ಭಾಷೆಯ ದುಃಸ್ಥಿತಿ ಕಂಡು ಹಂಪೆಯಲ್ಲಿ ಹೊಳೆಗೆ ಹಾರಿದ್ದ ಹತಾಶ ಕನ್ನಡಿಗ । ಚಿದಾನಂದ ಮೂರ್ತಿ ಇನ್ನುಕೇವಲ ನೆನಪು

ಬೆಂಗಳೂರು : ಹಿರಿಯ ಸಾಹಿತಿ, ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ (88) ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಚಿದಾನಂದ ಮೂರ್ತಿಯವರು ಆಸ್ಪತ್ರೆಯಲ್ಲಿ ಕೊನಯುಸಿರೆಳೆದಿದ್ದಾರೆ. ಪಾರ್ಥಿವ ಶರೀರವನ್ನು ಬೆಳಿಗ್ಗೆ ಅವರ ಸ್ವಗೃಹಕ್ಕೆ ತರಲಾಗುವುದು ಎಂದು ತಿಳಿದುಬಂದಿದೆ.

ಇಪ್ಪತ್ತನೆಯ ಶತಮಾನದಲ್ಲೂ ಜನ, ಜಲ, ನಾಡು, ನುಡಿಗೆ ಆಪತ್ತು ಬಂದಾಗ ಸಾಹಿತ್ಯ ಮತ್ತು ಸಂಶೋಧನೆಯ ವಿದ್ವತ್ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಸಿ ಕೊಂಡು ದಂತ ಗೋಪುರದಲ್ಲಿ ಕುಳಿತು ಕೊಳ್ಳದೆ ಸಮಾಜದೊಡನೆ ಬೆರತು ಚಳುವಳಿ ಮಾಡಿದ, ಟೀಕೆ ಟಿಪ್ಪಣಿಗಳಿಗೆ ಸೊಪ್ಪು ಹಾಕದೆ, ಬೀದಿ ಹೋರಾಟದಲ್ಲಿ ಭಾಗಿಯಾದ ವಿದ್ವಾಂಸ, ಸಂಶೋಧಕ, ಭಾಷಾತಜ್ಞ ಮತ್ತು ಬುದ್ದಿ ಜೀವಿ ಡಾ.ಚಿದಾನಂದಮೂರ್ತಿ. ವಿದ್ವತ್ವಲಯದಲ್ಲಿ ‘ಚಿ.ಮೂ’ ಎಂದೇ ಪ್ರಖ್ಯಾತರು. ಇತ್ತೀಚಿನ ಎರಡು ಪೀಳಿಗೆಯ ಕನ್ನಡ ವಿದ್ಯಾರ್ಥಿ ಗಳಿಗಂತೂ ಪ್ರೀತಿಯ ಮೇಷ್ಟ್ರು.

ಚಿದಾನಂದ ಮೂರ್ತಿಯವರ ವ್ಯಕ್ತಿತ್ವಡಾ. ಚಿದಾನಂದಮೂರ್ತಿ ಎಂದೊಡನೆ ಕಣ್ಣೆದುರಿಗೆ ಬರುವುದು ಸಂಕೀರ್ಣ, ಬಹುಮುಖಿ ವ್ಯಕ್ತಿತ್ವ. ಘನ ವಿದ್ವಾಂಸ, ಅಪ್ರತಿಮ ಸಂಶೋಧಕ, ಭಾಷಾಶಾಸ್ತ್ರಜ್ಞ , ಕನ್ನಡ ಕಟ್ಟಾಳು, ಕೋಮುವಾದಿಗಳ ಆರೋಪಿತ ಮುಖವಾಣಿ , ಭಾಷೆಯ ದುಃಸ್ಥಿತಿ ಕಂಡು ಹಂಪೆಯಲ್ಲಿ ಹೊಳೆ ಹಾರಿದ ಹತಾಶ ಕನ್ನಡಿಗ. ಸತ್ಯ ಪ್ರತಿಪಾದನೆಗೆ ಬಹುಮತದ ಅಭಿಪ್ರಾಯ ದ ವಿರುದ್ಧ ಈಜುವ ಛಲಗಾರ ಎಂಬ ಅನೇಕರ ಅನಿಸಿಕೆಗಳ ಸತ್ಯಾ ಸತ್ಯತೆಯನ್ನು ಅರಿಯಲು ಅವರ ಜೀವನದ ಅವಲೋಕನೆ ಅಗತ್ಯ.ಅವರು ತಮ್ಮ ನೇರ ಮಾತಿನಿಂದ ಅನೇಕರ ವಿರೋಧ ಕಟ್ಟಿಕೊಂಡದ್ದೂ ಇದೆ. ಅವರ ಶಿಷ್ಯರೇ ಅನೇಕ ಬಾರಿ ” ಇದೇಕೆ ನಮ್ಮ ಮೇಷ್ಟ್ರು ಇಷ್ಟು ನಿಷ್ಠುರವಾಗಿ ಮಾತನಾಡುವರು ?, ಎಂದು ಮುಜುಗರ ಪಟ್ಟು ಕೊಂಡದ್ದೂ ಇದೆ. ಆದರೆ ಜನಪ್ರಿಯತೆಗಿಂತ ಜನಪರತೆಯತ್ತಲೇ ಅವರ ಒಲವು ಹೆಚ್ಚು.

ಜನನ : ಚಿದಾನಂದ ಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ಕವಲೂರಿನಲ್ಲಿ. ಅವರ ಜನನ ೧೯೩೩ ಮೇ ೧ ರಂದು. ತಂದೆ ಕೊಟ್ಟೂರಯ್ಯ ಅಕ್ಷರಶಃ ಜಂಗಮ ರು. ಯಾವುದೇ ನಿಶ್ಚಿತವಾದ ಆದಾಯ ತರುವ ಕೆಲಸ ಇಲ್ಲ. ಕೆಲಕಾಲ ಕೂಲಿ ಮಠವನ್ನು ನಡೆಸಿ ಮಕ್ಕಳಿಗೆ ಪಾಠವನ್ನು ಹೇಳುತಿದ್ದರು. ತಾಯಿ ಪಾರ್ವತಮ್ಮ. ಚಿದಾನಂದ ಮೂರ್ತಿಯವರ ಪ್ರಾಥಮಿಕ ಶಿಕ್ಷಣ ತಂದೆಯ ಕೂಲಿ ಮಠದಲ್ಲಿ. ತಂದೆಯೇ ಮೊದಲ ಗುರು. ಕೂಲಿಮಠದಲ್ಲಿ ಕಲಿಕೆ. ನಂತರ ಸರ್ಕಾರಿ ಶಾಲೆ ಸೇರಿದರು.

ಬಾಲ್ಯ : ವಿದ್ಯಾಭ್ಯಾಸಬಾಲ್ಯವೆಲ್ಲ ಹಳ್ಳಿಯಲ್ಲೇ. ಅದೂ ಬಡತನದ ಬೇಗೆಯಲ್ಲಿ. ಓದಿನಲ್ಲಿ ಬಲು ಚುರುಕು. ಅವರಿಗೆ ಹುಟ್ಟಿ ೧೪ ವರ್ಷ ಆಗುವುವರೆಗೆ ವಿದ್ಯುತ್ ದೀಪದ ದರ್ಶನವಿಲ್ಲ. ಚಿಮಣಿ ಬುಡ್ಡಿಯಲ್ಲಿ ಯೇ ಓದು. ೧೪ ನೆ ವರ್ಷಕ್ಕೆ ಹೈಸ್ಕೂಲು ಶಿಕ್ಷಣಕ್ಕಾಗಿ ದಾವಣಗೆರೆಗೆ ಬಂದರು. ಅಲ್ಲಿ ಜಯದೇವ ಹಾಸ್ಟೆಲ್ ನಲ್ಲಿ ವಾಸ. ಹೈಸ್ಕೂಲಿನಲ್ಲಿ ಗಣಿತ ಮತ್ತು ಇತಿಹಾಸದಲ್ಲಿ ಬಹು ಮುಂದು. ಪ್ರಥಮ ದರ್ಜೆಯಲ್ಲಿ ಉತ್ತೀರ್ಣ.

ಇಂಟರ್ಮೀಡಿಯಟ್ ನಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದ ಆಯ್ಕೆ. ಅಲ್ಲಿ ಕನ್ನಡದ ಕಂಪಿಗೆ ಮನಸೋತರು. ಎಲ್.ಬಸವರಾಜು ಮತ್ತು ಜಿ.ಎಸ್.ಶಿವ ರುದ್ರಪ್ಪನವರ ಪ್ರಭಾವಲಯಕ್ಕೆ ಸೇರಿದರು. ಹಾಸ್ಟೆಲಿನಲ್ಲಿ ಹೊಟ್ಟೆ ತುಂಬ ಮುದ್ದೆ, ಬಾಯ್ತುಂಬ ಅನ್ನ. ಆದರೆ ಮನದ ತುಂಬ ಕನ್ನಡದ ಪಾಠ.ಇಂಟರ್ನಲ್ಲಿ ಉತ್ತಮ ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಪಾಸಾದರು. ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಅಂಕಗಳು ಬಂದಿದ್ದವು. ಸಲೀಸಾಗಿ ಇಂಜನಿಯರಿಂಗ್ ಸೇರುವ ನಂಬಿಕೆ ಇದ್ದಿತು. ಆದರೆ ಲೌಕಿಕ ಏಳಿಗೆಗೆ ಸಾಧನವಾಗ ಬಹುದಾದ ತಾಂತ್ರಿಕ ವಿದ್ಯೆಯ ಕಡೆ ಮನ ಒಲಿಯಲಿಲ್ಲ. ಕನ್ನಡ ಅಧ್ಯಾಪಕರಾಗ ಬೇಕೆಂದು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ.ಆನರ್ಸ್ ಸೇರಿದರು. ಯಥಾ ರೀತಿ ಸುತ್ತೂರು ಮಠದ ಉಚಿತ ವಿದ್ಯಾರ್ಥಿನಿಲಯ ಆಶ್ರಯ ನೀಡಿತು.

ಕಾಲೇಜಿನಲ್ಲಿ ಕುವೆಂಪು, ಡಿ.ಎಲ್.ಎನ್, ತಿ.ನಂ.ಶ್ರೀ, ತ.ಸು.ಶಾಮರಾಯರು ಮೊದಲಾದ ಕನ್ನಡ ದಿಗ್ಗಜಗಳು ಗುರುಗಳು. ಶ್ರೀಕಂಠಯ್ಯ ತಳುಕಿನ ವೆಂಕಣ್ಣಯ್ಯನವರ ಸಾನಿಧ್ಯ. ಅವರಲ್ಲಿ ಸ್ಪೂರ್ತಿ ತುಂಬಿತು ಪದವಿಯನ್ನು ಸ್ವರ್ಣ ಪದಕದೊಡನೆ ಪಡೆದರು. ಗುರುಗಳ ಮೆಚ್ಚಿಗೆಯೊಂದಿಗೆ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕ ಹುದ್ದೆಯೂ ಲಭಿಸಿತು. ಪುಟ್ಟ ಮೇಷ್ಟರ ಪಾಠ ವೈಖರಿಗೆ ವಿದ್ಯಾರ್ಥಿಗಳು ಪರವಶರಾದರು.

ಕೆಲಸಕ್ಕೆ ಸೇರಿದ ಹೊಸದರಲ್ಲಿ ಅವರಿಗೆ ವಿಮರ್ಶಕನಾಗಬೇಕೆಂಬ ಹಂಬಲ. ಅಧ್ಯಯನ ನಿರತರಾಗಿದ್ದರೂ ಪುಸ್ತಕದ ಹುಳು ಅಲ್ಲ.‘ಇತರ ಚಟುವಟಿಕೆಗಳಲ್ಲೂ ಆಸಕ್ತಿ. ಟೆನ್ನಿಸ್, ನಡಿಗೆ ನೆಚ್ಚಿನ ಹವ್ಯಾಸ. ಗುರುಗಳ ಒತ್ತಾಸೆಯಿಂದ ರಜಾ ಹಾಕಿ ಎಂ ಎ.ಗೆ ಸೇರಿದರು.ಅದೇ ತಾನೆ ಮೈಸೂರು ವಿಶ್ವ ವಿದ್ಯಾಲಯದ ನೂತನ ಕಟ್ಟಡ ಮಾನಸ ಗಂಗೋತ್ರಿ ಸಿದ್ಧವಾಗಿತ್ತು. ಅಲ್ಲಿಗೆ ಹೋದ ವಿಭಾಗಗಳಲ್ಲಿ ಕನ್ನಡವೇ ಪ್ರಥಮ. ಅಲ್ಲಿ ಎಂ.ಎಸ್.ವೃಷಭೇಂ ದ್ರಯ್ಯ, ಸುಜನಾ, ಟಿ.ವಿ.ವೆಂಕಟಾಚಲ ಶಾಸ್ತ್ರಿ ಇವರ ಸಹಪಾಠಿಗಳು ತೀ.ನಂ ಶ್ರೀ ಯವರ ಪ್ರಭಾವದಿಂದ ವಿಮರ್ಶೆಯತ್ತ ಬಾಗಿದ್ದ ಮನಸ್ಸು ಸಂಶೋಧನೆಯತ್ತ ಒಲಿಯಿತು. ಅಂತಿಮ ಎಂ.ಎ ನಲ್ಲಿ ಗೋಷ್ಠಿಯೊಂದರಲ್ಲಿ ಮಂಡಿಸಲು ‘ಪಂಪ ಕವಿ ಮತ್ತು ಜೀವನಮೌಲ್ಯ’ ವಿಷಯವನ್ನು ತೀ.ನಂ.ಶ್ರೀಯವರ ಸೂಚನೆಯ ಮೇಲೆ ಆರಿಸಿಕೊಂಡರು.

ಕನ್ನಡ ಶಾಸನಗಳ ಆಧಾರದ ಮೇಲೆ ಪಂಪನ ಕೃತಿಗಳಲ್ಲಿ ದೊರೆವ ಮಾಹಿತಿಯನ್ನು ವಿಶ್ಲೇಷಿಸಿದರು. ಆ ಸಮಯದಲ್ಲಿ ಅದೊಂದು ಹೊಸ ಪ್ರಯತ್ನವಾಗಿತ್ತು. ಶಾಸನ ಮತ್ತು ಸಾಹಿತ್ಯವನ್ನು ಒಂದರ ನೆರವಿನಿಂದ ಇನ್ನೊಂದನ್ನು ಅರ್ಥೈಸುವ ರೀತಿ ನವೀನವಾಗಿತ್ತು. ಶಾಸನಗಳಲ್ಲಿ ಹುದುಗಿರುವ ಮಾಹಿತಿಯ ಬಾಹುಳ್ಯವನ್ನು ಕಂಡ ಮೂರ್ತಿಯವರು ಶಾಸನ ಸಂಶೋಧನೆಯನ್ನು ತಮ್ಮ ಕಾರ್ಯ ಕ್ಷೇತ್ರವಾಗಿ ಆಯ್ದುಕೊಂಡರು.

ಸಂಶೋಧನಾ ಕ್ಷೇತ್ರಕ್ಕೆ ಅವರ ಪ್ರವೇಶಕ್ಕೆ ನಾಂದಿಯಾಯಿತು. ಚಿನ್ನದ ಪದಕದೊಂದಿಗೆಗೆ ಎಂ.ಎ. ಪದವಿ ಯಲ್ಲಿ ೧೯೫೭ ರಲ್ಲಿ ಉತ್ತೀರ್ಣರಾದರು.ಮದುವೆನಂತರ ಅಧ್ಯಾಪನಕ್ಕೆ ಹಿಂತಿರುಗಿದರು. ರಾಮಕೃಷ್ಣಾಶ್ರಮದ ಒಡನಾಟ ಮುಂದುವರಿಯಿತು. ದಲಿತರ ಕೇರಿಯ ಸ್ವಚ್ಛತೆಗೆ ಕೈ ಜೋಡಿಸಿದರು. ಕುರುಡರ ಶಾಲೆಯಲ್ಲಿ ಪಾಠ ಮಾಡಲು ಹೋದರು. ಅವರಿಗೆ ಬ್ರಹ್ಮ ಚಾರಿಯಾಗಿಯೇ ಉಳಿದು ಸಮಾಜ ಸೇವೆ ಮಾಡ ಬೇಕೆಂಬ ಹಂಬಲ. ಆದರೆ ತಂದೆ ತಾಯಿಯರಿಗೆ ಬಡತನದ ಬೇಗೆಯಿಂದ ಬೆಂದ ತಮಗೆ ನೆಮ್ಮದಿಯ ಬದುಕು ನೀಡಿದ ಕೈತುಂಬ ದುಡಿಯುವ ವಾತ್ಸಲ್ಯ ಮೂರ್ತಿ ಮಗ ಎಲ್ಲರಂತೆ ಸಂಸಾರಿಯಾಗಲಿ ಎಂಬ ಹಂಬಲ.

ಅದಕ್ಕೆ ಮದುವೆಗೆ ಒತ್ತಡ ಹಾಕಿದರು. ಚಿತ್ತ ಚಾಂಚಲ್ಯವಿಲ್ಲದೆ ಕಾರ್ಯ ಮಗ್ನನಾಗಲು ಮದುವೆ ಸಹಕಾರಿಯಾಗುವುದು ಎಂಬ ಅವರ ಸಲಹೆಯನ್ನು ಒಪ್ಪಿ 1961ರಲ್ಲಿ ಜೀವನ ಸಂಗಾತಿಯನ್ನು ಆರಿಸಿದರು. ಅದೂ ಸರಳವಾಗಿ ಬಸವ ಜಯಂತಿಯಂದು ವಿವಾಹವಾದರು. ಅವರ ಆಯ್ಕೆ ಉತ್ತಮವಾಗಿತ್ತು. ಹೆಂಡತಿ ಶ್ರೀಮತಿ ವಿಶಾಲಾಕ್ಷಿಯವರು ಮನೆಗೆ ಹೊಂದಿಕೊಂಡು ಗಂಡನ ಕೆಲಸದಲ್ಲಿ ಸಂಪೂರ್ಣವಾಗಿ ಒತ್ತಾಸೆ ನೀಡಿದರು.

ಎಲ್ಲ ಮನೆವಾರ್ತೆಯ ಹೊಣೆ ನಿರ್ವಹಿಸಿದ್ದರಿಂದ ನಿಶ್ಚಿಂತೆಯಿಂದ ಕೆಲಸ ಮಾಡಲು ಅವಕಾಶವಾಯಿತು ಇಬ್ಬರು ಮಕ್ಕಳು. ಮಗಳು ಶೋಭಾ ಮತ್ತು ಮಗ ವಿನಯ್ ಮಗ ತಂದೆಗೆ ಯಾವುದೇ ಸಂಸಾರದ ಜಂಜಡದ ಭಾರ ಹಾಕದೇ ಅವರು ತಮ್ಮೆಲ್ಲ ಕಾಲವನ್ನು ಸಂಶೋಧನೆಗೆ ಮೀಸಲಿಡಲು ಸಹಕರಿಸಿದರು.ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವೃತ್ತಿ ಜೀವನಮೈಸೂರಿನಲ್ಲಿ ತೀ.ನಂ.ಶ್ರೀ ನಿವೃತ್ತರಾದ ನಂತರ ವಿಶ್ವವಿದ್ಯಾನಿಲಯದಲ್ಲಿ ಒಳಗೆ ಮತ್ತು ಹೊರಗೆ ಬಹಳ ಬದಲಾವಣೆಗಳಾದವು. ಉಸಿರು ಕಟ್ಟುವ ವಾತಾವರಣ ನಿರ್ಮಾಣ ವಾಯಿತು. ಅದೇ ವೇಳೆಗೆ ಬೆಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ರೀಡರ್ ಹುದ್ದೆ ದೊರಕಿತು. ಸಂಶೋಧನೆಗೆ ಸಹಕಾರಿಯಾದ ಸುಸಜ್ಜಿತ ಗ್ರಂಥಾಲಯ, ದಶಕಗಳಿಂದ ಪರಿಚಿತ ವಾದ ಪ್ರಶಾಂತಮಯ ಮೈಸೂರಿನ ಪರಿಸರ ಬಿಟ್ಟು ಗದ್ದಲದ ಗೂಡಾದ ಬೆಂಗಳೂರಿಗೆ ಹೋಗುವುದು ಒಂದು ರೀತಿಯ ಸವಾಲೇ ಆಗಿತ್ತು.ಆದರೆ ಅದು ಅವರ ಬದುಕಿಗೆ ಹೊಸ ಆಯಾಮ ನೀಡಿತು.

ಹೊಸ ವಿಶ್ವ ವಿದ್ಯಾಲಯದಲ್ಲಿ ಉತ್ತಮವಾದ ಗ್ರಂಥಾಲಯ ನಿರ್ಮಾಣದ ಕೆಲಸದಲ್ಲಿ ಕೈ ಜೋಡಿಸಿದರು. ಅಧ್ಯಯನ ಶೀಲತೆಯಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾದರು. ಪಾಠಪ್ರವಚನ ಮುಗಿದೊಡನೆ ತಮ್ಮ ಛೇಂಬರಿನಲ್ಲಿ ಕುಳಿತಿರದೇ ಗ್ರಂಥಾಲಯಕ್ಕೆ ಧಾವಿಸುತ್ತಿದ್ದರು. ಪರಾಮರ್ಶನದಲ್ಲಿ ತೊಡಗಿದ ಅವರು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುವಂತಿದ್ದರು. ಅಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ಮಾಡಿ 1990 ರ ಅಕ್ಟೋಬರ್ ೧೦ರಂದು ಸ್ವಯಂಸೇವಾ ನಿವೃತ್ತಿ ಪಡೆದರು.ಅವರ ಭಾಷಾ ವಿಜ್ಞಾನದ ಕುಡಿಯಡೆದಿದ್ದು 1955 ರಲ್ಲಿ.

ಪುಣೆಯಲ್ಲಿ ಅಧ್ಯಯನ ಮಾಡಿ ಕನ್ನಡ ಶಾಸನ, ಸಾಹಿತ್ಯ, ಭಾಷೆ, ನಾಡಿನ ಊರು, ವ್ಯಾಕರಣಗಳ ಹೆಸರುಗಳನ್ನು ಶಾಸ್ತ್ರೀಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿ ಅನೇಕ ಮೌಲಿಕ ಸಂಪ್ರಬಂಧ ರಚಿಸಿರುವರು.ಅವರ ‘ಭಾಷಾ ವಿಜ್ಞಾನದ ಮೂಲತತ್ವಗಳು’ ಕನ್ನಡದ ಆ ವಿಷಯದಲ್ಲಿ ಮೊಟ್ಟ ಮೊದಲ ಕೃತಿ. ಅದರಲ್ಲಿ ಐತಿಹಾಸಿಕ, ವರ್ಣನಾತ್ಮಕ ಮತ್ತು ತೌಲನಿಕ ಭಾಷಾವಿಜ್ಞಾನಗಳ ಪರಿಚಯ ಮಾಡಿ ಕೊಟ್ಟಿರುವರು. ಇವರ ಭಾಷಾ ವಿಜ್ಞಾನದ ಪರಿಣತೆ ಗಮನಿಸಿ ಚಿಕಾಗೋ ವಿಶ್ವ ವಿದ್ಯಾಲಯದಲ್ಲಿದ್ದ ಎ.ಕೆ.ರಾಮಾನುಜನ್ ಭಾಷಾಶಾಸ್ತ್ರದಲ್ಲಿ ಪೋಸ್ಟ್ ಡಾಕ್ಟರಲ್ ಅಧ್ಯಯನಕ್ಕೆ ಅವಕಾಶ ದೊರಕಿಸಿದರು. ಜೊತೆಯಾಗಿ ಅಲ್ಲಿ ಕನ್ನಡ ಕಲಿಸುವ ಅವಕಾಶವೂ ದೊರೆಯಿತು.ನಂತರ ಇಟಲಿ, ಫ್ರಾನ್ಸ್, ಗ್ರೀಸ್ ಮತ್ತು ಈಜಿಪ್ಟ್ ದೇಶಗಳಿಗೆ ಭೇಟಿ ನೀಡಿದರು. ಅವರ ಸಂಶೋಧನೆಯಂತೂ ಶರವೇಗದಲ್ಲಿ ಸಾಗಿತ್ತು.

ಡಾ.ಚಿದಾನಂದ ಮೂರ್ತಿಯವರು ತೀ.ನಂ ಶ್ರೀಯವರ ಮಾರ್ಗದರ್ಶನದಲ್ಲಿ “ಕನ್ನಡ ಶಾಸನಗಳಲ್ಲಿ ಸಾಂಸ್ಕೃತಿಕ ಅಧ್ಯಯನ” ಸಂಪ್ರಬಂಧವನ್ನು ರಚಿಸಿದರು ಅದನ್ನು ಓದಿದ ಗುರುಗಳು ಭಾಪರವಶರಾಗಿ ನನಗೆ ಮಗ, ಮಗಳು ಇರುವರು ಆದರೆ ಮೂರ್ತಿ ನನ್ನ ಜ್ಞಾನಪುತ್ರ! ಎಂದು ಭಾವಪರವಶರಾಗಿ ಉದ್ಗರಿಸಿದರಂತೆ.

ಅದು ಒಂದು ಆಚಾರ್ಯಕೃತಿ, ಕನ್ನಡದಲ್ಲಿ ಮಾತ್ರವಲ್ಲ ದೇಶದಲ್ಲಿ ಯೇ ಸಂಶೋಧನಾ ಕ್ಷೇತ್ರದಲ್ಲಿ ವಿಶಿಷ್ಟ ಕೃತಿ.ಸಾಹಿತ್ಯ ಕೃತಿಗಳುತಮ್ಮ ಸಂಪ್ರಬಂಧದ ಜೊತೆಗೆ ಹಲವಾರು ಶ್ರೇಷ್ಠ ಸಂಶೋಧನಾ ಗ್ರಂಥಗಳನ್ನು ಸುಮಾರು ಮುನ್ನೂರಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಹೊರ ತಂದಿರುವುರು. ಶೂನ್ಯ ಸಂಪಾದನೆ ಕುರಿತು ಪುಸ್ತಕವು ತುಸು ಅಸಮಧಾನದ ಅಲೆ ಎಬ್ಬಿಸಿತು. ಆದರೆ ಅದು ವಸ್ತುನಿಷ್ಠ ಅಧ್ಯಯನಕ್ಕೆ ಶ್ರೀಕಾರ ಹಾಕಿತು. ಧರ್ಮ ನಿಷ್ಠೆ ಮತ್ತು ಸತ್ಯ ನಿಷ್ಠೆಗಳು ವಿಭಿನ್ನ ಎಂಬುದು ಅವರ ಲಿಂಗಾಯಿತ ಅಧ್ಯಯನಗಳು ಸಂಪ್ರಭಂಧ ಸಂಕಲನದಲ್ಲಿ ಎದ್ದು ಕಾಣುವುದು.

ವಚನ ಸಾಹಿತ್ಯ ಮತ್ತು ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಅಸ್ಪೃಶ್ಯತೆ ಪುಸ್ತಕಗಳಲ್ಲಿ ಹಲವರು ಸಾಂಸ್ಕೃತಿಕ ಅಂಶಗಳ ವಿವೇಚನೆ ಮಾಡಿರುವರು.ಬಸವಣ್ಣನವರು ಮತ್ತು ಅಲ್ಲಮನ ಸಾರ್ಥಕ ಜೀವನ ಒಂದು ಪುನಾರಚನೆ ಎರಡೂ ಕೃತಿಗಳು ಸಂಶೋಧನೆಯ ಆಧಾರದ ಮೇಲೆ ಐತಿಹ್ಯಗಳು ಮತ್ತು ಮಿಥ್ ಗಳಿಗೆ ಹೊರತಾದ ವಸ್ತು ನಿಷ್ಠ ಜೀವನ ಚಿತ್ರಣಕ್ಕೆ ಮಾದರಿಯಾಗಿವೆ.”

ಡಾ. ಚಿದಾನಂದ ಮೂರ್ತಿ ಅಧ್ಯಯನ ಒಂದು ಜ್ಞಾನಶಾಖೆಗೆ ಸೀಮಿತವಲ್ಲ. ಸಂಸ್ಕೃತಿಯ ಅಧ್ಯಯನಕ್ಕೆ ಶಾಸನಗಳೇ ಮೂಲವಾದ ರೂ ಅವುಗಳ ಮಿತಿ ಅರಿತು ಪ್ರಾಚೀನ ಸಾಹಿತ್ಯ, ಛಂದಸ್ಸು, ವ್ಯಾಕರಣ, ಭಾಷಾಶಾಸ್ತ್ರ, ಜಾನಪದ ಕ್ಷೇತ್ರಗಳ ನೆರವನ್ನೂ ಪಡೆದರು.ಹೀಗೆ ಸಮಗ್ರವಾಗಿ ಮೂಡಿ ಬಂದ ಸಂಶೋಧನೆಗಳೇ ವಾಗರ್ಥ, ಪರಗಣ, ಕನ್ನಡ ಸಾಹಿತ್ಯ ಮತ್ತು ಶಾಸನಗಳಲ್ಲಿ ಸಂಗೀತ ವಿಚಾರ ಮುಂತಾದ ಸಂಪ್ರಬಂಧಗಳ ಸಂಕಲನಗಳು.ಸಾಂಸ್ಕೃತಿಕ ಸಂಶೋಧನೆ ಯಾವ ಯಾವ ಆಯಾಮಗಳನ್ನು ಪಡೆಯಬಹುದು ಎಂಬುದಕ್ಕೆ ‘ಪೂರ್ವ ಸೂರ್ಯಗ್ರಹಣ’ ದ ‘ಸಮಾಜೋ ಸಾಂಸ್ಕೃತಿಕ’ ಅಧ್ಯಯನ ಒಂದು ಅಪೂರ್ವ ನಿದರ್ಶನ. ಒಂದು ಘಟನೆಯ ಸುತ್ತ ಹುಟ್ಟಿ ಕೊಳ್ಳುವ ನಂಬಿಕೆ, ಸಂಪ್ರದಾಯ, ಆಚಾರ, ವಿಚಾರಗಳನ್ನು ಇಲ್ಲಿ ವಿಶದೀಕರಿಸಿದ್ದಾರೆ.

ದೂರದರ್ಶನದ ಸ್ವತಂತ್ರ ಕಾರ್ಯನಿರ್ವಹಣೆಗಾಗಿ ನಡೆದ ಚಳುವಳಿಯಲ್ಲಿ ಕಟ್ಟಡಕ್ಕೆ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿದು ಹಾಕುವ ಮಟ್ಟಕ್ಕೆ ಹೋಗಿದ್ದರು, ೧೯೮೨ರಲ್ಲಿ ಗೋಕಾಕ್ ವರದಿಯ ಜಾರಿಗೆ ಕನ್ನಡ ಸಾಹಿತಿಗಳು, ಕಲಾವಿದರ ಹೋರಾಟದ ಮುಂಚೂಣಿಯಲ್ಲಿದ್ದರು, ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ, ರೈಲ್ವೇ ನೇಮಕಾತಿಯಲ್ಲಿ ಕನ್ನಡಿಗರ ಅಗುವ ಅನ್ಯಾಯದ ವಿರುದ್ಧ ಹೀಗೆ ಅವರು ಭಾಗವಹಿಸದ ಚಳುವಳಿಗಳೇ ಇಲ್ಲವೆನ್ನಬಹುದು.೧೯೮೮ರಲ್ಲಿ ಚಿದಾನಂದಮೂರ್ತಿ ‘ಕನ್ನಡ ಶಕ್ತಿ ಕೇಂದ್ರವನ್ನು’ ಅಸ್ತಿತ್ವಕ್ಕೆ ತಂದರು. ಅದು ಕರ್ನಾಟಕದಾದ್ಯಂತ ವ್ಯಾಪಿಸಿದ ಸಂಘಟನೆ. ಜಿಲ್ಲಾ ಮಟ್ಟಗಳಲ್ಲಿ ಇದರ ಶಾಖೆಗಳು ಆರಂಭಗೊಂಡವು. ಕನ್ನಡದ ಕಾರಣಕ್ಕಾಗಿಯೇ ರಾಜ್ಯಾದ್ಯಂತ ವ್ಯಾಪಿಸಿದ ಏಕೈಕ ಸಂಘಟನೆ ಇದೊಂದೇ.

ಶಕ್ತಿ ಕೇಂದ್ರದ ವತಿಯಿಂದ ಹೊರತಂದ ‘ಕನ್ನಡ-ಕನ್ನಡಿಗ-ಕರ್ನಾಟಕ’ ಎಂಬ ತುಂಬಾ ಉಪಯುಕ್ತವಾದ ಅಂಕಿ-ಅಂಶಗಳನ್ನು, ಖಚಿತ ಮಾಹಿತಿಯನ್ನೂ ಒಳಗೊಂಡ ಪುಸ್ತಕವನ್ನು. ಇದು “ಕನ್ನಡಿಗರ ಅನಧಿಕೃತವಾದ ಸಂವಿಧಾನ” ಎಂಬ ಪ್ರಶಂಸೆಗೆ ಪಾತ್ರವಾಗಿದೆ.ಸಂಶೋಧನೆಕಟ್ಟು ಗ್ರಂಥವ ಏಳು ಸಾಯಣ ತುಂಗಭದ್ರಾ ತೀರಕೆ , ಜನರ ಉಳಿಸಲು ಧರ್ಮ ಬೆಳಸಲು ಹೊರಡು ನೀ ಕದನಕೆ” ಎಂದು ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಕಾಲಕೆ ಶಾಸ್ತ್ರವೇತ್ತ ಪಂಡಿತ ಸಾಯಣಾಚಾರ್ಯರಿಗೆ ಶಸ್ತ್ರ ಹಿಡಿದು ದಾಳಿಕೋರರ ವಿರುದ್ದ ಹೋರಾಡಲು ಕರೆಕೊಟ್ಟರೆಂದು ಯಾವಾಗಲೋ ಓದಿದ ನೆನಪು. ಮೊದಲ ಬಾರಿಗೆ ವೇದಗಳಿಗೆ ಭಾಷ್ಯ ಬರೆವ ಮಹಾನ್ ಕಾರ್ಯದಲ್ಲಿ ತೊಡಗಿದ್ದ ತಮ್ಮ ಸಾಯಣನಿಗೆ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಸ್ಪೂರ್ತಿ ನೀಡಿದ ವಿದ್ಯಾರಣ್ಯ ಮುನಿ ನುಡಿದಿದ್ದರಂತೆ. ಅವರ ಬೆಂಬಲದಿಂದಲೇ ಅಳಿದು ಹೋಗುತ್ತಿರುವ ಸಂಸ್ಕೃತಿ ಮತ್ತು ಧರ್ಮದ ರಕ್ಷಣೆಗೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಯಿತು ಎಂದು ಡಾ.ಸಾಲತ್ತೂರ ಮೊದಲಾದ ಹಲವು ಹಿರಿಯ ಇತಿಹಾಸ ತಜ್ಞರ ಅಭಿಪ್ರಾಯ.ಸಂಶೋಧನೆ.

ಸಾಹಿತ್ಯ, ಛಂದಸ್ಸು, ಶಾಸನ ಶಾಸ್ತ್ರ, ಭಾಷಾವಿಜ್ಞಾನ, ಜಾನಪದ ಶಾಸ್ತ್ರ, ಕರ್ನಾಟಕ ಸಂಸ್ಕೃತಿಗಳಿಗೆ ಅವರ ಕೊಡುಗೆ, ಜನಪರ ಕಳಕಳಿಯ ಫಲವಾದ ಚಳುವಳಿಗಳಲ್ಲಿ ಅವರ ಪಾತ್ರವನ್ನು, ಅವರ ಕೆಲ ಅಭಿಪ್ರಾಯಗಳು ಸಮಾಜದ ಸಿದ್ಧ ಸೂತ್ರಗಳಿಗೆ ಅನುಗೂಣವಾಗಿಲ್ಲ ಎಂದು ಆರೋಪಿಸಿ ಸಾರಾಸಗಟಾಗಿ ಅವಗಣನೆ ಮಾಡುವುದು ಚರ್ಚಾರ್ಹ ವಿಷಯ.ಸಂಶೋಧನೆ ಎಂಬುದು ಜನಾಭಿಪ್ರಾಯದ ಪ್ರವಾಹದೊಡನೆ ಈಜದೆ ದಾಖಲೆ ಪುರಾವೆಗಳ ಆಧಾರದಲ್ಲಿ ಜನರ ನಂಬಿಕೆ. ಶ್ರದ್ಧೆಗೆ ವಿರುದ್ದವಾದರೂ ಸತ್ಯ ಸಂಗತಿ ಹೇಳುವ ಎಂಟೆದೆ ಯವರ ಕೆಲಸ. ಅದನ್ನು ಒಪ್ಪದವರು ಖಚಿತ ದಾಖಲೆ ಮಂಡಿಸಿ ನಿರಾಕರಿಸಬೇಕೇ ಹೊರತು ಅಧ್ಯಯನವನ್ನೇ ಮಾಡದೇ ಆರೋಪ ಮಾಡುವುದು ವಿಪರ್ಯಾಸ. ವೈಯುಕ್ತಿಕ ಅನಿಸಿಕೆ ಮತ್ತು ಸಾಧನೆಗಳನ್ನು ತಳಕು ಹಾಕದೆ ಬೇರೆಯಾಗಿ ಮೌಲ್ಯಮಾಪನ ಮಾಡಿದಾಗ ಮಾತ್ರ ಕನ್ನಡಕ್ಕೆ ನೀಡಿದ ಅವರ ಕಾಣಿಕೆಯ ಮಹತ್ವ ಅರಿವಾಗುವುದು.

ಪ್ರಶಸ್ತಿಗಳು : ಇವರನ್ನು ಅರಸಿ ಬಂದ ಪ್ರಶಸ್ತಿಗಳು ಅನೇಕ.
ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ,ಮಾಸ್ತಿ ಪ್ರಶಸ್ತಿ,ಸಾಹಿತ್ಯ ಶ್ರೀ ಪ್ರಶಸ್ತಿ,ಅ.ನ.ಕೃ. ಪ್ರತಿಷ್ಠಾನ ಪ್ರಶಸ್ತಿ,ರಾಜ್ಯೋತ್ಸವ ಪ್ರಶಸ್ತಿ,ಪಂಪ ಪ್ರಶಸ್ತಿ,ನಾಡೋಜ ಪ್ರಶಸ್ತಿ ಮುಖ್ಯವಾದುವು.ಕನ್ನಡದ ಜನತೆ ಪ್ರೀತಿಯಿಂದ ಅರ್ಪಿಸಿದ ಗೌರವ ಗ್ರಂಥ ‘ಸಂಶೋಧನೆ.’ಪ್ರತಿ ವರ್ಷ ಸಂಶೋಧಕರಿಗೆ ಇವರ ಹೆಸರಿನಲ್ಲಿ ಚಿದಾನಂದ ಪ್ರಶಸ್ತಿ ನೀಡಲಾಗುತ್ತಿದೆ.

ಎಚ್‌. ಶೇಷಗಿರಿರಾವ್‌ ಬರಹದ ಯಥಾವತ್ ಬಳಕೆ

1 Comment
  1. sklep online says

    Wow, awesome blog format! How long have you been running a
    blog for? you made running a blog glance easy. The
    entire look of your web site is fantastic, let alone the content material!
    You can see similar here najlepszy sklep

Leave A Reply

Your email address will not be published.