ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲೆಂದು ಗೆಳೆಯರೊಂದಿಗೆ ನದಿಗೆ ಇಳಿದ ವ್ಯಕ್ತಿ ನೀರುಪಾಲು

ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲೆಂದು ಗೆಳೆಯರೊಂದಿಗೆ ನದಿಗೆ ಇಳಿದ ಪಾಲ್ಕೆ ನಿವಾಸಿ ರಹೀಮ್ ನೀರು ಪಾಲಾಗಿದ್ದಾರೆ.

ನಾಲ್ವರು ಗೆಳೆಯರು ಮಾಣಿ ಬಳಿ ನೇತ್ರಾವತಿಯ ನದಿ ದಡಕ್ಕೆ ತೆರಳಿದ್ದರು. ಆ ಸ್ನೇಹಿತರಲ್ಲಿ ರಹೀಮ್ ಕೂಡ ಒಬ್ಬನಾಗಿದ್ದ.

ಮೊದಲು ಉಳಿದ ಮೂರು ಸ್ನೇಹಿತರುಗಳು ನದಿಗೆ ಸ್ನಾನಕ್ಕೆಂದು ಇಳಿದಿದ್ದರು. ಆನಂತರ ರಹೀಂ ಕಣಕ್ಕೆ ಇಳಿದಿದ್ದ. ಆತ ಸ್ನಾನ ಮಾಡುತ್ತಾ ಮಾಡುತ್ತಾ ನದಿಯಲ್ಲಿ ಸ್ವಲ್ಪ ಮುಂದಕ್ಕೆ ಹೋಗಿದ್ದ. ಆಗ ನೀರಿನಲ್ಲಿ ಮುಳುಗುವ ಸಂದರ್ಭದಲ್ಲಿ ಕಾಪಾಡುವಂತೆ ಗೆಳೆಯರನ್ನು ಕೂಗಿಕೊಂಡ.

ಆದರೆ ಗೆಳೆಯರು ಅಸಹಾಯಕರಾಗಿದ್ದರು. ಅವರ್ಯಾರಿಗೂ ಆಳ ನೀರಿನಲ್ಲಿ ಈಜು ಹೊಡೆಯಲು ಬರುತ್ತಿರಲಿಲ್ಲ. ಗೆಳೆಯರು ನೋಡುತ್ತಿರುವಂತೆಯೇ ರಹೀಂ ನೀರಿನಲ್ಲಿ ಮುಳುಗಿ ಹೋಗಿದ್ದ. ಸ್ಥಳಕ್ಕೆ ಸ್ಥಳೀಯ ಈಜು ಬಲ್ಲವರು ಬರುವಷ್ಟರಲ್ಲಿ ರಹೀಂ ನೀರಿನಲ್ಲಿ ಕಣ್ಮರೆಯಾಗಿ ಹೋಗಿದ್ದ.

ಸ್ಥಳಕ್ಕೆ ರಕ್ಷಣಾ ತಂಡ ಮತ್ತು ಪೊಲೀಸರು ಆಗಮಿಸಿದ್ದಾರೆ. ರಹೀಂ ಅವರಿಗಾಗಿ ಹುಡುಕುವ ಕಾರ್ಯ ಮುಂದುವರೆದಿದೆ.

Leave A Reply

Your email address will not be published.