ಬಡವನ ಬದುಕನ್ನೇ ಬದಲಾಯಿಸಿದ ಕೇರಳ ಲಾಟರಿ | 7 ಲಕ್ಷದ ಸಾಲಗಾರ ಈಗ 12 ಕೋಟಿ ಒಡೆಯ !

ತಿರುವನಂತಪುರ : ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಬಡ ರಬ್ಬರ್​ ಟ್ಯಾಪರ್​ ಒಬ್ಬ ರಾತ್ರೋರಾತ್ರಿ ಕೋಟ್ಯಧಿಪತಿ ಆಗಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ. ಬ್ಯಾಂಕ್​ನಲ್ಲಿ ಒಟ್ಟು 7 ಲಕ್ಷ ಸಾಲ ಹೊಂದಿದ್ದ ರಂಜನ್​ ಈಗ ಬರೋಬ್ಬರಿ 12 ಕೋಟಿ ಮೌಲ್ಯದ ಲಾಟರಿ ಟಿಕೆಟ್​ ಗೆದ್ದು ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ.

ರಂಜನ್ ಅವರು​ ಇತ್ತೀಚೆಗೆ ಬ್ಯಾಂಕ್​ ಒಂದಕ್ಕೆ ತೆರಳಿ ತನ್ನ ಮೂರು ಸಾಲದ ಬಡ್ಡಿ ಕಟ್ಟುವುದಕ್ಕಾಗಿ ನಾಲ್ಕನೇ ಸಾಲವನ್ನು ಕೊಡಿ ಎಂದು ಬ್ಯಾಂಕ್​ನ ಮ್ಯಾನೇಜರ್​ನಲ್ಲಿ ಕೇಳಿಕೊಂಡಿದ್ದರು.ಆದರೆ ಮ್ಯಾನೇಜರ್​ ಅದಕ್ಕೆ ಒಪ್ಪದೆ ಆತನನ್ನು ಹಾಗೇ ಕಳಿಸಿದ್ದರು. ಈಗ ಲಾಟರಿ ಹೊಡೆದು ಬ್ಯಾಂಕ್ ನಲ್ಲಿ ಡೆಪಾಸಿಟ್ ಇಡೋವಷ್ಟು ಹಣ ಸಂಪಾದಿಸಿದ್ದಾರೆ.

3 ಸಾಲಗಳನ್ನು ಚುಕ್ತಾ ಮಾಡಲು ನಾಲ್ಕನೇ ಸಾಲ ಕೇಳಿ ಸಿಗದಾಗ ಬೇಜಾರಿನಿಂದ ಮನೆಗೆ ಹಿಂದಿರುಗುವಾಗ ತನ್ನ ಹವ್ಯಾಸವಾಗಿದ್ದ ಲಾಟರಿ ಟಿಕೆಟ್​ನ್ನು ಕೊಂಡು ಬಂದಿದ್ದಾನೆ. 300 ರೂಪಾಯಿ ಕೊಟ್ಟು ತೆಗೆದುಕೊಂಡ ಲಾಟರಿ ಟಿಕೆಟ್​ ರಂಜನ್​ ಅವರ ಬದುಕನ್ನೇ ಬದಲಾಯಿಸಿದೆ. ಸೋಮವಾರದಂದು ಲಾಟರಿ ಟಿಕೆಟ್​ನ ವಿಜೇತರನ್ನು ಘೋಷಿಸಲಾಗಿದೆ. ಆದರೆ ಯಾರೂ ಕೂಡ ಆ ಟಿಕೆಟ್​ ತಮ್ಮದು ಎಂದು ಮುಂದೆ ಬಂದಿರಲಿಲ್ಲ.

ಮಂಗಳವಾರದಂದು ಲಾಟರಿ ಕೊಂಡ ಸ್ಥಳಕ್ಕೆ ಹೋದ ರಂಜನ್​ ತನ್ನ ಟಿಕೆಟ್​ ಗೆದ್ದಿದೆಯೋ ಇಲ್ಲವೋ ಎಂದು ಪರಿಶೀಲಿಸಿದ್ದಾರೆ. ಆಗ ತನ್ನ ಟಿಕೆಟ್​ ಸಂಖ್ಯೆ ಎಸ್​ಟಿ 269609 ಲಾಟರಿ ಗೆದ್ದಿದ್ದು 12 ಕೋಟಿ ಹಣವು ತನಗೆ ಬಹುಮಾನವಾಗಿ ಬಂದಿರುವುದು ರಂಜನ್​ಗೆ ತಿಳಿದುಬಂದಿದೆ.

ಸಂತಸದಿಂದ ಮನೆಗೆ ಬಂದ ರಂಜನ್​ ತನ್ನ ಮಡದಿಯ ಬಳಿ ಈ ವಿಚಾರವನ್ನು ಹಂಚಿಕೊಂಡಾಗ ಮೊದಲಿಗೆ ಆಕೆ ನಂಬಿರಲಿಲ್ಲವಂತೆ. ಆಮೇಲೆ ಊರವರೆಲ್ಲ ಬಂದು ಆತನಿಗೆ ಶುಭಹಾರೈಸುವುದನ್ನು ಕಂಡು ಆಕೆ ನಂಬಿದಳು ಎಂದು ರಂಜನ್​ ತಿಳಿಸಿದ್ದಾರೆ.

ತೆರಿಗೆ ಎಲ್ಲ ಕಳೆದು ರಂಜನ್​ಗೆ 7 ರಿಂದ 8 ಕೋಟಿ ರೂಪಾಯಿ ಬಹುಮಾನವಾಗಿ ಬರುವ ನಿರೀಕ್ಷೆಯಿದೆ. ಈ ಹಣದಲ್ಲಿ ಮೊದಲು ಬ್ಯಾಂಕ್​ನಲ್ಲಿರುವ 7 ಲಕ್ಷ ಸಾಲವನ್ನು ತೀರಿಸಿಕೊಳ್ಳುವುದಾಗಿ ರಂಜನ್​ ತಿಳಿಸಿದ್ದಾರೆ. ಅರ್ಧ ನಿರ್ಮಾಣವಾಗಿರುವ ತನ್ನ ಮನೆಯನ್ನು ಈ ಹಣದಲ್ಲಿ ಪೂರ್ತಿ ಮಾಡುವುದಾಗಿ ಆತ ಹೇಳಿದ್ದಾರೆ.

ಮೂರು ಮಕ್ಕಳಿರುವ ಕುಟುಂಬದಲ್ಲಿ ಮೊದಲನೇ ಮಗಳು ಮದುವೆಯಾಗಿ ಗಂಡನ ಮನೆಯಲ್ಲಿದ್ದು, ಮಗ ವಿದ್ಯಾಭ್ಯಾಸ ಬಿಟ್ಟು ತಂದೆಗೆ ಕೆಲಸದಲ್ಲಿ ನೆರವಾಗುತ್ತಿದ್ದಾನೆ. ಇನ್ನೋರ್ವ ಮಗಳು 12ನೇ ತರಗತಿಯಲ್ಲಿ ಓದುತ್ತಿದ್ದಾಳೆ.

Leave A Reply

Your email address will not be published.