ಬಲಹೀನ ಬಿಎಸ್ಎನ್ಎಲ್ ಗೆ ಬಲ ಬರುವುದು ಯಾವಾಗ?

  • ಕಾರ್ತಿಕೇಯ ಹೆಬ್ಬಾರ್

ಎರಡು ದಿನಗಳ ಹಿಂದೆಯಷ್ಟೇ ನಮ್ಮೂರಾದ ಕಡಬ ತಾಲೂಕು, ಹೊಸಮಠಕ್ಕೆ ಹೋಗಿದ್ದೆ. ಹಳ್ಳಿಗಳೆಂದರೆ ಗೊತ್ತಲ್ಲ! ಕರೆಂಟು, ದೂರವಾಣಿ ಇವೆಲ್ಲ ಆಗೊಮ್ಮೆ ಈಗೊಮ್ಮೆ ಮಾತ್ರ ದರ್ಶನ ಕೊಟ್ಟು ಅದೃಶ್ಯವಾಗುವ ದೇವತೆಗಳಿದ್ದಂತೆ. ನಮ್ಮೂರಿನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ ಎನ್ನುವುದು ಮತ್ತೊಮ್ಮೆ ಅನುಭವಕ್ಕೆ ಬಂದು ಬಹಳ ಬೇಸರವೆನಿಸಿತು.

ಊರಿನಲ್ಲೊಂದು ಬಿಎಸ್ಏನ್ಎಲ್ ಟವರ್ ಇದೆ. ಇದು ಕೆಲಸ ಮಾಡುವುದು ಕರೆಂಟು ಇದ್ದಾಗ ಮಾತ್ರ. ಕರೆಂಟು ಇಲ್ಲದಾಗ ಕಾರ್ಯ ನಿರ್ವಹಿಸಲು ಬದಲಿ ವ್ಯವಸ್ಥೆ ಇದಕ್ಕೆ ಇಲ್ಲ. ಹಾಗಂತ ನಮ್ಮೂರಿನಲ್ಲಿ ಕರೆಂಟು ಇರುವುದೂ ದಿನದಲ್ಲಿ 5ರಿಂದ 6 ಗಂಟೆಗಳು ಮಾತ್ರ. ಅದೂ ವಾರದ 5 ದಿನಗಳಲ್ಲಿಯಷ್ಟೇ. ಹೆಚ್ಚಿನ ಗುರುವಾರ ಮತ್ತು ಶನಿವಾರಗಳಲ್ಲಿ ದುರಸ್ತಿ ಮತ್ತು ಇನ್ನಿತರ ಕಾರಣಗಳಿಂದಾಗಿ ವಿದ್ಯುತ್ ಇರುವುದಿಲ್ಲ. ಹಾಗಾಗಿ ಈ ದಿನಗಳಲ್ಲಿ ಮೊಬೈಲುಗಳಿಗೂ ಅನಿವಾರ್ಯ ರಜೆ.

ಊರ ತುಂಬಾ ಆಸ್ತಿಯನ್ನು ಇಟ್ಟುಕೊಂಡಿರುವ ಬಿಎಸ್ಎನ್ಎಲ್ ಈ ಸ್ಥಿತಿ ಕೇವಲ ನಮ್ಮ ಊರಿಗೆ ಮಾತ್ರ ಸೀಮಿತವಾಗಿಲ್ಲ. ಟವರ್ ಗಳ ಮತ್ತು ತಾಂತ್ರಿಕ ಸಮಸ್ಯೆ ಗಳು ಮಾತ್ರವಲ್ಲ. ಹಲವು ಅಡ್ಮಿನಿಸ್ಟ್ರೇಟಿವ್ ಸಮಸ್ಯೆಗಳಿಂದಾಗಿ ಬಿಎಸ್ಸೆನ್ನೆಲ್ ಬಸವಳಿದು ಹೋಗಿದೆ. ಕಸ್ಟಮರ್ ಸರ್ವಿಸ್ ಅಂತೂ ಸತ್ತು ಮಲಗಿದೆ.

ಕುಂದುಕೊರತೆಗಳ ಬಗ್ಗೆ ದೂರು ಸಲ್ಲಿಸುವ ಕೇಂದ್ರಸರಕಾರದ ಜಾಲತಾಣದಲ್ಲಿ ನಾಲ್ಕೈದು ಬಾರಿ ದೂರು ಸಲ್ಲಿಸಿದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಆಡಳಿತವಂತೂ ಇದರ ಗೋಜಿಗೆ ಹೋದದ್ದೇ ಇಲ್ಲ. ಈ ಸಮಸ್ಯೆ ಎಷ್ಟರ ಮಟ್ಟಿಗಿದೆಯೆಂದರೆ ಯಾವುದೇ ಗಂಭೀರ ವಿಚಾರವಿದ್ದರೂ ಸರಿ, ಕರೆಂಟು ಹೋಯಿತೆಂದರೆ ಮತ್ತೆ ಆ ವ್ಯಕ್ತಿಯೊಡನೆ ಸಂಪರ್ಕ ಸಾಧಿಸುವುದು ಕರೆಂಟು ಬಂದಮೇಲಷ್ಟೇ. ಅದು ಮರುದಿನವಾದರೂ ಆಶ್ಚರ್ಯವಿಲ್ಲ. ಎಷ್ಟೇ ಅನಿವಾರ್ಯ ಪರಿಸ್ಥಿತಿಯಿದ್ದರೂ ಆ ಸಂದರ್ಭದಲ್ಲಿ ಮೊಬೈಲ್ ನಿಮ್ಮ ಸಹಾಯಕ್ಕೆ ಬರುತ್ತದೆಯೆಂಬ ಭರವಸೆಯಿಲ್ಲ. ಯಾಕೆಂದರೆ ಬಿಎಸ್ಎನ್ಎಲ್ ಬಿಟ್ಟರೆ ಇನ್ಯಾವ ಮೊಬೈಲ್ ನೆಟ್ವರ್ಕ್ ಕೂಡ ಅಲ್ಲಿಲ್ಲ. ಈ ಎಲ್ಲ ಇಲ್ಲಗಳ ನಡುವೆಯೇ ಇಲ್ಲಿನ ಜನ ಬದುಕಬೇಕಿರುವುದು ದುರಂತವೇ ಸರಿ.

ಹೌದು. ಇದು ನಮ್ಮೂರು ಮಾತ್ರವಲ್ಲ, ಅನೇಕ ಹಳ್ಳಿಗಳ ವ್ಯಥೆ. ಒಂದು ಕಾಲದಲ್ಲಿ ಸರ್ವಾಧಿಕಾರಿಯಂತೆ ದೂರಸಂಪರ್ಕ ಕ್ಷೇತ್ರವನ್ನು ಆಳಿದ್ದ ಬಿಎಸ್ಎನ್ಎಲ್ ಇಂದು ಗಂಜಿ ಕೇಂದ್ರಗಳಲ್ಲಿ ಆಶ್ರಯವನ್ನು ಪಡೆಯುವ ನಿರಾಶ್ರಿತರಂತೆ ನಿರ್ಗತಿಕವಾಗಿದೆ. ಬೇರೆ ವಿಧಿಯಿಲ್ಲದೆ ಸರಕಾರ ಅದನ್ನು ಸಾಕುತ್ತಿದೆಯಷ್ಟೆ. ಆದರೆ ಅದೊಂದರಿಂದಲೇ ಹೊರಜಗತ್ತಿನ ಸಂಪರ್ಕ ಸಾಧ್ಯವಿರುವ ಇನ್ನೂ ಅನೇಕ ಹಳ್ಳಿಗಳಿವೆ ಎನ್ನುವುದು ನಮ್ಮನ್ನಾಳುವ ಯಾವೊಬ್ಬನಿಗೂ ಗೊತ್ತಿಲ್ಲವೆಂದು ಕಾಣುತ್ತದೆ. ಗೊತ್ತಿದ್ದರೂ ಅವರಿಗೆ ಅದರ ಗಂಭೀರತೆ ಖಂಡಿತ ತಿಳಿದಿಲ್ಲ. ಬಿಎಸ್ಎನ್ಎಲ್ ನ ಧ್ಯೇಯವಾಕ್ಯವಾಗಿರುವ “Connecting India”, ಇಂದಿನ ಬದಲಾದ ಸನ್ನಿವೇಶದಲ್ಲಿ ಅಕ್ಷರಶಃ “Disconnecting India” ಆಗಿ ಬದಲಾಗುತ್ತಿದೆ.

ಒಂದೆಡೆ ನಮ್ಮ ಪ್ರಧಾನಮಂತ್ರಿಗಳು ಡಿಜಿಟಲ್ ಇಂಡಿಯಾದ ತಮ್ಮ ಕನಸನ್ನು ಜನತೆಯ ಮುಂದಿಡುತ್ತಿದ್ದರೆ ಅದೇ ಸಮಯಕ್ಕೆ ಎಷ್ಟೋ ಹಳ್ಳಿಗಳಲ್ಲಿ ಅದು ಅಪಹಾಸ್ಯಕ್ಕೆ ಒಳಗಾಗುತ್ತಿದೆ. ಕಾರಣ, ನಾನು ಮೇಲೆ ವಿವರಿಸಿದ ಅವ್ಯವಸ್ಥೆಗಳೂ ಸೇರಿ ಇನ್ನು ಅನೇಕ.

ನಿಜವಾಗಿಯೂ ಪ್ರಧಾನಿಗಳ ಈ ಯೋಜನೆ ಸಫಲವಾಗಬೇಕಾದರೆ ಮೊದಲು ಆಗಬೇಕಾದ ಕೆಲಸ ದೂರಸಂಪರ್ಕ ಕ್ಷೇತ್ರವನ್ನು ಸದೃಢಗೊಳಿಸುವುದು, ತನ್ಮೂಲಕ ಹಳ್ಳಿ ಜನರ ಇಂದಿನ ಅನಿವಾರ್ಯವಾಗಿರುವ ಮೊಬೈಲನ್ನು ಇನ್ನಷ್ಟು ಆಪ್ತವಾಗಿಸುವುದು. ಸಂಬಂಧಪಟ್ಟವರು ಇದರ ಬಗ್ಗೆ ತಕ್ಷಣ ಕಾರ್ಯೋನ್ಮುಖರಾಗಲಿ.

Leave A Reply

Your email address will not be published.