ರಾಹುಲ್ ಸಹಿತ ಕಾಂಗ್ರೆಸ್ ನ ಮುಂಚೂಣಿ ನಾಯಕರುಗಳು ಕಾಂಗ್ರೆಸ್ ಅನ್ನು ಮುಳುಗಿಸಲು ಕಂಕಣ ಬದ್ಧ

ಕಾಂಗ್ರೆಸ್ ಗೆ ಮತ್ತೆ ಮುಖಭಂಗವಾಗಿದೆ. ಮುಖ & ಮತ್ತೊಂದು ಭಂಗ ಆಗುವುದು ಕಾಂಗ್ರೆಸ್ ಗೆ ಹೊಸದಲ್ಲ. ದಿನಾ ಒಂದಲ್ಲಾ  ಒಂದು ವಿಷಯಗಳಲ್ಲಿ ಅನಾವಶ್ಯಕವಾಗಿ ತಲೆ ತೂರಿಸುವುದು ಅಥವಾ, ಮೂಗು ಹೊಕ್ಕಿಸುವುದು ಅಥವಾ ಕೈಯಾಡಿಸುವುದು ಮತ್ತು ಶೇಪ್ ಔಟ್ ಆಗುವುದು ಅದು ಕಾಂಗ್ರೆಸ್ ನ ದಿನ ನಿತ್ಯದ ದಿನಚರಿ. ಕಾಂಗ್ರೆಸ್ ಗೆ ಅದು ಬೆಳಿಗ್ಗೆ ನಾವು ಎದ್ದು ಮುಖ ತೊಳೆದು ಬ್ರಷ್ ಮಾಡುವಷ್ಟರಮಟ್ಟಿಗಿನ ದಿನನಿತ್ಯದ ದಿನಚರಿಯಾಗಿದೆ. ಈಗ ಅದಕ್ಕೊಂದು ಸೇರ್ಪಡೆ ಇವತ್ತಿನ ರಫೇಲ್ ಯುದ್ಧವಿಮಾನ ಖರೀದಿಯಲ್ಲಿ ನಡೆದಿದೆಯೆನ್ನಬಹುದಾದ ಅವ್ಯವಹಾರದ ವಿಷಯದಲ್ಲಿ.

 ರಫೇಲ್ ಯುದ್ಧ ವಿಮಾನ ಒಟ್ಟು 36 ಯುದ್ಧ ವಿಮಾನದ ಖರೀದಿ ಒಪ್ಪಂದವು ನಮ್ಮ ಭಾರತದ ಸರ್ಕಾರವು ಫ್ರಾನ್ಸ್ ನ ರಫೆಲ್ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಶನ್ ಜತೆ ಮಾಡಿಕೊಂಡ 38000 ಕೋಟಿ ರೂಪಾಯಿಗಳ ಒಪ್ಪಂದ. ಅದರಲ್ಲಿ ನರೇಂದ್ರಮೋದಿಯವರು ಹೆಚ್ಚು ಹಣ ತೆತ್ತು ರಫೇಲ್ ಖರೀದಿಸಿದ್ದಾರೆಂದು ದೂರಿ ಕೋರ್ಟು ಮೆಟ್ಟಲೇರಿತ್ತು ಕಾಂಗ್ರೆಸ್. ಆದರೆ ಆ ಕೇಸಿನಲ್ಲಿ ಏನೂ ಹುರುಳಿಲ್ಲವೆಂದು ಕಳೆದ ಡಿಸಂಬರ್ 2018 ರಂದು ಕೇಸನ್ನು ವಜಾ ಮಾಡಿತ್ತು. ಆದರೆ ಆ ತೀರ್ಪಿನ ಬಗ್ಗೆ ಸಮಾಧಾನವಿಲ್ಲದ ಕಾಂಗ್ರೆಸ್, ಮತ್ತೆ ಮೇಲ್ಮನವಿ ಸಲ್ಲಿಸಿತ್ತು. ಈಗ ತೀರ್ಪು ಹೊರಬಿದ್ದಿದೆ. ನರೇಂದ್ರ ಮೋದಿಗೆ ಸ್ಪಟಿಕ ಶುದ್ಧ ಚೀಟಿ ಕೊಟ್ಟು ಕಳಿಸಿದೆ ಕೋರ್ಟು.

ನರೇಂದ್ರ ಮೋದಿಯವರ ಮೇಲೆ ಎಫ್ಐಅರ್ ದಾಖಲಿಸುವಂತೆ ಕೇಳಿ ಸಲ್ಲಿಸಿದ ಅರ್ಜಿಯ ಮೇಲೆ ತೀರ್ಪಿತ್ತ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ಬೆಂಚ್ ” ಸಲ್ಲಿಕೆಯಾದ ಅರ್ಜಿಒಳ್ಳೆಯ ಉದ್ದೇಶದಿಂದ ಸಲ್ಲಿಕೆಯಾಗಿಲ್ಲ. ಅರ್ಜಿಯಲ್ಲಿ ಕೋರಿಕೊಂಡಂತೆ ಎಫ್ಐಅರ್ ಧಾಖಲಿಸಲು ಅಗತ್ಯವಾದ ಯಾವುದೇ ಒಂದು ಪೂರಕ ಸಾಕ್ಷ್ಯಗಳಿಲ್ಲ. ಈ ಅರ್ಜಿಯು ಮೆರಿಟ್ ಇಲ್ಲದ ಅರ್ಜಿಯಾಗಿದ್ದು, ಇದನ್ನು ವಜಾ ಮಾಡುತ್ತಿದ್ದೇವೆ” ಎಂದಿದೆ.

ರಫೇಲ್ ನಲ್ಲಿ ಮೋಸದಾಟ ನಡೆದಿದೆ ಎಂದು ಹಿರಿಯ (ಮಾಜಿ) ಬಿಜೆಪಿ ನಾಯಕ ಯಶವಂತ್ ಸಿನ್ಹಾ , ಅರುಣ್ ಶೌರಿ ಮತ್ತು ಪ್ರಶಾಂತ್ ಭೂಷಣ್ 2018 ರಲ್ಲೇ ಕೋರ್ಟು ಮೆಟ್ಟಲು ಹತ್ತಿದ್ದರು.ಆದರೆ ಅವರಿಗೆ ಮತ್ತೆ ಹಿನ್ನಡೆಯಾಗಿದೆ. ಹಿನ್ನಡೆ ಅಂತ ಕಾಂಗ್ರೆಸ್ ಅಂಡ್ ಟೀಮ್ ಅಂದುಕೊಳ್ಳಲ್ಲ. ಯಾಕೆಂದರೆ ಅದು ಕಾಂಗ್ರೆಸ್ !

ಮತ್ತೊಂದು ಕಡೆ ” ಚೌಕಿದಾರ್ ಚೋರ್ ಹೈ ” ಅಂತಂದು, ಸುಪ್ರೀಂ ಕೋರ್ಟೇ ‘ಚೌಕಿದಾರ್ ಚೋರ್’ ಅಂತ ಹೇಳಿದೆ ಎಂದು ರಾಹುಲ್ ಗಾಂಧಿ, ನರೇಂದ್ರ ಮೋದಿಯವರಿಗೆ ಆಪಾದನೆ ಮಾಡಿದ್ದರು. ಅದರ ಮೇಲೆ ಬಿಜೆಪಿಯ ಮೀನಾಕ್ಷಿ ಲೇಖಿಯವರು ಮಾನ ನಷ್ಟ ಮೊಕದ್ದಮೆ ಹಾಕಿದ್ದರು. ಆಗಲೇ, ಕೋರ್ಟು, ರಾಹುಲ್ ಗಾಂಧಿಯನ್ನು ಕರೆದು ಛೀಮಾರಿ ಹಾಕಿತ್ತು. ಆಗ ರಾಹುಲ್, ತಮ್ಮ್ ಅಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು. ಅಷ್ಟಕ್ಕೇ ಸುಮ್ಮನಾಗದ ಮೀನಾಕ್ಷಿ ಲೇಖಿಯವರು, ರಾಹುಲ್ ಕ್ಷಮೆಯಾಚಿಸಬೇಕೆಂದು ಕೋರ್ಟನ್ನು ಆಗ್ರಹಿಸಿದ್ದರು. ಅಂತೆಯೇ ಇವತ್ತು ಮತ್ತೊಮ್ಮೆಸುಪ್ರೀಂ ಕೋರ್ಟು ರಾಹುಲ್ ಗೆ ಚಾಟಿ ಬೀಸಿದೆ. ” ಮಾತಿನ ಮೇಲೆ ನಿಗಾ ಇಟ್ಟು ಮಾತಾಡಲಿ” ಎಂದಿದೆ.

ಒಟ್ಟಾರೆ ಹೇಳಬೇಕೆಂದರೆ, ರಾಹುಲ್ ಸಹಿತ ಕಾಂಗ್ರೆಸ್ ನ ಮುಂಚೂಣಿ ನಾಯಕರುಗಳು ಕಡೆಯತನಕ ಬಿಡುವುದಿಲ್ಲ. ಅವರು ಕಾಂಗ್ರೆಸ್ ಅನ್ನು ಮುಳುಗಿಸಿಯೇ ಹೋಗುವುದು. ‘ಕಾಂಗ್ರೆಸ್ ಮುಕ್ತ’ ಭಾರತ ಮಾಡಿಯೇ ಅವರು ಜಾಗ ಖಾಲಿಮಾಡುವುದು. ಮೊನ್ನೆ ನಮ್ಮ ಜನಾರ್ಧನ ಪೂಜಾರಿಯವರು ತಮ್ಮ ಎಂದಿನ ಮಂಗಳೂರು ಕನ್ನಡದಲ್ಲಿ ಮಾತಾಡುತ್ತಿದ್ದರು : ” ಈ ಸಿದ್ದರಾಮಯ್ಯ ಇದ್ದಾರಲ್ವಾ, ಅವರು ಸುಮ್ಮನೆ ಹಾಗೆ ಹೋಗುವುದಿಲ್ಲ, ಕಾಂಗ್ರೆಸ್ ಅನ್ನು ಅವರು ಮುಳುಗಿಸಿಯೇ ಹೋಗುವುದು, ಅದಂತೂ ಗ್ಯಾರಂಟಿ” ಎಂದು. ಹಲವಾರು ಮುಳುಗು ತಜ್ಞರು ಕಾಂಗ್ರೆಸ್ ನಲ್ಲಿದ್ದಾರೆ. ಹೀಗೇ ಮುಂದುವರೆದರೆ ಟಾರ್ಗೆಟ್ ಶೀಘ್ರದಲ್ಲಿ ಅಚೀವ್ ಆಗಲಿದೆ !          

Leave A Reply

Your email address will not be published.