ಮಾನವೀಯತೆ ಮೆರೆದ ಪೋಲೀಸ್ ಸಿಬ್ಬಂದಿ | ಶ್ರೀ ಹರಿ ಎನ್.ಎಸ್

ಈವಂಗೆ ದೇವಂಗೆ ಆವುದಂತರವಯ್ಯಾ / ದೇವನು.. ಜಗಕೆ ಕೊಡುವನು ಕೈಯಾರೇ/ ಈವನೇ ದೇವ ಸರ್ವಜ್ಞ…

ಈ ಮಾತಿನ ತಾತ್ಪರ್ಯ ಏನೆಂದರೆ ದಾನ ಕೊಡುವವನಿಗೂ ಭಗವಂತನಿಗೂ ಯಾವ ಅಂತರವಿದೆ? ಆ ಸೃಷ್ಟಿಕರ್ತ ಜಗತ್ತಿಗೆ ಕೈಯಾರೆ ಎಲ್ಲವನ್ನೂ ಕೊಡುತ್ತಾನೆ.

ಅಂತೆಯೇ ದಾನ ಮಾಡುವವ ಕೂಡ ಆ ದೇವನೆ ಆಗಿದ್ದಾನೆ.

ಪ್ರಸ್ತುತ ಸಂದರ್ಭದಲ್ಲಿ ಈ ಸರ್ವಜ್ಞನ ಮಾತುಗಳಿಗೆ ಪೂರಕವಾಗಿರುವ ವ್ಯಕ್ತಿತ್ವ ಮತ್ತು ವ್ಯಕ್ತಿ ಶ್ರೀಹರಿ ಎನ್.ಎಸ್ ಪಾಣಾಜೆ ಎಂದರೆ ತಪ್ಪಾಗಲಾರದು.

ಮನುಷ್ಯ ತಾನೊಬ್ಬ ಬೆಳೆದರೆ ಸಾಕು ತನ್ನ ಅಗತ್ಯತೆಗಳು ಪೂರೈಕೆಗೊಂಡರೆ ಸಾಕು ಎಂಬ ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ಬದುಕುತ್ತಿರುವ ಈ ಕಾಲಘಟ್ಟದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ನಿಸ್ವಾರ್ಥ ಸೇವೆಯೇ ತಮ್ಮ ಉಸಿರು ಎಂಬ ಧ್ಯೇಯ ವಾಕ್ಯವನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದಾರೆ.

ಅಂತಹ ಬೆರಳೆಣಿಕೆಯ ಮಂದಿಗಳ ನಡುವೆ ವೃತ್ತಿಯಲ್ಲಿ ಪೋಲೀಸ್ ಆಗಿ ದಿನದ 24 ಗಂಟೆಗಳಲ್ಲಿಯೂ ಬಿಡುವಿಲ್ಲದ ವೃತ್ತಿ ನಿಷ್ಠೆಯನ್ನು ಮೆರೆಯುತ್ತಾ, ಜೊತೆಗೆ ಒಂದಲ್ಲ ಒಂದು ರೀತಿಯಲ್ಲಿ ಬಡವರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಶ್ರೀಹರಿ ಎನ್.ಎಸ್ ರವರು ಇದೀಗ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಸಿಲುಕಿ ನರಳುತ್ತಿರುವ ಬಡಕುಟುಂಬಗಳಿಗೆ ನೆರವಾಗಲು ಸ್ವ ಪ್ರೇರಣೆಯಿಂದ ತಮ್ಮ 15 ದಿನಗಳ ಸಂಬಳವನ್ನು ಮೀಸಲಿರಿಸಿದ್ದಾರೆ ಎಂಬುದನ್ನು ಕಂಡಾಗ ಅವರ ಹೃದಯ ವೈಶಾಲ್ಯತೆ ಎಷ್ಟಿದೆ ಎಂಬುದು ಕಾಣಸಿಗುತ್ತದೆ.

ಸಾಮಾನ್ಯವಾಗಿ ಒಂದು ದಿನದ ಸಂಬಳ ಕಡಿತ ಮಾಡಿ ಈ ರೀತಿಯ ಸಂತ್ರಸ್ತ ಸಹಾಯ ನಿಧಿಗೆ ಕೊಡುವುದಿದೆ. ಕೆಲವರು ಹೆಚ್ಚೆಂದರೆ ಮೂರು ದಿನದ ಸಂಬಳ ಅರ್ಪಿಸುತ್ತಾರೆ. ಆದರೆ ಇವರು ಒಂದು ತಿಂಗಳ ಅರ್ಧ ಸಂಬಳ ನೀಡುತ್ತಿದ್ದಾರೆ !

ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಆರ್ಲಪದವು ಇದರ ಸ್ಥಾಪಕ ಸಂಚಾಲಕರಾಗಿ ತಮ್ಮೂರಿನಲ್ಲಿ ತಾನೊಬ್ಬನೇ ನಿಸ್ವಾರ್ಥ ಸೇವೆ ಮಾಡಿದರೆ ಸಾಲದು ತನ್ನಂತೆ ಹಲವಾರು ನಿಸ್ವಾರ್ಥ ಸೇವೆಯಲ್ಲಿ ತೊಡಗುವಂತೆ ಮಾಡಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈ ಗನ್ನಡಿ. ಪೋಲೀಸರೆಂದರೆ ಭಯ ಹುಟ್ಟಿಸುವವರಲ್ಲ ಬದಲಾಗಿ ಹೊಸ ಭರವಸೆ ಮೂಡಿಸುವವರು ಎಂಬುದನ್ನು ತೋರಿಸಿ ‘ ದಾನ ನಮಗಾಗಿ.. ಸಂಗ್ರಹ ಪರರಿಗಾಗಿ ; ‘ ಕೊಟ್ಟಿದ್ದು ತನಗೆ….ಬಚ್ಚಿಟ್ಟದ್ದು ಪರರಿಗೆ ‘ ; ‘ ನೀಡುವುದರಲ್ಲಿ ಇರುವ ಸುಖ ನೆಮ್ಮದಿ ಕೂಡಿಡುವುದರಲಿಲ್ಲ ‘ ಎಂದು ಹೃದಯ ವೈಶಾಲ್ಯತೆ ಮೆರೆದವರು. ನಮ್ಮ ನಿಮ್ಮ ನಡುವೆ ಕಾಣಸಿಗುವ ಅಪರೂಪದ ವ್ಯಕ್ತಿ ಇವರು.

ಇವರು ಈ ಸಮಾಜದ ಅಮೂಲ್ಯ ರತ್ನ ಎಂಬುದರಲ್ಲಿ ಎರಡು ಮಾತಿಲ್ಲ. ಸಮಾಜ ಸೇವೆಯ ಮುಖ್ಯವಾಗಿರುವ ಇವರ ಜೀವನ ಸುಖಕರವಾಗಿರಲಿ ಎಂಬುದೇ ನಮ್ಮ ಹಾರೈಕೆ. ನಿಮ್ಮ ಹಾರೈಕೆ ಕೂಡ ಅವರ ಮೇಲಿರಲಿ.

Comments are closed.