ಕಡಬದ ವ್ಯಕ್ತಿ ಓಟಿಪಿ ಕೊಟ್ಟರು, ಕ್ಷಣಮಾತ್ರದಲ್ಲಿ ಲಕ್ಷ ರೂಪಾಯಿ ಖಾತೆಯಿಂದ ಮಾಯ !

OTP ಅಲ್ಲಿ ನಡೆಯುವ ಮೋಸಕ್ಕೆ ಬಲಿಯಾಗಿ ಕಡಬದ ವ್ಯಕ್ತಿಯೋರ್ವರು 1 ಲಕ್ಷ ರೂ.ವನ್ನು ಕಳೆದುಕೊಂಡು ತಲೆಯ ಮೇಲೆ ಕೈ ಹಚ್ಚಿ ಕುಳಿತುಕೊಂಡಿದ್ದಾರೆ.

ಎಪ್ರಿಲ್ 10 ರಂದು ಕಡಬ ನಿವಾಸಿ ಧರಣೇಂದ್ರ ಜೈನ್ ಎಂಬವರ ಮೊಬೈಲ್ ಸಂಖ್ಯೆಗೆ ಸಂಜೆ 5.30 ಗಂಟೆಗೆ ಅಪರಿಚಿತ ವ್ಯಕ್ತಿಯು ಕರೆಮಾಡಿ ” ಗುಡ್ ಈವಿನಿಂಗ್  ಸರ್. ಇಸ್ ಇಟ್ ದ ರೈಟ್ ಟೈಮ್ ಟು ಸ್ಪೀಕ್ ? ” ಅಂದಿದ್ದ. ಇವತ್ತು ನನಗೆ ಬ್ಯಾಡ ಟೈಮ್ ಆಗಬಹುದು ಎಂಬ ಕಿಂಚಿತ್ತೂ ಅನುಮಾನ ಇಲ್ಲದ ಧರಣೇಂದ್ರ ಜೈನ್ ಅವರು “ಯೆಸ್ ” ಅಂದಿದ್ದಾರೆ.

ಆತ ತಾನು ಏರ್ಟೆಲ್ ಕಸ್ಟಮರ್ ಕೇರ್ ನಿಂದ ಕರೆ‌ಮಾಡುವುದಾಗಿ ಪರಿಚಯಿಸಿಕೊಂಡಿದ್ದು, ನಿಮ್ಮ ಸಿಮ್‌ ಆ್ಯಕ್ಟಿವೇಟ್ ಮಾಡಬೇಕಾಗಿದೆ. ಅದಕ್ಕಾಗಿ ಒಟಿಪಿ ನಂಬರ್ ಕಳುಹಿಸಿ ಕೊಡುತ್ತೇವೆ‌ ಎಂದು ಆತ ತಿಳಿಸಿದ. ಧರಣೇಂದ್ರ ಜೈನ್ ಅವರು ತಮ್ಮ ಪುತ್ರನಿಗೆ ಮೊಬೈಲ್ ಕೊಟ್ಟರು. ಮಗ ಅಪ್ಪನ ಮೊಬೈಲ್ ಗೆ ಬಂದ ಒಟಿಪಿ ಸಂಖ್ಯೆಯನ್ನು ಅಪ್ಪನ ಮಾತಿನಂತೆ ಅಪರಿಚಿತರಿಗೆ ತಿಳಿಸಿದ್ದಾನೆ.

ತಕ್ಷಣವೇ ಅವರ ಅಕೌಂಟ್ ನಿಂದ 50000, 25000 ಮತ್ತು 24900 ಹಣ ಕಡಿತವಾದ ಮೆಸೇಜು ಒಂದರ ಮೇಲೊಂದರಂತೆ ಒಂದು ಅವರ ಮೊಬೈಲ್ ಗೆ ಬಂದಿದೆ. ಬ್ಯಾಂಕ್ ಖಾತೆಯಿಂದ ಈ ಮೂಲಕ ಒಟ್ಟು 99900 ರೂ. ಗಳನ್ನು ಕ್ಷಣಗಳಲ್ಲಿ ಸೋರಿಹೋಗಿದೆ. ತಾನು ಮೋಸ ಹೋಗಿರುವುದಾಗಿ ಗೊತ್ತಾಗುತ್ತಿದ್ದಂತೆಯೇ ಅವರು ಅಕೌಂಟ್ ಬ್ಲಾಕ್ ಮಾಡಿಸಿದ್ದಾರೆ. ಹಣ ಕಳೆದುಕೊಂಡು ಕಂಗಾಲಾದ ಧರಣೇಂದ್ರ ಜೈನ್ ಅವರು ತಕ್ಷಣ ಅಕೌಂಟ್ ಲಾಕ್ ಮಾಡಿಸಿದ್ದಾರೆ. ಅವರು ಕಡಬ ಠಾಣೆಗೆ ದೂರು ನೀಡಿದ್ದು ಸೈಬರ್ ಕ್ರೈಮ್ ಗೆ ಪೊಲೀಸರಿಗೆ ಮತ್ತೊಂದು ಕೇಸು.

Comments are closed.