ಸವಣೂರು : ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಚ ಭಾರತ ಕಲ್ಪನೆಗೆ ಚಾಲನೆ ನೀಡಿದ ಬಳಿಕ ದೇಶದೆಲ್ಲೆಡೆ ಆಂದೋಲನ ಮಾದರಿಯಲ್ಲಿ ಕಾರ್ಯನಡೆಯುತ್ತಿದೆ. ಇದೇ ರೀತಿ ದ.ಕ.ಜಿಲ್ಲೆಯ ಸವಣೂರು ಗ್ರಾ.ಪಂ.ವತಿಯಿಂದ ಕಳೆದೆರೆಡು ವರ್ಷಗಳಿಂದ ನಿರಂತರವಾಗಿ ಸವಣೂರು ಯುವಕ ಮಂಡಲ,ಮಂಜುನಾಥನಗರ ವಿವೇಕಾನಂದ ಯುವಕ ಮಂಡಲ ಇದರ ಸಹಯೋಗದಲ್ಲಿ ಸವಣೂರು, ಪಾಲ್ತಾಡಿ ಯಲ್ಲಿ , ಪುಣ್ಚಪ್ಪಾಡಿ ಗ್ರಾಮದಲ್ಲಿ ಸ್ವಚ್ಛ ಪುಣ್ಚಪ್ಪಾಡಿ ತಂಡದಿಂದ ಶ್ರಮದಾನದ ಮೂಲಕ ಸ್ವಚ್ಚತಾ ಕಾರ್ಯ ನಡೆಯುತ್ತಿದೆ.
ಇಂತಹ ಕಾರ್ಯ ನಡೆಯುತ್ತಿರುವ ಸವಣೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ನೂತನವಾಗಿ ನವೀಕರಣಗೊಂಡ ಬಸ್ತಂಗುದಾಣವನ್ನು ಸ್ವಚ್ಚ ಸವಣೂರು ತಂಡದ ಸದಸ್ಯ, ಸವಣೂರು ಯುವಕ ಮಂಡಲದ ಉಪಾಧ್ಯಕ್ಷ ಕುಲಪ್ರಕಾಶ್ ಮೆದು ಅವರು ನಿಯಮಿತವಾಗಿ ಆದಿತ್ಯವಾರ ಮತ್ತು ಬುಧವಾರದಂದು ಬೆಳಗ್ಗಿನ ಜಾವ ತಾನೇ ಹಿಡಿಸೂಡಿ ಹಿಡಿದುಕೊಂಡು ಸ್ವಚ್ಚತೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಹೆಚ್ಚಿನ ಕಡೆ ಬಸ್ ತಂಗುದಾಣಗಳೆಂದರೆ ಕಸದ ರಾಶಿಯೇ ತುಂಬಿರುತ್ತದೆ ಹಾಗೂ ಸಾರ್ವಜನಿಕರೂ ಕಸವನ್ನು ಅಲ್ಲೆ ಎಸೆಯುತ್ತಾರೆ. ಆದರೆ ಸವಣೂರಿನ ಯುವಕ ಕುಲಪ್ರಕಾಶ್ ಮೆದು ಅವರು ಸ್ವಚ್ಚತಾ ಕಾರ್ಯ ದೇವತಾ ಕಾರ್ಯ ಎಂದೆನಿಸಿ ನಿರಂತರ ಈ ಕಾರ್ಯ ಮಾಡುತ್ತಿದ್ದಾರೆ. ಸ್ವಯಂಸ್ಪೂರ್ತಿಯಿಂದ ಬಸ್ತಂಗುದಾಣ ಸ್ವಚ್ಛಗೊಳಿಸುತಿರುವ ಕುಲಪ್ರಕಾಶ್ ಮೆದು ಅವರ ಕೆಲಸ ಇತರರಿಗೂ ಪ್ರೇರಣೆಯಾಗಲಿ ಎಂಬುದೇ ಈ ವರದಿಯ ಉದ್ದೇಶ.
ಸ್ವಚ್ಛ ಮೇವ ಜಯತೆ. ಒಂದು ಹೆಜ್ಜೆ ಸ್ವಚ್ಛತೆಯೆಡೆಗೆ