‘ಆಯುರ್ವೇದಿಕ್ ಡ್ರಿಂಕ್ಸ್’ ನೀರಾ ಬೆಂಗಳೂರಿಗರ ಚಪಲದ ಬಾಯಿಯ ಜನಕ್ಕೆ ಮುದ ನೀಡಲಿದೆ : ಬಡವರ ಬಾಜೆಲ್ ಗೆ ಇನ್ನು ಸಖತ್ ಡಿಮಾಂಡ್ !

ಒಂದು ಕಡೆ ಕರಾವಳಿಯ ಕಂಬಳದ ಕಂಪು ದೇಶ-ವಿದೇಶಗಳಲ್ಲಿ ಹರಡುತ್ತಿದ್ದರೆ, ಮತ್ತೊಂದು ಕಡೆ ನಮ್ಮ ಕರಾವಳಿ ಮತ್ತು ಮಲೆನಾಡಿನ ಬಡವರ ಬಾಜೆಲ್,  ಬೆಂಗಳೂರಿನ ಚಪಲದ ಬಾಯಿಯ, ಸದಾ ದುಗುಡದಿಂದ  ಓಡಾಡುವ ಜನರ ಮನಸ್ಸಿಗೆ ಒಂದಿಷ್ಟು ಮುದನೀಡಲು ಬರುತ್ತಿದೆ.

ತೆಂಗು ಬೆಳೆಯ ಪರ್ಯಾಯ ಉತ್ಪನ್ನವಾದ, ಈ  ‘ಆಯುರ್ವೇದಿಕ್ ಡ್ರಿಂಕ್ಸ್ ‘ ನೀರಾ ( ಅಥವಾ ಶೇಂದಿಯು ) ಒಂದು ಕಾಲದಲ್ಲಿ ಇತರ ಆಲ್ಕೊಹಾಲಿಕ್ ಮಾದರಿಯ ತರವೇ ರೆಗ್ಯುಲೇಶನ್ ಗೆ ಒಳಪಟ್ಟಿತ್ತು.

ಆದರೆ ಸಾರೆಕೊಪ್ಪ ಬಂಗಾರಪ್ಪನವರು ನೀರಾವನ್ನು ಇತರ ಮಾದರಿಯ ಡ್ರಿಂಕ್ಸ್ ಗಳಿಂದ ಪ್ರತ್ಯೇಕಿಸಿ, ಬೆಳೆಗಾರರು ತಾವು ಇಳಿಸಿದ ನೀರಾವನ್ನು, ಅದೇ ಮರದ ಬುಡದಲ್ಲಿ ಮಾರುವ ಅವಕಾಶ ಕಲ್ಪಿಸಿದರು. ಅಥವಾ ಶೇಂದಿ ಮಾರಾಟಗಾರರ ಸಹಕಾರ ಸಂಘದ ಮೂಲಕ ಕೂಡಾ ಮಾರಬಹುದಿತ್ತು.

ಆದರೆ ಈಗ ಬೆಂಗಳೂರಿನಲ್ಲಿ ನೀರಾಗೆ ಬೇಡಿಕೆ ಹೆಚ್ಚಿದ ಪರಿಣಾಮವಾಗಿ ಸರ್ಕಾರವೇ ಬೆಂಗಳೂರಿನ ಹೃದಯಭಾಗದಲ್ಲಿ ನೀರಾ ಮಾರಾಟದ ಔಟ್ ಲೆಟ್ ಗಳನ್ನು ತೆರೆಯಲು ಪರವಾನಗಿ ನೀಡಿದೆ.

ಈಗ ಲಾಲ್‌ಬಾಗ್, ನಗರ ಸಿವಿಲ್ ನ್ಯಾಯಾಲಯ ಆವರಣ ಮತ್ತು ಜೆಪಿ ನಗರದ ಹಾಪ್‌ಕಾಮ್ಸ್ ನಲ್ಲಿ ಮಾತ್ರ ನೀರಾ ಲಭ್ಯವಾಗುತ್ತಿದೆ. ಇನ್ನು ಮುಂದೆ ಪೀಣ್ಯ ಎರಡನೇ ಹಂತ, ಮತ್ತಿಕೆರೆಯ ಜೆಪಿ ಪಾರ್ಕ್ , ಹನುಮಂತನಗರ, ಜಯನಗರ ನಾಲ್ಕನೇ ಹಂತ, ಕನಕಪುರ ರಸ್ತೆ, ಮಲ್ಲೇಶ್ವರ, ಕೆಆರ್ ಪುರದಲ್ಲಿ ಮತ್ತು ಇನ್ನೂ ಹತ್ತು ಕಡೆ ಮಳಿಗೆ ಪ್ರಾರಂಭವಾಗಲಿದೆ.

ದುರಂತವೆಂದರೆ ನೀರಾ ಇಳಿಸುವ ಊರಿನ ಜನರೇ ನೀರು- ನೀರಾ ಎರಡೂ ಕುಡಿಯುವುದನ್ನು ಬಿಟ್ಟು ನೈಂಟಿಗೆ ಬಲಿ ಬೀಳುತ್ತಿರುವುದು!

ಇತ್ತೀಚಿನವರೆಗೆ ಬೆಂಗಳೂರಿಗೆ ಕನೆಕ್ಟ್ ಆಗುವ ಕುಣಿಗಲ್ ರೋಡ್, ಮೈಸೂರು ರೋಡು, ಆನೆಕಲ್ಲು ರೋಡು, ಗೌರಿಬಿದನೂರು ರೋಡು ಮುಂತಾದ ರಸ್ತೆಗಳ ಇಕ್ಕೆಲಗಳಲ್ಲಿ ಹಳ್ಳಿಗರು ಮಣ್ಣಿನ ಮಡಕೆಯಲ್ಲಿ ನೀರಾ ಇಟ್ಟು ಮಾರುತ್ತಿದ್ದರು.
ಆದರೆ ಈಗ  ನೀರಾದ ಅದೃಷ್ಟ ಖುಲಾಯಿಸಿದೆ. ನೀರಾ ಸೀದಾ ಸಿಟಿಗೆ ಎಂಟ್ರಿ ಆಗಿದ್ದಾಳೆ !

ಬೆಂಗಳೂರೆಂಬ ಮಹಾನಗರಿಯಲ್ಲಿ ನೀವು ಏನನ್ನು ಬೇಕಾದರೂ ಮಾರಬಹುದು. ‘ ಪ್ಯಾಕಿಂಗ್ ಕಾ ಚೀಸ್ ಅಚ್ಚಾ ಹೋನಾ ಚಾಯಿಯೆ, ಪೂರಾ ಉಸ್ಮೇ ಭೂಸಾ ಭರಾ ದೋ ‘ ಹೋಗಿ, ‘ ಪ್ಯಾಕಿಂಗ್ ಕಾ ಚೀಸ್ ಅಚ್ಚಾ……… ನೀರಾ ಭರ್ ದೋ ‘ ಆಗಿದೆ !! ಜಗತ್ತಿನ ಸಮಸ್ತ ಟೈಪಿನ ಜನರಿರುವ ಬೆಂಗಳೂರಿಗರಿಗೆ ಎಲ್ಲವೂ ಬೇಕು. ಮಾಲು ಸಖತ್ ಸೇಲಾಗಲಿದೆ !

Leave A Reply

Your email address will not be published.