ಬೆರೆಯದೇ ಹೋದರೆ ತೆರಬೇಕಾದೀತು ಬೆಲೆ, ಇದು ಬಿಗ್ ಬಾಸ್ ಸ್ವಾಮಿ

ಬಿಗ್ ಬಾಸ್ ಮೂರನೆಯ ವಾರದಲ್ಲಿ ಮತ್ತೊಂದು ಜೀವಿ ಬಿಗ್ ಬಾಸ್ ನ ಸ್ಲೈಡಿಂಗ್ ಡೋರಿನ ಒಳಗಿನಿಂದ ತೂರಿಕೊಂಡು ಹೊರಬಂದಿದೆ.
ಅವರು ದುನಿಯಾ ರಶ್ಮಿ. ಮೂಲತ: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನವರಾದ ರಶ್ಮಿಯವರು, ಕರಿ ಕೋಬ್ರಾ ವಿಜಯ್ ಜತೆ ಸೇರಿ ನಟಿಸಿದ ಮೊದಲ ಸಿನಿಮಾ, ಸೂರಿ ನಿರ್ದೇಶನದ ‘ ದುನಿಯಾ’ ಸೂಪರ್ ಹಿಟ್ ಆಗಿತ್ತು. ಆ ನಂತರ ಯಾವುದೇ ಹೇಳಿಕೊಳ್ಳುವ ಯಶಸ್ಸು ಆಕೆಗೆ ಸಿಗಲಿಲ್ಲ. ಈ ಮದ್ಯೆ ಅಕ್ಕ ತಂಗಿ, ಮಂದಾಕಿನಿ, ಮಂಡಕ್ಕಿ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರೂ ಅದು ಮಂಡಕ್ಕಿ ಥರ ಹಾಗೆ ಬಂದು ಹೀಗೆ ಖರ್ಚಾಗಿ ಹೋಯ್ತು.
ಮೂರನೆಯ ವಾರ, ಚಂದನ್ ಆಚಾರ್, ವಾಸುಕಿ ವೈಭವ್, ಪ್ರಿಯಾಂಕಾ, ರಾಜು ತಾಳಿಕೋಟೆ ಮತ್ತು ದುನಿಯಾ ರಶ್ಮಿ ನಾಮಿನೇಟ್ ಆಗಿದ್ದರು. ಆದರೆ ಶನಿವಾರದ ಹೊತ್ತಿಗೆ ದುನಿಯಾ ರಶ್ಮಿ ಮತ್ತು ಚಂದನ್ ಆಚಾರ್ ಇಬ್ಬರು ಉಳಿದುಕೊಂಡಿದ್ದರು. ನಿನ್ನೆ ಸೂಪರ್ ಸಂಡೇ ಕಿಚ್ಚ ಸುದೀಪನ ಜತೆ ನಡೆದ ಮಾತುಕತೆಯ ಕೊನೆಗೆ, ನಾನು ಯಾರನ್ನೂ ಮನೆಗೆ ಕಳಿಸದೇ ಹಾಗೆ ಬರಿಗೈಲಿ ಹೊರಟು ಹೋಗುತ್ತಿದ್ದೇನೆ ಎಂದು ಕಿಚ್ಚ ಹೊರಟು ಹೋದ. ದುನಿಯಾ ರಶ್ಮಿ ಮತ್ತು ಚಂದನ್ ಆಚಾರ್ ಗೆ ಒಂದು ವಾರ ಬಚಾವ್ ಆದ ಅನುಭವ. ಆದರೆ ಆ ಸಮಾಧಾನ ತುಂಬಾ ಹೊತ್ತು ಇರಲಿಲ್ಲ. ಈ ವಾರ ಹೇಗೋ ತಪ್ಪಿಸಿಕೊಂಡೆವು, ಬರುವ ವಾರದಲ್ಲಿ, ಈವರೆಗೆ ಮಾಡಿದ ತಪ್ಪುಗಳನ್ನೆಲ್ಲ ತಿದ್ದಿಕೊಂಡು ಮತ್ತೆ ಪುಟಿದೇಳಬೇಕು ಎನ್ನುವಷ್ಟರಲ್ಲಿ ಬಿಗ್ ಬಾಸ್ ಮನೆಯಲ್ಲಿ ಹೂಟರ್ ಸದ್ದಾಗಿದೆ. ಕೈಯಲ್ಲಿ ಒಂದು ಲಕೋಟೆ ಹಿಡಿದುಕೊಂಡು ಒಂದು ವಿಚಿತ್ರ ಜೀವಿ ಒಳಗೆ ನುಗ್ಗಿದೆ !
ಹೆಸರು ಪೃಥ್ವಿ. ಮಾಜೀ ಟೆನ್ನಿಸ್ ಪಟು ಮತ್ತು ಹಾಲೀ ರೇಡಿಯೋ ಜಾಕಿ. ಅದರೊಂದಿಗೆ ದುನಿಯಾ ರಶ್ಮಿ, ಮತ್ತೊಂದು ಬಾರಿ ಸಿನಿ ದುನಿಯಾಕ್ಕೆ ಪ್ರಬಲವಾಗಿ ಎಂಟ್ರಿ ಕೊಡಲು ಕಾಯುತ್ತಿದ್ದ ರಶ್ಮಿಗೆ, ಬಿಗ್ ಬಾಸ್ ನ ಮೂಲಕ ಶಕ್ತಿಪಡೆದುಕೊಳ್ಳಲು ನಡೆಸಿದ ಪ್ರಯತ್ನಕ್ಕೆ ಹಿನ್ನಡೆ ಆಗಿದೆ.
ವಾಟ್ಸ್ ರಾಂಗ್ ವಿಥ್ ಚಂದನ್ ಆಚಾರ್ & ರಶ್ಮಿ ?
ಚಂದನ್ ಆಚಾರ್ ಮೊದಲ ವಾರದಿಂದಲೇ ನಾಮಿನೇಟ್ ಆಗುತ್ತಾ ಬರುತ್ತಿದ್ದರೂ ಹೇಗೋ ಏನೋ ವೋಟರ್ಸ್ ಆತನನ್ನು ಉಳಿಸುತ್ತಿದ್ದಾರೆ. ಉಳಿದಂತೆ ವೀಕ್ ಆಗಿ ಕಾಣುತ್ತಿದ್ದ ರಾಜು ತಾಳಿಕೋಟೆಯವರನ್ನ ರಂಗಭೂಮಿ ಮತ್ತು ಉತ್ತರ ಕರ್ನಾಟಕ ಜನತೆ ಉಳಿಸಿದೆ. ಪ್ರಿಯಾಂಕಾ ಮತ್ತು ವಾಸುಕಿ ವೈಭವ್ ಇಬ್ಬರೂ ಸ್ಟ್ರಾಂಗ್ ಕಂಟೆಸ್ಟಂಟ್ಸ್.
ಚಂದನ್ ಆಚಾರ್ ನಾಮಿನೇಟ್ ಆಗಲು ಮತ್ತು ರಶ್ಮಿಹೊರ ಹೋಗಲು ಸ್ವತಃ ಕಾರಣ ಅವರ ಸ್ವಯಂಕೃತಾಪರಾಧ. ಬಿಗ್ ಬಾಸ್ ಮನೆಗೆ ಬರುವುದೇ, ಅಲ್ಲಿರುವ ವ್ಯಕ್ತಿತ್ವಗಳನ್ನು ಅರ್ಥಮಾಡಿಕೊಳ್ಳಲು, ಅಲ್ಲಿನ ಜನರೊಂದಿಗೆ ಬೆರೆಯಲು ಮತ್ತು ಒಂದು ಹೊಸ ಗುಂಪಿನೊಂದಿಗೆ ಸಮಬಾಳ್ವೆ ಮಾಡಲು. ಇವರಿಬ್ಬರೂ, ತಮ್ಮ ಕೆಲಸ ಆಯಿತು, ತಾವಾಯಿತು ಎಂಬಂತಿದ್ದರೆ, ಅದರಿಂದ ಏನುಪ್ರಯೋಗ. ಬಿಗ್ ಬಾಸ್ ನಡೆಸಲ್ಪಡುವ ಉದ್ದೇಶವೇ ಕಮರ್ಷಿಯಲ್ ಆದದ್ದು. ಶೋ ಅನ್ನು ತುಂಬಾ ಜನ ನೋಡಬೇಕು, ಚಾನೆಲ್ ಬೇರೆಯವರಿಗಿಂತ ಹೆಚ್ಚು ಪ್ರಚಾರಕ್ಕೆ ಬರ್ಬೇಕು ಮತ್ತು ಹೆಚ್ಚು ಆದಾಯದ ಜಾಹೀರಾತುಗಳು ಬರಬೇಕು ಮುಂತಾದ ಮೂಲಭೂತ ಅವಶ್ಯಕತೆಗಳ ಚೌಕಟ್ಟಿನಲ್ಲೇ ಈ ಎಂಟರ್ಟೈನ್ಮೆಂಟ್ ಶೋ ನಡೆಯುತ್ತಿರುವುದು. ಟಾಸ್ಕ್ ಮಾಡಿ, ಅತ್ತ ಹೋಗಿ ಮೂಲೆಯಲ್ಲಿ ಕೂತು ಬಿಟ್ಟರೆ ಏನುಪಯೋಗ ? ಇವರಿಬ್ಬರಿಗೂ ಅದೇ ಆಗಿದೆ. ನಿನ್ನೆ ಚಂದನ್ ಆಚಾರ್ ಗೆ ಒಂದು ಒಳ್ಳೆಯ ಸಜೆಶನ್ ಅನ್ನು ಹರೀಶ್ ರಾಜ್ ನೀಡಿದರೂ, ಅದರಲ್ಲಿ ತಪ್ಪು ಹುಡುಕುವ ಚಂದನ್ ಆಚಾರ್ ತುಂಬ ದಿನ ಬಿಗ್ ಬಾಸ್ ಮನೆಯಲ್ಲಿರುವುದಿಲ್ಲ. Attitude ಅನ್ನು ಬಿಗ್ ಬಾಸ್ ಸಹಿಸುವುದಿಲ್ಲ. ವೋಟರ್ಸ್ಗೆ ಮೊದಲೇ attitude ಅಂದ್ರೆ ಆಗಿಬರೋದಿಲ್ಲ.
ಇಟ್ಸ್ ದಿ ಟೈಮ್ ಚಂದನ್, ಟು ಪುಲ್ ಅಪ್ ಯುವರ್ ಸಾಕ್ಸ್. ಅಂಡ್ ಪುಶ್ ಔಟ್ ಯುವರ್ attitude.

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.