ಲಾಕ್ ಡೌನ್ ಸಡಿಲ ನಿರೀಕ್ಷೆಯಲ್ಲಿದ್ದ ಜನತೆಗೆ ಶಾಕ್ ! ಸೀಲ್ ಡೌನ್ ಜಾರಿ – ಯಾರೂ ಹೊರಗೆ ಹೆಜ್ಜೆ ಇಡುವಂತಿಲ್ಲ…!
ಬೆಂಗಳೂರು : ಈಗ ಜಾರಿಯಲ್ಲಿರುವ ಲಾಕ್ ಡೌನ್ ಏಪ್ರಿಲ್ 14 ರ ಬಳಿಕ ತೆರವುಗೊಳ್ಳಬಹುದು ಇಲ್ಲವೇ ಲಾಕ್ ಡೌನ್ ನಿರ್ಬಂಧ ಸಡಿಲವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಆಗಿದೆ. ಕಾರಣ ಲಾಕ್ಡೌನ್ ಬದಲಾಗಿ ಬೆಂಗಳೂರಿನ ಆಯ್ದ ನಗರಗಳಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಸೀಲ್ಡೌನ್ ಜಾರಿಯಾಗಲಿದೆ. ಈ ಕುರಿತು ಹಲವೆಡೆ ಈಗಾಗಲೇ ಸಿದ್ದತೆಗಳು ಆರಂಭವಾಗಿದೆ.
ಹೆಚ್ಚಿನ ಕೊರೋನಾ ಪಾಸಿಟಿವ್ ಕಂಡು ಬಂದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ರೆಡ್ ಜೋನ್ ಎಂದು ಘೋಷಿಸಿರುವ ಪ್ರದೇಶಗಳನ್ನು ಸೀಲ್ ಡೌನ್ ಮಾಡಲು ಸರ್ಕಾರ ಮುಂದಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದ.ಕದಲ್ಲಿ ಸೀಲ್ ಡೌನ್ ಪ್ರಸ್ತಾಪ ಸದ್ಯಕ್ಕಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ. ಸೀಲ್ ಡೌನ್ ಬದಲಾಗಿ ಲಾಕ್ಡೌನ್ ಮುಂದುವರಿಸಲಾಗುವುದು ಎಂದಿದ್ದಾರೆ.
ಬೆಂಗಳೂರಿನ ಶಿವಾಜಿನಗರ ಮುಂತಾದ ಜನನಿಬಿಡ ಪ್ರದೇಶಗಳಲ್ಲಿ ಇಂದು ಮುಂಜಾನೆಯಿಂದಲೇ ಪೊಲೀಸರು ಸರ್ಪಗಾವಲು ಹಾಕಿಕೊಂಡು ರಸ್ತೆಗಳನ್ನು ಸೀಲ್ ಮಾಡಿ ಆಗಿದೆ. ಬೆಂಗಳೂರಿನ ಉಳಿದ ಕೆಲವು ಜನಜಂಗುಳಿ ಸೇರುವ ಪ್ರದೇಶಗಳನ್ನು ಸೀಲ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಅಗತ್ಯ ವಸ್ತುಗಳಿಗೂ ಕೂಡ ಯಾರೂ ಮನೆಯಿಂದ ಹೊರಬರದಂತೆ ಸೀಲ್ ಮಾಡಲಾಗುತ್ತದೆ. ಯಾವುದೇ ವಾಹನ, ಜನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಔಷಧಗಳನ್ನು ಕೂಡ ಮನೆ ಬಾಗಿಲಿಗೆ ಪೂರೈಕೆ ಮಾಡಲಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಕೋರೋನಾ ಸೋಂಕಿತ ಪತ್ತೆಯಾದ ಸುಮಾರು 5 ಕಿಲೋಮೀಟರುಗಳ ವ್ಯಾಪ್ತಿಯಲ್ಲಿ, ಉದಾಹರಣೆಗೆ ಬೆಳ್ತಂಗಡಿಯ ಕರಾಯ ಪ್ರದೇಶದಲ್ಲಿ ಮತ್ತು ಸುಳ್ಯದ ಅಜ್ಜಾವರ ಮುಂತಾದ ಹಲವು ಕಡೆ ಈಗಾಗಲೇ ಈ ರೀತಿ ಮಾಡಲಾಗಿದೆ.
ದ.ಕ, ಬೆಂಗಳೂರಿನಲ್ಲಿ ಸೀಲ್ ಡೌನ್ ಜಾರಿಗಾಗಿ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯದ ಹಲವು ಟಿವಿ ಮಾಧ್ಯಮಗಳು ಹೇಳುತ್ತಿವೆ. ಆದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಇದೀಗ ಸ್ಪಷ್ಟನೆ ಹೊರಡಿಸಿದ್ದು, ದಕ್ಷಿಣ ಕನ್ನಡದಲ್ಲಿ ಸೀಲ್ ಡೌನ್ ಯೋಚನೆ ಸದ್ಯಕ್ಕೆ ಇಲ್ಲ ಎಂದಿದ್ದಾರೆ.
ಬೆಂಗಳೂರು ಮತ್ತು ಇತರ ಕೆಲವು ಮುಖ್ಯ ನಗರಗಳಪ್ರಮುಖ ರಸ್ತೆಗಳ ಸಂಚಾರ ಬಂದ್ ಮಾಡಲು ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ಸೀಲ್ ಡೌನ್ ಜಾರಿ ಮಾಡಿ ಜನ, ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಿದ್ದು, ಜನರ ಮನೆ ಬಾಗಿಲಿಗೆ ಔಷಧ ಅಗತ್ಯ ವಸ್ತು ನೀಡಲಾಗುವುದು. ಯಾರೂ ಮನೆಯಿಂದ ಹೊರ ಬರಬಾರದು ಎಂದು ಹೇಳಲಾಗಿದೆ.
ಇದು ಲಾಕ್ಡೌನ್ ಇದ್ದರೂ ಅನಗತ್ಯವಾಗಿ ಪೊಲೀಸರ ಕಣ್ಣು ತಪ್ಪಿಸಿ ಬೀದಿಗೆ ಇಳಿಯುವವರಿಗಂತೂ ದೊಡ್ಡ ಶಾಕ್ ನೀಡಿದೆ. ಸರಕಾರ ಮಾಡಿದ ಲಾಕ್ಡೌನ್ ಸೂಚನೆಗಳನ್ನು ಸರಿಯಾಗಿ ಪಾಲಿಸುತ್ತಿದ್ದರೆ ಈ ಸೀಲ್ಡೌನ್ ಅಗತ್ಯ ಇರುತ್ತಿರಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.
ಸೀಲ್ ಡೌನ್ ನ ಸಂದರ್ಭದಲ್ಲಿ ಮೆಡಿಕಲ್ ಸಹಿತ ಎಲ್ಲಾ ಅಂಗಡಿಗಳು ಕೂಡ ಬಂದಾಗಲಿವೆ. ಜನರ ಮನೆಬಾಗಿಲಿಗೆ ದಿನಸಿ ತರಕಾರಿ ಔಷಧವಸ್ತುಗಳು ಹಾಲು ಎಲ್ಲವನ್ನು ಸಪ್ಲೈ ಮಾಡಲಾಗುತ್ತದೆ. ಬೀದಿಗೆ ಇಳಿದರೆ ಬಂಧನ ಖಚಿತ.