ಪ್ರೇಮಿಗಳ ದಿನದಂದೇ ಹಾರಂಗಿಗೆ ಹಾರಿ ಪ್ರೇಮಿಗಳ ಆತ್ಮಹತ್ಯೆ । ಹುಡುಗಿಗೆ ಭಾನುವಾರ ಮದುವೆಯಿತ್ತು !

ವಿವಾಹ ನಿಶ್ಚಿತವಾಗಿದ್ದ ಯುವತಿಯೋರ್ವಳು ಒಲ್ಲದ ಮದುವೆಗೆ ಬೇಸತ್ತು ತಾನು ಪ್ರೀತಿಸುತ್ತಿದ್ದ ಪ್ರಿಯಕರನೊಂದಿಗೆ ಹಾರಂಗಿ ಹಿನ್ನೀರಿಗೆ ಹಾರಿ ಅಮೂಲ್ಯ ಜೀವವನ್ನು ಬಲಿತೆಗೆದುಕೊಂಡಿದ್ದಾರೆ.

ಮೈಸೂರು ಜಿಲ್ಲೆಯ ಹುಣಸೂರಿನ ಸಚಿನ್ ಹಾಗೂ ಸಿಂಧು ಪರಸ್ಪರ ಪ್ರೀತಿಸುತ್ತಿದ್ದರು. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರಾದರೂ ಸಿಂಧುವಿನ ಮನೆಯವರು ಆಕೆಗೆ ಬೇರೆ ಯುವಕನೊಂದಿಗೆ ಭಾನುವಾರ ವಿವಾಹ ನಿಶ್ಚಿತಗೊಳಿಸಿದ್ದರು. ಆತ ಗೌಡರ ಹುಡುಗನಾಗಿದ್ದು ಆಕೆ ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದಳು. ಆತನಿಗೆ ಇನ್ನೂ 21 ವರ್ಷ ತುಂಬಿಲ್ಲ. ಜಾತಿಯ ಕಾರಣದಿಂದ ಮನೆಯಲ್ಲಿ ಅವರ ಮದುವೆಗೆ ತೀವ್ರ ವಿರೋಧವಿತ್ತು.

ನಾಳೆ ಆಕೆಯ ಮನೆಯಲ್ಲಿ ಚಪ್ಪರದ ಸಮಾರಂಭ ನಡೆಯಲಿತ್ತು. ಇದರಿಂದ ಬೇಸತ್ತ ಪ್ರೇಮಿಗಳು ಇಂದು ಬೆಳಿಗ್ಗೆ ಹಾರಂಗಿಗೆ ಬೈಕ್ ನಲ್ಲಿ ಬಂದಿದ್ದಾರೆ. ನಂತರ ಮಧ್ಯಾಹ್ನ 2.30 ರ ಸಮಯದಲ್ಲಿ ಹಾರಂಗಿ ಜಲಾಶಯದ ಹಿನ್ನೀರಿಗೆ ಪರಸ್ಪರ ಕೈಯನ್ನು ಹಿಡಿದುಕೊಂಡು ಹಾರಿ ಮರಳಿ ಬಾರದ ಲೋಕಕ್ಕೆ ಪ್ರಯಾಣ ಜತೆ ಜತೆಯಾಗಿ ಬೆಳೆಸಿದ್ದಾರೆ.

ಘಟನೆಯ ಸುದ್ದಿ ತಿಳಿದ ಊರವರು ಮತ್ತು ಹಾರಂಗಿ ಜಲಾಶಯದ ಸಿಬ್ಬಂದಿ ಸಂಜೆ 5.30 ರ ಸಮಯದಲ್ಲಿ ಮೃತ ದೇಹಗಳನ್ನು ನೀರಿನಿಂದ ಹೊರತೆಗೆಯಲು ಶಕ್ತವಾಯಿತು.

ಪ್ರೇಮಿಗಳ ದಿನದಂದೇ ಆತ್ಮಹತ್ಯೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಂಡದ್ದು ಒಂದು ದುರಂತವೇ ಸರಿ.

ತಮ್ಮ ಮಕ್ಕಳು ಸತ್ತು ಮಲಗಿದ ಮೇಲೆ, ಈಗ ಮನೆಯವರು ಮಕ್ಕಳ ಈ ಊಹಿಸಿಕೊಳ್ಳಲಾಗದ ನಿರ್ಧಾರಕ್ಕಾಗಿ ನೊಂದುಕೊಳ್ಳುತ್ತಿದ್ದಾರೆ. ಹೀಗಾಗುವ ಬದಲು ಮದುವೆ ಮಾಡುತ್ತಿದ್ದೆವಲ್ಲ, ಯಾಕ್ ಹೀಗೆ ಮಾಡ್ಕೊಂಡ್ರೋ ಎಂದು ಗೋಳಾಡುತ್ತಿದ್ದಾರೆ.

Leave A Reply

Your email address will not be published.