಕ್ಯವಾಗಿ ಅಚ್ಚಳಿಯದೆ ಉಳಿಯುವಲ್ಲಿ ಇವರ ಕಲಾ ಕೊಡುಗೆ ವಿಭಿನ್ನವಾಗಿ ಗುರುತಿಸಲ್ಪಡುತ್ತಿದೆ .ಇವರ ಕಲಾ ಸೇವೆಯನ್ನು ಕಂಡು ಶಿಶಿಲ ಯಕ್ಷಕಲಾ ಕೂಟವು ಬರವುದ ಮಾಣಿಕ್ಯ ಎಂಬ ಬಿರುದನ್ನು ನೀಡಿ ಗೌರವಿಸಿದೆ.

ಶ್ರೀಯುತರು ಸದಾ ತನ್ನ ಬರವಣಿಗೆಯಲ್ಲಿ ವಿಶೇಷ ಶೈಲಿಯ ಜೊತೆಗೆ ಅನೇಕ ಬದಲಾವಣೆಯನ್ನು ತಂದುಕೊಂಡು ತುಳು ಭಾಷೆಯಲ್ಲೇ ಅನೇಕ ಹಿತನುಡಿಗಳನ್ನು ತನ್ನದೇ ಶೈಲಿಯಲ್ಲಿ ಬರೆದು ಅನೇಕರಿಗೆ ಪರಿಚಯಿಸುತ್ತಿದ್ದಾರೆ.

ಕಲಾ ಮಾತೆಯ ಸೇವೆಯನ್ನೇ ದೇವರ ಸೇವೆ ಎಂದು ತನಗೊಲಿದು ಬಂದ ಕಲೆಯನ್ನು, ತನ್ನೊಳಗೊಬ್ಬ ಕಲಾಗಾರನಿದ್ದಾನೆ ಎಂಬುದನ್ನು ಅರಿತು ಕಲಾ ಸೇವೆ ನೀಡುತ್ತಿರುವ ಕೇಶವ ನೆಲ್ಯಾಡಿ ನಮ್ಮ ಹೆಮ್ಮೆ.

                                                            

                   ✍️ದೀಪಕ್ ಹೊಸ್ಮಠ
Leave A Reply

Your email address will not be published.