ಇಲಿ ಜ್ವರಕ್ಕೆ ಕಡಬ ತಾಲೂಕಿನಲ್ಲಿ ಒಂದು ಬಲಿ | ವಿವಾಹ ನಿಶ್ಚಯವಾಗಿದ್ದ ದೋಳ್ಪಾಡಿಯ ನತದೃಷ್ಟ ಯುವಕ

ಕಡಬ ತಾಲೂಕಿನ ದೋಳ್ಪಾಡಿ ಗ್ರಾಮದ ಕೂರೇಲು ಎಂಬಲ್ಲಿನ ವಿವಾಹ ಗೊತ್ತಾಗಿದ್ದ ಯುವಕನೋರ್ವ ಶುಕ್ರವಾರ ಇಲಿ ಜ್ವರದಿಂದ ಮೃತಪಟ್ಟ ಘಟನೆ ನಡೆದಿದೆ.
ಸಾವನ್ನಪ್ಪಿದ ಯುವಕನನ್ನು ಕೂರೇಲು ನಿವಾಸಿ ಬಾಲಣ್ಣ ಗೌಡ ಎಂಬವರ ಪುತ್ರ ಯುವರಾಜ (28) ಎಂದು ಗುರುತಿಸಲಾಗಿದೆ.

ಇವರಿಗೆ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡು ಸ್ಥಳೀಯ ಕಾಣಿಯೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಜ್ವರ ಉಲ್ಬಣವಾದ ಹಿನ್ನೆಲೆಯಲ್ಲಿ ರೋಗಿಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಕೂಡಾ ಜ್ವರ ಕಡಿಮೆಯಾಗದೆ ಹೋದಾಗ ಶುಕ್ರವಾರ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಅದರೆ ಮಂಗಳೂರಿಗೆ ತಲುಪುವಷ್ಟರಲ್ಲಿ ಯುವಕನ ಪ್ರಾಣಪಕ್ಷಿ ಹಾರಿಹೋಗಿತ್ತು.
ಯುವಕ ಇಲಿ ಜ್ವರದಿಂದ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿರುದಾಗಿ ಯುವಕನ‌ ಮನೆಯವರು ತಿಳಿಸಿದ್ದಾರೆ.

ಯುವಕನಿಗೆ ಜನವರಿ 26 ರಂದು ಮದುವೆಯೆಂದು ನಿಶ್ಚಯವಾಗಿತ್ತು. ಕುದ್ಮಾರು ಗ್ರಾಮದ ಬರೆಪ್ಪಾಡಿ ಎಂಬಲ್ಲಿಂದ ಯುವತಿಯನ್ನು‌ಮದುವೆಯಾಗುವುದಾಗಿ ಸಿದ್ದತೆಗಳು ನಡೆದಿದ್ದವು.

Leave A Reply

Your email address will not be published.