ಇವತ್ತು ಸಂಜೆ ವಿಟ್ಲದಲ್ಲಿ, ರಾಷ್ಟ್ರೀಯ ಪೌರತ್ವ ಕಾಯಿದೆ ಮತ್ತು ಎನ್ ಆರ್ ಸಿ ಯನ್ನು ಬೆಂಬಲಿಸಿ ಹಿಂದೂಸಂಘಟನೆಗಳ ಬೃಹತ್ ಸಮಾವೇಶ

ಇವತ್ತು ದಕ್ಷಿಣಕನ್ನಡದ ವಿಟ್ಲದಲ್ಲಿ, ಸಂಜೆ ನಾಲ್ಕುಗಂಟೆಗೆ ರಾಷ್ಟ್ರೀಯ ಪೌರತ್ವ ಕಾಯಿದೆ ಮತ್ತು ಎನ್ ಆರ್ ಸಿ ಯನ್ನು ಬೆಂಬಲಿಸಿ ಬೃಹತ್ ಸಮಾವೇಶವನ್ನು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳವು ಜಂಟಿಯಾಗಿ ಹಮ್ಮಿಕೊಂಡಿವೆ. ಸಮಾವೇಶದ ದಿಕ್ಸೂಚಿ ಭಾಷಣನ್ನು ಆರ್ ಎಸ್ ಎಸ್ ನೇತಾರ ಕಲ್ಲಡ್ಕ ಪ್ರಭಾಕರ ಭಟ್ಟರು ನೆರವೇರಿಸಲಿದ್ದಾರೆ.

ನಿಧಾನವಾಗಿ, ದೇಶಾದ್ಯಂತ ಮತ್ತು ದೇಶದ ಹೊರಗೆ ಕೂಡ, ಸಿ ಎ ಎ ಮತ್ತು ಎನ್ ಆರ್ ಸಿ ಯನ್ನು ಬೆಂಬಲಿಸಿ ಸಭೆ, ಸಮಾವೇಶಗಳು ಪ್ರಾರಂಭವಾಗುತ್ತಿವೆ.

ಅತ್ತ ಕಾಂಗ್ರೆಸ್ ಮತ್ತು ಮುಸ್ಲಿಂ ಸಂಘಟನೆಗಳು ನಡೆಸುವ ಹಿಂಸಾತ್ಮಕ ಹೋರಾಟಕ್ಕೆ ಪ್ರತಿಕ್ರಿಯೆಯಾಗೋ ಎಂಬಂತೆ ಬಲಪಂತೀಯ ಸಂಘಟನೆಗಳು ತಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತಿವೆ.
ಅಲ್ಲದೆ, ಈ ಕಾಯ್ದೆಗಳ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ಹೋಗಲಾಡಿಸುವ ಪ್ರಯತ್ನ ದೇಶಾದ್ಯಂತ ಮಾಧ್ಯಮಗಳು ಪ್ರಯತ್ನಿಸುತ್ತಿದ್ದರೂ, ಪ್ರತಿಭಟನೆ ರಾಜಕೀಯ ಸ್ವರೂಪ ಪಡೆದುಕೊಂಡ ಕಾರಣದಿಂದ ‘ ಸೆಟ್ಲ್ ‘ ಆಗುತ್ತಿಲ್ಲ.

ನಿನ್ನೆತಾನೆ, ಭಾರತೀಯ ಸಂಜಾತ ಅಮೆರಿಕನ್ನರು, ಅಮೆರಿಕಾದಲ್ಲಿ ಸಿ ಎ ಎ ಮತ್ತು ಎನ್ ಆರ್ ಸಿ ಯನ್ನು ಬೆಂಬಲಿಸಿ ಬೀದಿಗಿಳಿದಿದ್ದರು. ಕಾನೂನಿನ ಬಗ್ಗೆ ಇರುವ “ತಪ್ಪು ಅಭಿಪ್ರಾಯವನ್ನೇ ಮತ್ತು ಸುಳ್ಳನ್ನು” ಹೋಗಲಾಡಿಸಲು ನಡೆಸಿದ ಒಂದು ಪ್ರಯತ್ನ ಇದಾಗಿದೆ.

ಅಲ್ಲದೆ, 2021 ರಲ್ಲಿ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ನಡೆಸಲು ಸುಮಾರು 12,700 ಕೋಟಿಗಳನ್ನು ಭಾರತದ ಕೇಂದ್ರ ಸರಕಾರ ಅನುಮೋದಿಸಿದೆ ; ಮತ್ತು ಎನ್‌ಆರ್‌ಸಿ ವಿರುದ್ಧ ತೀವ್ರ ವಿರೋಧದ ನಡುವೆಯೂ ವಿವಾದಾತ್ಮಕ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ನರೇಂದ್ರಮೋದಿಯವರ ಸರಕಾರ ದೃಢ ಹೆಜ್ಜೆ ಇಟ್ಟಿದೆ.

ಆದರೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೂ ರಾಷ್ಟ್ರೀಯ ಪೌರತ್ವ ಕಾಯ್ದೆಗೂ ಯಾವುದೇ ಸಂಬಂಧವಿಲ್ಲವೆಂದು ಕೇಂದ್ರ ಸ್ಪಷ್ಟಪಡಿಸಿದೆ.

Leave A Reply

Your email address will not be published.