ಕರ್ತವ್ಯಕ್ಕೆ ಹಾಜರಾಗಲು 450 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿದ ಪೊಲೀಸ್ ಪೇದೆ !

ಒಂದೆಡೆ ಕೋರೋನಾ ತನ್ನ ವಿರಾಟ್ ರೂಪವನ್ನು
ತೋರಿಸುತ್ತಾ ಸಾಗುತ್ತಿದ್ದರೆ, ಮತ್ತೊಂದೆಡೆ ಸವಾಲುಗಳನ್ನು ಮೀರಿ ನಿಲ್ಲುವ, ಕಾರ್ಪಣ್ಯಗಳನ್ನು ಮೆಟ್ಟಿ ನಡೆಯುವ ಮನುಷ್ಯನ ಆದಮ್ಯ ಪ್ರಯತ್ನದ ಅನಾವರಣ. ಅಂತಹ ಒಂದು ಮನುಷ್ಯ ಶಕ್ತಿಯ ಅನಾವರಣವಾದದ್ದು ಜಬಲ್ಪುರದ ಪೊಲೀಸು ಪೇದೆಯೊಬ್ಬರ ನಡತೆಯಿಂದ.

ಕಾನ್ಪುರದ ಭೌಟಿ ಪ್ರದೇಶದ ನಿವಾಸಿಯಾಗಿರುವ ಪೊಲೀಸ್ ಪೇದೆ ಆನಂದ್ ಪಾಂಡೆ ಜಬಲ್ ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಪತ್ನಿಗೆ ಅನಾರೋಗ್ಯದ ಕಾರಣ ಫೆ.20 ರಿಂದ ರಜೆಯ ಮೇಲಿದ್ದರು. ಅಷ್ಟರಲ್ಲಿ ಲಾಕ್ ಡೌನ್ ಘೋಷಣೆ ಯಾಯ್ತಲ್ಲ ? ಆದ್ದರಿಂದ ಕಾನ್ಪುರದಲ್ಲೇ ಸಿಲುಕಿಕೊಂಡರು.

ಅಷ್ಟರಲ್ಲಿ ಅವರ ರಜೆ ಮುಗಿಯುತ್ತಾ ಬರುತ್ತಿತ್ತು. ವಾಪಸ್ಸು ಜಬಲ್ಪುರಕ್ಕೆ ತೆರಳಲು ಯಾವುದೇ ವಾಹನ ಸೌಕರ್ಯ ಇರಲಿಲ್ಲ. ಆದರೆ ಕರ್ತವ್ಯಕ್ಕೆ ಹಾಜರಾಗಲು ದೃಢ ನಿಶ್ಚಯ ಮಾಡಿದ ಅವರು ಕಾಲ್ನಡಿಗೆಯಲ್ಲಿ ಕಾನ್ಪುರದಿಂದ ಜಬಲ್ಪುರಕ್ಕೆ ಪ್ರಯಾಣ ಪ್ರಾರಂಭಿಸುತ್ತಾರೆ. ಹಾಗೆ ಮಾ.30 ರಂದು ನಡೆಯಲು ಶುರುವಿಟ್ಟ ಅವರು ಮೂರು ದಿನಗಳ ನಿರಂತರ ಕಾಲ್ನಡಿಗೆಯಲ್ಲಿ ಕಾನ್ಪುರದಿಂದ ಜಬಲ್ಪುರಕ್ಕೆ ತಲುಪುತ್ತಾರೆ.

ಜಬಲ್ಪುರ ತಲುಪಿರುವ ಆನಂದ್ ಪಾಂಡೆ ಅವರ ಈ ಕಾರ್ಯಕ್ಕೆ ಅವರ ಹಿರಿಯ ಅಧಿಕಾರಿಗಳಾದ ಇನ್ಸ್ ಪೆಕ್ಟರ್ ಎಸ್ ಪಿಎಸ್ ಬಘೇಲ್ ಹಾಗೂ ಸಿಬ್ಬಂದಿ ವರ್ಗದವರ ಮನಸ್ಸು ಮೂಕವಾಗಿದೆ. ಈಗ ಪಾಂಡೆ ಅವರು ಲಾಕ್ ಡೌನ್ ಕರ್ಫ್ಯು ಪಾಲನೆಗೆ ಜಬಲ್ಪುರದ ಘಂಟಾಘರ್ ಚೌಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಕಷ್ಟ ಸಹಿಷ್ಣು ಮನಸ್ಸುಗಳಿಂದಲೇ ತಾನೆ ಭಾರತದಲ್ಲಿ ಕೋರೋನಾ ಈ ಮಟ್ಟಿಗೆ ಹತೋಟಿಯಲ್ಲಿ ಇರುವುದು ?!

Leave A Reply

Your email address will not be published.