ಸುಳ್ಯದ ಮಡಪ್ಪಾಡಿಯಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ : ಇದೇ ಜ.5 ರ ಭಾನುವಾರ

ಸುಳ್ಯ : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಜಂಟಿ ಸಹಯೋಗದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಇದೇ ಜ.5 ರ ಭಾನುವಾರ ಸುಳ್ಯದ ಮಡಪ್ಪಾಡಿಯಲ್ಲಿ ನಡೆಯಲಿದೆ.

ಈ ಹಿಂದೆ ಡಿ.22 ರಂದು ನಿಗದಿಯಾಗಿದ್ದ ಗ್ರಾಮ ವಾಸ್ತವ್ಯ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತು. ಮುಂದೂಡಲಾಗಿತ್ತು.

ದ.ಕ‌.ಜಿಲ್ಲಾಡಳಿತ, ದ.ಕ.ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಸುಳ್ಯ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಸುಳ್ಯ, ಮಡಪ್ಪಾಡಿ ಗ್ರಾಮ ಪಂಚಾಯತ್ ಮತ್ತು ಮಡಪ್ಪಾಡಿ ಗ್ರಾಮಸ್ಥರ ಸಹಕಾರದಲ್ಲಿ  ನಡೆಯಲಿರುವ ಪತ್ರಕರ್ತರ ಗ್ರಾಮ ವಾಸ್ತವ್ಯದ ದಿನ, ವೈದ್ಯಕೀಯ ಶಿಬಿರ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ.

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಎಸ್.ಅಂಗಾರ ಹಾಗು ಜಿಲ್ಲೆಯ ಎಲ್ಲಾ ಶಾಸಕರುಗಳು, ಜಿಲ್ಲಾಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹಾಗು ತಾಲೂಕಿನ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸೆಲ್ವಮಣಿ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಪುತ್ತೂರು ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಳ್ ಹಾಗು ಇತರ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಗ್ರಾಮ ವಾಸ್ತವ್ಯ ಯಾಕೆ?
ಗ್ರಾಮ ವಾಸ್ತವ್ಯದಲ್ಲಿ ಉದ್ಘಾಟನೆ, ಅಧಿಕಾರಿಗಳೊಂದಿಗೆ ಜನರ ನೇರ ಮುಖಾಮುಖಿ, ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರ ಮುಖಾಮುಖಿ, ಗ್ರಾಮಸ್ಥರ ಜೊತೆ ಪತ್ರಕರ್ತರ ಮುಖಾಮುಖಿ, ಸಮಾರೋಪ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳು, ಗ್ರಾಮದ ಹಿರಿಯರೊಂದಿಗೆ ಪತ್ರಕರ್ತರ ಚಾವಡಿ ಪೇ ಚರ್ಚೆ ಮುಂತಾದ ಅಜೆಂಡಾಗಳನ್ನು ಉದ್ದೇಶಿತ ಗ್ರಾಮ ವಾಸ್ತವ್ಯ ಹೊಂದಿದೆ.

ಗ್ರಾಮ ವಾಸ್ತವ್ಯ ಹೇಗೆ ನಡೆಯಬಹುದೆಂಬ ಕುತೂಹಲ ನಮ್ಮಲ್ಲಿ ಇದೆ. ಗ್ರಾಮದೊಳಗೆ ಮಂತ್ರಿಗಳು, ಜಿಲ್ಲೆಯ ಶಾಶಕರುಗಳು ಮತ್ತು ಜಿಲ್ಲೆಯ ದೊಡ್ಡ ಅಧಿಕಾರಿಗಳು ಬರುವ ಕಾರಣ ಮತ್ತೊಂದಷ್ಟು ಪೊಲೀಸರು ಅವರನ್ನು ಅನಿವಾರ್ಯವಾಗಿ ಕೂಡಿಕೊಳ್ಳುತ್ತಾರೆ. ಮತ್ತೊಂದಷ್ಟು ಜನರು ಪೇಟೆಯಿಂದ ಪಟ್ಟಣಗಳಿಂದ ಸೇರಿಕೊಳ್ಳುತ್ತಾರೆ. ಸಾಲು ಸಾಲು ವಾಹನಗಳು ಬಂದು ನಿಲ್ಲುತ್ತವೆ.

ವ್ಯಾಪಾರಸ್ಥರಿಗೆ ಅದ್ಯಾವ ಮಾಯೆಯಲ್ಲಿಯೋ ಏನೋ ಯಾವುದೇ ಊರಲ್ಲಿ ಏನೇ ಸಮಾರಂಭ ಬರಲಿ: ಮೊದಲು ನ್ಯೂಸ್ ಸಿಗುವುದು ಅವರಿಗೆ. ಪತ್ರಕರ್ತರಿಗೆ ಸುದ್ದಿ ತಿಳಿಯುವಷ್ಟರಲ್ಲಿ ವ್ಯಾಪಾರಿಗಳು ತಮ್ಮ ಸರಂಜಾಮು ರೆಡಿ ಮಾಡಿಟ್ಟಿರುತ್ತಾರೆ ! ಅಷ್ಟು ಪ್ರಬಲ ಅವರ ನೆಟ್ವರ್ಕ್.

ಜನರ ಬಾಯಾರಿಕೆ ಐಸ್ ಕ್ಯಾಂಡಿ ಮಾರುವವನು ಬೆಲ್ಲು ಹೊಡೆಯುತ್ತಾ ನಿಲ್ಲುತ್ತಾನೆ. ಇನ್ನೊಬ್ಬಾತ ಅಗಲವಾದ ಬೋಗುಣಿಯಲ್ಲಿ ಏಕಕಾಲದಲ್ಲಿ ಚರುಮುರಿ ಮಿಕ್ಸು ಮಾಡುತ್ತಾ ಟನ್ ಟನ್ ಸದ್ದು ಮಾಡುತ್ತಾ ಜನರನ್ನಾಕರ್ಷಿಸುತ್ತಾನೆ. ಕಲ್ಲಂಗಡಿ ಹಣ್ಣು ಬಿಚ್ಚಿಟ್ಟವನು ಪದೇ ಪದೇ ಆಕಾಶ ನೋಡುತ್ತಾನೆ. ಮಳೆ ಬೀಳದೆ ಹೋದರೆ ಆತನಿಗೆ ಒಳ್ಳೆ ಬೆಳೆ ! ಅಷ್ಟರಲ್ಲಿ ಎಲ್ಲ ಹಣ್ಣು ಸೇಲ್ ಮಾಡುವ ತವಕ ಆತನದು.

ಒಟ್ಟಾರೆಯಾಗಿ ಒಂದು ಮಿನಿ ಪೇಟೆಯೆ ಅಲ್ಲಿ ಸೃಷ್ಟಿಯಾಗಿ ಬಿಡುತ್ತದೆ.

ಮಡಪ್ಪಾಡಿಯಲ್ಲಿ ನಡೆಯಲಿರುವ ಗ್ರಾಮ ವಾಸ್ತವ್ಯದ ಆಯೋಜಕರಿಗೆ ಇವೆಲ್ಲದರ ಅರಿವು ಚೆನ್ನಾಗಿ ಇದೆ. ಆದ್ದರಿಂದ ಗ್ರಾಮ ವಾಸ್ತವ್ಯ ಪೇಟೆ ವಾಸ್ತವ್ಯ ಆಗದಿರಲಿ ಎಂಬುದಷ್ಟೇ ನಮ್ಮ ಆಶಯ.

Leave A Reply

Your email address will not be published.