ಕುದ್ಮಾರು | ಊರವರ ಉದಾರತೆಯಿಂದ ಸರಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ

ಬೆಳಂದೂರು : ಸರಕಾರಿ ಶಾಲೆಯ ಉಳಿವಿಗಾಗಿ ಗ್ರಾಮೀಣ ಭಾಗದ ವಿದ್ಯಾಭಿಮಾನಿಗಳು ಹರಸಾಹಸ ಪಡುತ್ತಿರುವ ಅನೇಕ ಉದಾಹರಣೆಗಳು ಇತ್ತೀಚೆಗೆ ಕಂಡು ಬರುತ್ತಿವೆ. ಇದರ ಬೆನ್ನಲ್ಲೇ ಕುದ್ಮಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಊರವರೇ ಹಣ ಹೊಂದಿಸಿ ಕೊಟ್ಟು ಉದಾರತೆ ಮೆರೆದಿದ್ದಾರೆ.ಸರಕಾರ ಒಂದು ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಶೈಕ್ಷಣಿಕ ಪ್ರವಾಸಕ್ಕೆ ಹಣ ನೀಡುವ ನಿರ್ಧಾರಕ್ಕೆ ಬಂದು ಅದು ಅನುಷ್ಟಾನವಾದ ಮಾತು ದೂರದಲ್ಲಿದೆ.

ಆದರೆ ಕುದ್ಮಾರು ಶಾಲೆಯಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಇಲ್ಲಿನ  ವಿವಿಧ ಸಂಘಟನೆಗಳು, ಎಸ್.ಡಿ.ಎಂಸಿ ಸದಸ್ಯರು  ಹಣ ಹೊಂದಿಸಿ ಕೊಟ್ಟಿರುವುದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ. ಶಾಲೆಯ ಎಲ್ಲಾ  204 ವಿದ್ಯಾರ್ಥಿಗಳ ಪ್ರವಾಸದ ವೆಚ್ಚ ಸುಮಾರು 30,000 ರೂವನ್ನು ಭರಿಸಿ ವಿದ್ಯಾರ್ಥಿಗಳಲ್ಲಿ ಹೊಸ ಅನುಭವಕ್ಕೆ ಪ್ರೇರಣೆ ನೀಡಿದ್ದಾರೆ.

ಒಂದರಿಂದ ನಾಲ್ಕನೇ ತರಗತಿಯ 87  ವಿದ್ಯಾರ್ಥಿಗಳು ಈಶ್ವರಮಂಗಲದ ಹನುಮಗಿರಿ, ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಬಾಲವನ, ಬಿಂದು ನೀರಿನ ಫ್ಯಾಕ್ಟರಿಗೆ ಭೇಟಿ ನೀಡಿದರು.

ಐದರಿಂದ ಎಂಟನೇ ತರಗತಿಯ 117 ವಿದ್ಯಾರ್ಥಿಗಳು ನರಹರಿ ಪರ್ವತ, ಬಿಕರ್ಣಕಟ್ಟೆ ಚರ್ಚ್, ಪಿಲಿಕುಳ, ಕಟೀಲು ಕ್ಷೇತ್ರ, ಕೆಂಜಾರು ವಿಮಾನ ನಿಲ್ದಾಣ, ಪಣಂಬೂರು, ಗೋಕರ್ಣೇನಾಥೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿದರು. ವಿದ್ಯಾರ್ಥಿಗಳ ಆಶಯಕ್ಕೆ ಪೂರಕವಾಗಿ ಸ್ಪಂದಿಸಿರುವ ಸಂಘ ಸಂಸ್ಥೆಗಳು ಹಾಗೂ ಎಸ್‍ಡಿಎಂಸಿ ಸದಸ್ಯರ ಈ ಸಹಕಾರಕ್ಕೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

” ಇಲ್ಲಿನ ಶಿಕ್ಷಕರು ಹಾಗೂ ಎಸ್‍ಡಿಎಂಸಿ ಯವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸವನ್ನು ಬಹಳ ಅಚ್ಚುಕಟ್ಟಾಗಿ ನೇರವೇರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗಳತ್ತ ಪೋಷಕರು ಮುಖ ಮಾಡಿರುವುದರಿಂದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕುದ್ಮಾರು ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗದಂತೆ ಎಲ್ಲಾ ರೀತಿಯ ಕಾರ್ಯಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದೇವೆ. “

” ವಿದ್ಯಾರ್ಥಿಗಳ ಜೀವನದಲ್ಲಿ ಶಾಲಾ ಶೈಕ್ಷಣಿಕ ಪ್ರವಾಸ ಕೂಡಾ ಬಹಳ ಮುಖ್ಯವಾಗಿರುತ್ತದೆ. ಆದರೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೇ ಹೆಚ್ಚಿರುವುದರಿಂದ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಊರಿನ ಸಂಘಟನೆಗಳ ಸಹಕಾರ ಕೋರಿ ಪ್ರವಾಸವನ್ನು ಯಶಸ್ವಿಗೊಳಿಸಲಾಗಿದೆ. ” ಹೀಗೆಂದು ಸೀತಾರಾಮ ಗೌಡ ಕುವೆತ್ತೋಡಿ ಅಧ್ಯಕ್ಷರು, ಎಸ್.ಡಿ.ಎಂ.ಸಿ ಕುದ್ಮಾರು, ಸರಕಾರಿ ಹಿ.ಪ್ರಾ.ಶಾಲೆ, ಅವರು ತಿಳಿಸಿರುತ್ತಾರೆ.

Leave A Reply

Your email address will not be published.