`ಗೆಜ್ಜೆಗಿರಿ’ ಬ್ರಹ್ಮಕಲಶ ರಾಜ್ಯಕ್ಕೆ ಮಾದರಿಯಾಗಿಸಲು ಜಿಲ್ಲಾಡಳಿತಕ್ಕೆ ಉಸ್ತುವಾರಿ ಸಚಿವ ಕೋಟ ಸೂಚನೆ

`ಗೆಜ್ಜೆಗಿರಿ’ ಬ್ರಹ್ಮಕಲಶ ರಾಜ್ಯಕ್ಕೆ ಮಾದರಿಯಾಗಿಸಲು ಜಿಲ್ಲಾಡಳಿತಕ್ಕೆ ಉಸ್ತುವಾರಿ ಸಚಿವ ಕೋಟ ಸೂಚನೆ

ಪುತ್ತೂರು; ಕರಾವಳಿಯಾದ್ಯಂತ 250ಕ್ಕೂ ಗರಡಿಗಳಲ್ಲಿ ಆರಾಧನೆಯಾಗುತ್ತಿರುವ ಪುತ್ತೂರು ಪಡುಮಲೆಯ ಕಾರಣಿಕ ಪುರುಷರಾದ ಕೋಟಿ ಚೆನ್ನಯ ಮತ್ತು ಅವರ ಮಾತೆ ದೇಯಿ ಬೈದೆತಿ ಮೂಲ ಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತ್‍ಲ್‍ನಲ್ಲಿ ಫೆ.24ರಿಂದ ಮಾರ್ಚ್ 2 ತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಐತಿಹಾಸಿಕವಾಗಿ ಮೂಡಿಬರಲಿದ್ದು, ರಾಜ್ಯದಲ್ಲಿಯೇ ಮಾದರಿ ಕಾರ್ಯಕ್ರಮವಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಂಪೂರ್ಣ ಜವಾಬ್ದಾರಿ ವಹಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪುತ್ತೂರು ಗೆಜ್ಜೆಗಿರಿ ಕ್ಷೇತ್ರದಲ್ಲಿ ಅಧಿಕಾರಿಗಳ ಸಭೆ ಹಾಗೂ ಮಾಧ್ಯಮ ಗೋಷ್ಟಿ ನಡೆಸಿದ ಅವರು ಈ ಕಾರ್ಯಕ್ರಮದಲ್ಲಿ ಫೆ.29ರಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಡೆ ಅವರು ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಗಳು ನಡೆಯಬೇಕಾಗಿದೆ. 500 ವರ್ಷಗಳ ಹಿಂದೆ ತುಳುನಾಡಿನಲ್ಲಿ ಬಾಳಿ ಬದುಕಿದ್ದ ಕೋಟಿ ಚೆನ್ನಯ ಮತ್ತು ಅವರ ತಾಯಿ ದೇಯಿ ಬೈದೆತಿ ಅವರ ಬದುಕನ್ನು ಮತ್ತೆ ಅನಾವರಣ ನಡೆಯುವ ಕೆಲಸ ಗೆಜ್ಜೆಗಿರಿ ಕ್ಷೇತ್ರದಲ್ಲಿ ನಡೆಯುತ್ತಿದೆ. ಪಾರಂಪರಿಕ ಶೈಲಿಯಲ್ಲಿ ಇಲ್ಲಿನ ವ್ಯವಸ್ಥೆಗಳನ್ನು ಈಗಾಗಲೇ ನಡೆಸಲಾಗಿದೆ.

ಕೇರಳ ಶೈಲಿಯಲ್ಲಿ ನಿರ್ಮಿತವಾದ ಕೋಟಿ ಚೆನ್ನಯ ಮತ್ತು ತಾಯಿ ದೇಯಿ ಬೈದೆತಿ, ಗುರು ಸಾಯನ ಬೈದ್ಯ ಅವರ ಪ್ರತಿಮೆಗಳು, ಮರದ ಕೆತ್ತನೆಗಳು ಈ ಕ್ಷೇತ್ರವನ್ನು ಅಭೂತಪೂರ್ವ ತಾಣವನ್ನಾಗಿ ಬದಲಾಯಿಸಲಿದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದು, ಇಲ್ಲಿನ ವ್ಯವಸ್ಥೆಗಳಲ್ಲಿ ಯಾವುದೇ ತೊಂದರೆಗಳಾಗದಂತೆ ನೋಡಿಕೊಳ್ಳುವ ಕೆಲಸ ಅಧಿಕಾರಿ ವರ್ಗದಿಂದ ನಡೆಯಬೇಕು.

ಧಾರ್ಮಿಕ ಪ್ರವೃತ್ತಿಯೊಂದಿಗೆ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಇದಾಗಿದ್ದು, ಇಲ್ಲಿ 7 ದಿನಗಳ ಕಾಲ ನಡೆಯಲಿರುವ ಧಾರ್ಮಿಕ, ವೈದಿಕ ಸಭಾ ಕಾರ್ಯಕ್ರಮ ಸಾಂಸ್ಕøತಿಕ ಕಾರ್ಯಕ್ರಮ. ಅನ್ನದಾನ ಹಾಗೂ ವಾಹನಗಳ ನಿಲುಗಡೆ ವ್ಯವಸ್ಥೆಗೆ ಸಮಗ್ರ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಶಾಸಕ ಸಂಜೀವ ಮಠಂದೂರು ಮಾತನಾಡಿ, ನಂದನ ಬಿತ್ತ್‍ಲ್ ಈಗ ನಂದನವನವಾಗಿ ಬದಲಾಗಿದೆ. ಇದನ್ನು ನಿರಂತರವಾಗಿ ಕಾಯ್ದುಕೊಳ್ಳುವ ಜವಾಬ್ದಾರಿಯೂ ಇದೆ. ಈ ಧಾರ್ಮಿಕ ಕ್ಷೇತ್ರದ ಜತೆಗೆ ಪ್ರೇಕ್ಷಣೀಯ ತಾಣವಾಗಿಯೂ ಮೂಡಿಬರುವುದು ಅಗತ್ಯ. ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಆತಿಥ್ಯ ನೀಡಲು ಬದ್ಧರಾಗಬೇಕು ಎಂದರು. ಸಿಸಿ ಕ್ಯಾಮರಾ- ವಾಕಿಟಾಕಿ- 24*7 ವಿದ್ಯುತ್ ಗೆಜ್ಜೆಗಿರಿ ಕ್ಷೇತ್ರದ ಸುತ್ತ ಸಿಸಿ ಕ್ಯಾಮರಾ ತಾತ್ಕಾಲಿಕವಾಗಿ ಅಳವಡಿಸಬೇಕು. ಕಾರ್ಯಕ್ರಮದ ದಿನಗಳಂದು ವಾಕಿಟಾಕಿ ವ್ಯವಸ್ಥೆ ಮಾಡಬೇಕು. ಮುಡುಪಿನಡ್ಕ ಸಮೀಪದಲ್ಲಿ ಅರಣ್ಯ ಇಲಾಖೆ ವತಿಯಿಂದ ನಿರ್ಮಿಸಲಾದ ದೇಯಿಬೈದೆತಿ ವನ ದಲ್ಲಿ ಜನತೆಗೆ ಮಾಹಿತಿ ನೀಡಲು ಸಿಬ್ಬಂದಿಯನ್ನು ನೇಮಕ ಮಾಡಬೇಕು. ಅಲ್ಲಿಯೂ ಮೂಲಭೂತ ಸೌಕರ್ಯ ವ್ಯವಸ್ಥೆಗಳನ್ನು ಮಾಡಬೇಕು. ಕ್ಷೇತ್ರದ ಸುತ್ತಮುತ್ತ ಸುಮಾರು 5 ಸಾವಿರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು.

ಬ್ರಹ್ಮಕಲಶೋತ್ಸವದ ದಿನಗಳಲ್ಲಿ ಕೆಎಸ್ಸಾರ್ಟಿಸಿ ವತಿಯಿಂದ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಬೇಕು. ಆರೋಗ್ಯ ಇಲಾಖೆಯ ವತಿಯಿಂದ ಅಗತ್ಯವಾಗಿ ಪುಟ್ಟ `ಕ್ಲಿನಿಕ್’ ವ್ಯವಸ್ಥೆಯನ್ನು ಕ್ಷೇತ್ರದಲ್ಲಿಯೇ ಮಾಡಬೇಕು. ಜತೆಗೆ ಅಂಬ್ಯುಲೆನ್ಸ್ ವಾಹನ ವ್ಯವಸ್ಥೆ ಇರಬೇಕು. ದಿನದ 24 ಗಂಟೆ ಕಾಲವೂ ಈ ವ್ಯವಸ್ಥೆ ಇರಬೇಕು. ಯಾವುದೇ ಕಾರಣಕ್ಕೂ 7 ದಿನಗಳ ಕಾಲ ಲೋಡ್ ಶೆಡ್ಡಿಂಗ್ ಪವರ್ ಕಟ್ ಮಾಡದಂತೆ ಮೆಸ್ಕಾಂ ಇಲಾಖೆ ಸೂಚನೆ ನೀಡಿದ ಶಾಸಕ ಸಂಜೀವ ಮಠಂದೂರು ಅವರು 24*7 ಕಾಲ ವಿದ್ಯುತ್ ಇರಬೇಕು ಎಂದು ತಿಳಿಸಿದರು. ಮುಖ್ಯ ರಸ್ತೆಯಿಂದ ಗೆಜ್ಜೆಗಿರಿ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲಿ ನಾಮಫಲಕ ಅಳವಡಿಸಬೇಕು. ಅಫಘಾತ ವಲಯಗಲಿದ್ದರೆ ಅಲ್ಲಿಯೂ ಎಚ್ಚರಿಕೆ ಫಲಕ ಅಳವಡಿಸಬೇಕು. ಜನತೆಗೆ ಮಾಹಿತಿ ನೀಡಲು ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ವತಿಯಿಂದ ಮಾಹಿತಿ ಮಳಿಗೆ ನಿರ್ಮಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್, ಡಿವೈಎಸ್ಪಿ ದಿನಕರ ಶೆಟ್ಟಿ, ತಹಶೀಲ್ದಾರ್ ರಾಹುಲ್ ಶಿಂಧೆ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಜಿಪಂ ಸದಸ್ಯರಾದ ಅನಿತಾ ಹೇಂನಾಥ ಶೆಟ್ಟಿ ಕಾವು, ಶಯನಾ ಜಯಾನಂದ, ಕ್ಷೇತ್ರದ ತಂತ್ರಿ ಎಂ.ಕೆ.ಲೋಕೇಶ್ ಶಾಂತಿ, ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪೀತಾಂಬರ ಹೇರಾಜೆ, ಗ್ರಾಪಂ ಅಧ್ಯಕ್ಷ ಕೇಶವ ಗೌಡ ಕನ್ನಾಯ ಮತ್ತಿತರರು ಇದ್ದರು.

ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಸುಧಾಕರ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Leave A Reply

Your email address will not be published.