ಪುತ್ತೂರು ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಗೆ ಲಾಕ್ ಡೌನ್ ಅನ್ವಯಿಸಲ್ಲ | ಸರಳವಾಗಿ ಜಾತ್ರೋತ್ಸವ

ಗೊನೆ ಮುಹೂರ್ತ : ಏಪ್ರಿಲ್ 1 ರಂದು || ಧ್ವಜಾರೋಹಣ / ಜಾತ್ರೋತ್ಸವ ಪ್ರಾರಂಭ : ಏಪ್ರಿಲ್ 10 ಕ್ಕೆ

ಲಾಕ್ ಡೌನ್ ಆಗಿ ದೇಶ ಸ್ಥಬ್ದವಾಗಿದ್ದರೂ ಪುತ್ತೂರು ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯು ಶಾಸ್ತ್ರೋಕ್ತವಾಗಿಯೇ ನಡೆಯಲಿದೆ. ಆ ಮೂಲಕ ಜಾತ್ರೆ ನಡೆಯುತ್ತಾ ಇಲ್ಲವಾ ಎಂದು ಭಕ್ತರಲ್ಲಿದ್ದ ಅನಿಶ್ಚಿತತೆ ಕೊನೆಯಾಗಿದೆ. ಆದರೆ ಎಂದಿನ ಜನ, ಗೌಜಿ, ಅಬ್ಬರ, ಜಾತ್ರೆ, ಸಂತೆ ಇಲ್ಲದೆ ಸರಳವಾಗಿ ನಡೆಸಲು ಉದ್ದೇಶಿಸಲಾಗಿದೆ. ತಂತ್ರಿಗಳು, ದೇವಾಲಯದ ಅರ್ಚಕರು, ಮತ್ತು ಆಯ್ದ ನೌಕರರು ಮತ್ತು ಆಯ್ದ ಮುಖ್ಯಸ್ಥರು ಮಾತ್ರ ಹಾಜರಿರುತ್ತಾರೆ. ಈ ಬಾರಿ ಯಾರೇ ಜನಸಾಮಾನ್ಯರಿಗೆ ಜಾತ್ರೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಆದರೂ, ದೇವರ ಪೂಜೆ ಮತ್ತು ಜಾತ್ರಾಮಹೋತ್ಸವಗಳು ಶಾಸ್ತ್ರೋಕ್ತವಾಗಿ ನಡೆಯುತ್ತದಲ್ಲ ಎಂಬ ತೃಪ್ತಿ ಜನರದ್ದು.

ಜಾತ್ರೆಯ ನಡೆಸುವಿಕೆಯ ಬಗ್ಗೆ ಇವತ್ತು ಪುತ್ತೂರು ಶಾಸಕ ಸಂಜೀವ ಮಠ೦ದೂರು ಅವರ ಕಚೇರಿಯಲ್ಲಿ, ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರೊಂದಿಗೆ ವಿಡಿಯೋ ಕಾನ್ಫರೆನ್ಸಿನ ಮೂಲಕ ಪೂರ್ವಭಾವಿ ಸಭೆ ನಡೆಸಲಾಯಿತು. ಆ ಸಂದರ್ಭದಲ್ಲಿ ತಂತ್ರಿಯವರು ಆಗಮಶಾಸ್ತ್ರದಲ್ಲಿ ಹೇಳಿದಂತೆ, ಜಾತ್ರೆಯನ್ನು ಸರಳವಾಗಿ ಮಾಡಲು ಅಡ್ಡಿಯಿಲ್ಲ ಎಂದಿದ್ದಾರೆ.

ಪೂರ್ವಭಾವಿ ವಿಡಿಯೋ ಕಾನ್ಫರೆನ್ಸ್ ನ ಸಭೆಯಲ್ಲಿ ದೇವಳದ ಪ್ರಧಾನ ಅರ್ಚಕರಾದ ವಸಂತ್ ಕುಮಾರ್ ಕೆದಿಲಾಯ, ವಿ. ಸುಬ್ರಮಣ್ಯ ಭಟ್, ದೇವಳದ ಆಡಳಿತಾಧಿಕಾರಿ ಲೋಕೇಶ್ ಸಿ. ಕಾರ್ಯ ನಿರ್ವಾಹಣಾಧಿಕಾರಿ ನವೀನ ಕುಮಾರ್ ಭಂಡಾರಿ, ದೇವಸ್ಥಾನದ ವಾಸ್ತುಶಾಸ್ತ್ರಜ್ಞ ಪಿ.ಜಿ ಜಗನ್ನಿವಾಸರಾವ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರುಳಿ ಕೃಷ್ಣ ಹಂಸತಡ್ಕ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.